ಅಯೋಧ್ಯೆಗೆ ರಾಮನಗರದ ಬೆಳ್ಳಿ ಇಟ್ಟಿಗೆ, ಶಲ್ಯ, ರೇಷ್ಮೆ ಸೀರೆ ಕಾಣಿಕೆಯಾಗಿ ನೀಡಲಾಗುವುದು: ಅಶ್ವಥ್ ನಾರಾಯಣ
ಬೆಂಗಳೂರು, ಡಿಸೆಂಬರ್ 13: ಅಯೋಧ್ಯೆ ರಾಮಮಂದಿರದಿಂದ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸಿ ತಂದು ರಾಮನಗರ ಜಿಲ್ಲೆಯಲ್ಲಿ ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು. ಅದಕ್ಕು ಮುನ್ನ ಅಯೋಧ್ಯೆಗೆ ರಾಮನಗರದ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕೋಡುಗೆಯಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.
ಅಯೋಧ್ಯೆಗೆ ರಾಮನಗರ ಜಿಲ್ಲೆಯ ಭಕ್ತಿ ಸಮರ್ಪಣೆ ಕುರಿತು ಮಾತನಾಡಿದ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು, ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ರಾಮನಗರ ಜಿಲ್ಲೆಯ 150 ಮಂದಿಯ ತಂಡದೊಂದಿಗೆ ಬುಧವಾರ ತೆರಳಲಿದ್ದೇವೆ. ಮಂದಿರಕ್ಕೆ ರಾಮನಗರದ ಒಂದು ಬೆಳ್ಳಿ ಇಟ್ಟಿಗೆ, ಸ್ಥಳೀಯ ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕಾಣಿಕೆಯಾಗಿ ಕೊಡಲಾಗುತ್ತಿದೆ ಎಂದರು.
ರಾಮನಗರ ಜಿಲ್ಲೆ ರೇಷ್ಮೆಗೆ ಹೆಸರಾಗಿದೆ. ಹೀಗಾಗಿ ಸೀತಾದೇವಿಗೆ ಇಲ್ಲಿನ ರೇಷ್ಮೆ ಸೀರೆ, ರಾಮ ಮತ್ತು ಲಕ್ಷ್ಮಣರಿಗೆ ಶಲ್ಯ ಕೊಡಲಾಗುವುದು. ರಾಮನಗರದ ರಾಮಭಕ್ತರ ದೇಣಿಗೆಯಿಂದ ಖರೀದಿಸಿರುವ ಬೆಳ್ಳಿ ಇಟ್ಟಿಗೆಗೆ ರಾಮನಗರದ ರಾಮದೇವರ ಬೆಟ್ಟ ಮತ್ತು ಕೆಂಗಲ್ ಹನುಮಂತರಾಯನ ದೇಗುಲದಲ್ಲಿ ವಿಧಿಬದ್ಧವಾಗಿ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಆಯೋಧ್ಯೆ-ರಾಮದೇವರ ಬೆಟ್ಟಕ್ಕೆ ಪರಂಪರಾಗತ ಸಂಬಂಧ
ಮುಖ್ಯವಾಗಿ ರಾಮದೇವರ ಬೆಟ್ಟದ ತಾಣವಾದ ರಾಮನಗರ ಮತ್ತು ರಾಮನ ಮೂಲತಾಣ ಅಯೋಧ್ಯೆ ನಡುವೆ ಪರಂಪರಾಗತ ಸಂಬಂಧವಿದೆ. ಅಲ್ಲಿಂದಲೂ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ತಂದು, ಇಲ್ಲಿನ ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು. ಜತೆಗೆ ರಾಮದೇವರ ಬೆಟ್ಟವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಿ, ಆಕರ್ಷಕ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಶ್ರೀರಾಮ ನಮ್ಮ ಸನಾತನ ಸಂಸ್ಕೃತಿ ಮತ್ತು ಮೌಲ್ಯಗಳ ಮೂಲಪುರುಷ ಆಗಿದ್ದಾನೆ. ಸ್ಥಳೀಯರ ತಂಡದೊಂದಿಗೆ ತಾವೂ ತೆರಳುತ್ತಿದ್ದು, ಗುರುವಾರ ಅಯೋಧ್ಯೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಶಂಸಿಸಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.











Click it and Unblock the Notifications