ಮಂಡ್ಯ: ಎಸ್ ಬಿಐ ಎಟಿಎಂ ಕದ್ದೊಯ್ದ ಕಳ್ಳರು
ಮಂಡ್ಯ, ಡಿಸೆಂಬರ್, 07 : ಕಾರು ಸಹಿತ ಎಟಿಎಂ ಯಂತ್ರವನ್ನು ಹೊತ್ತೊಯ್ದು ತೆಂಗಿನ ತೋಟವೊಂದರಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ನಾಗಮಂಗಲ ತಾಲೂಕಿನ ಗೋವಿಂದಘಟ್ಟ ಗ್ರಾಮದಲ್ಲಿ ಡಿಸೆಂಬರ್ 6ರ ಭಾನುವಾರ ಬೆಳಕಿಗೆ ಬಂದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಡಿಸೆಂಬರ್ 5ರ ಶನಿವಾರ ರಾತ್ರಿ ಬಂದ ಕಳ್ಳರ ತಂಡ ನಾಗಮಂಗಲದ ಬೆಳ್ಳೂರು ಕ್ರಾಸ್ ಸಮೀಪದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಎಟಿಎಂ ಯಂತ್ರವನ್ನು ಲಪಟಾಯಿಸಿದ್ದಾರೆ.[ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ]
ಹಣ ಕದಿಯಲು ಬಂದ ದರೋಡೆಕೋರರು ಎಸ್ ಬಿಐ ಎಟಿಎಂ ಯಂತ್ರವನ್ನು ಕಿತ್ತು ತೆಗೆದು ಬಳಿಕ ತಾವು ತಂದಿದ್ದ ಸ್ಕಾರ್ಪಿಯೊ ಕಾರಿಗೆ ವೈರಾಪ್ ತಂತಿಯಿಂದ ಬಿಗಿದು ಅಲ್ಲಿಂದ ಸಾಗಿಸಿದ್ದಾರೆ. ಸುಮಾರು ಎರಡು ಕಿಲೋ ಮೀಟರ್ ದೂರ ಸಾಗಿಸಿದ ಕಳ್ಳರು ಗೋವಿಂದಘಟ್ಟ ಗ್ರಾಮದ ರಾಮಕೃಷ್ಣೇಗೌಡ ಎಂಬುವರ ತೆಂಗಿನ ತೋಟದ ಬಳಿ ಕಾರನ್ನು ನಿಲ್ಲಿಸಿ ಎಟಿಎಂ ಯಂತ್ರವನ್ನು ಒಡೆದು ಅದರಿಂದ ಹಣವನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ.
ಹಣ ತೆಗೆಯಲು ಸಾಧ್ಯವಾಗದ ಕಾರಣ ಮತ್ತೆ ಅಲ್ಲಿಂದ ಸುರಕ್ಷಿತ ಜಾಗಕ್ಕೆ ತೆರಳಿ ಎಟಿಎಂನ್ನು ಒಡೆಯಲು ಆಲೋಚಿಸಿ ಕಾರನ್ನು ತೆಂಗಿನ ತೋಟದಿಂದ ಮತ್ತೆ ಹೆದ್ದಾರಿ ಕಡೆಗೆ ತಿರುಗಿಸಿದ್ದಾರೆ.[ತಮಿಳು ಸಿನಿಮಾ ನೋಡಿ ರಾಬರಿ ಮಾಡಿದವರು ಸಿಕ್ಕಿಬಿದ್ರು]
ಆಗ ಕಾರು ತೋಟದಲ್ಲಿ ಹೂತು ಕೊಂಡಿದ್ದರಿಂದ ಮುಂದೆ ಚಲಿಸಲು ಸಾದ್ಯವಾಗದೇ ತೆಗೆಯಲು ಹೆಣಗಾಡಿದ್ದಾರೆ. ಸಾಧ್ಯವಾಗದಿದ್ದಾಗ ಸಿಕ್ಕಿ ಬೀಳುವ ಭಯದಿಂದ ಕಾರು ಹಾಗೂ ಎಟಿಎಂ ಯಂತ್ರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಎಟಿಎಂ ದರೋಡೆಯಾಗಿರುವುದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು ಎಸ್ಬಿಐ ಎಟಿಎಂನ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಕುಮಾರ್ ಅವರು ಬೆಳ್ಳೂರು ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಗೋವಿಂದಘಟ್ಟ ಗ್ರಾಮದ ರಾಮಕೃಷ್ಣೇಗೌಡ ಅವರ ತೆಂಗಿನ ತೋಟದಲ್ಲಿ ಕಳವು ಮಾಡಲು ಬಳಸಿದ್ದ ಸ್ಕಾರ್ಪಿಯೋ ಕಾರು ಹಾಗೂ ಎಟಿಎಂ ಯಂತ್ರ ಇರುವುದು ತಿಳಿದು ಬಂದಿದೆ.[ಕಳ್ಳರ ಸಖ್ಯದಲ್ಲಿದ್ದ ಗಿರವಿ ಅಂಗಡಿ ಮಾಲೀಕ ಬಂಧನ]
ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ನಾಗಮಂಗಲ ಡಿವೈಎಸ್ ಪಿ ಜನಾರ್ದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು.