ಪರಿವರ್ತನಾ ಯಾತ್ರೆಗೆ ಎಸ್.ಎಂ.ಕೃಷ್ಣ ಗೈರಾಗಿದ್ದೇಕೆ?
Recommended Video

ಬೆಂಗಳೂರು, ಡಿಸೆಂಬರ್. 11 : ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಂಗಳೂರಿನಲ್ಲಿ ನಡೆದ 'ನವ ಕರ್ನಾಟಕ ಪರಿವರ್ತನಾ ಯಾತ್ರೆ'ಗೆ ಗೈರು ಹಾಜರಾಗಿದ್ದರು. ಕೃಷ್ಣ ಅವರ ಗೈರು ಹಾಜರಿ ಕುತೂಹಲಕ್ಕೆ ಕಾರಣವಾಗಿದೆ.
2017ರ ಮಾರ್ಚ್ನಲ್ಲಿ ಎಸ್.ಎಂ.ಕೃಷ್ಣ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅವರು ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ.
ಅಮಿತ್ ಶಾ ಎರಡು ದಿನಗಳ ಕಾಲ ಕರ್ನಾಟಕಕ್ಕೆ ಬಂದಿದ್ದಾಗ ಎಸ್.ಎಂ.ಕೃಷ್ಣ ಪಕ್ಷದ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ನ.2ರಂದು ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಭಾನುವಾರ ನಡೆದ ಪರಿವರ್ತನಾ ಯಾತ್ರೆಗೂ ಅವರು ಗೈರಾದರು.
ಕೃಷ್ಣ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಳೆದ ವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳ ವಿವಾಹ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಯಡಿಯೂರಪ್ಪ ಅವರ ಪಕ್ಕದಲ್ಲಿಯೇ ಕುಳಿತಿದ್ದರು....

ಪರಿವರ್ತನಾ ಯಾತ್ರೆಗೆ ಆಹ್ವಾನಿಸಿದ್ದರು
ಬೆಂಗಳೂರಿನ ಜೆ. ಪಿ.ನಗರದಲ್ಲಿ ಭಾನುವಾರ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಿತು. ಮಾಜಿ ಸಚಿವ ಆರ್.ಅಶೋಕ್ ಅವರು ಶನಿವಾರ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಯಾತ್ರೆಗೆ ಬರುವಂತೆ ಆಹ್ವಾನಿಸಿದ್ದರು. ಆದರೂ, ಎಸ್.ಎಂ.ಕೃಷ್ಣ ಆಗಮಿಸಲಿಲ್ಲ.

ಎಸ್.ಎಂ.ಕೃಷ್ಣ ಸ್ಥಾನವೇನು?
ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಮಿತಿಯನ್ನು ರಚನೆ ಮಾಡಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಸಂಚಾಲಕರಾಗಿರುವ ಆಧುನಿಕ ಪ್ರಚಾರ ತಂಡದಲ್ಲಿ ಎಸ್.ಎಂ. ಕೃಷ್ಣ ಅವರು ಇದ್ದಾರೆ.

ಬಿಜೆಪಿ ಸೇರಿದ ಬಳಿಕ ಕೃಷ್ಣ ಮೌನ
ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದ ಎಸ್.ಎ.ಕೃಷ್ಣ ಬಿಜೆಪಿ ಸೇರಿದ್ದರು. ಆದರೆ, ಬಿಜೆಪಿ ಸೇರಿದ ಮೇಲೆ ಅವರು ಮೌನವಾಗಿದ್ದಾರೆ. ಪಕ್ಷದ ವೇದಿಕೆಯಲ್ಲೂ ಕಾಣಿಸಿಕೊಳ್ಳುವುದು ಕಡಿಮೆ.

ಐಟಿ ದಾಳಿ ಬಳಿಕ ಕಾಣಿಸಿಕೊಂಡಿಲ್ಲ
ಸೆಪ್ಟೆಂಬರ್ನಲ್ಲಿ ಎಸ್.ಎಂ.ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಅವರ ಕಚೇರಿ, ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿಯ ಬಳಿಕ ಎಸ್.ಎಂ.ಕೃಷ್ಣ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷದ ಸಮಾರಂಭದಿಂದಲೂ ದೂರ ಉಳಿಸಿದ್ದಾರೆ.

ತವರು ಕ್ಷೇತ್ರದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರಾ?
ಜನವರಿಯಲ್ಲಿ ಎಸ್.ಎಂ.ಕೃಷ್ಣ ತವರು ಜಿಲ್ಲೆ ಮಂಡ್ಯದಲ್ಲಿ ಬಿಜೆಪಿ ಪರಿವರ್ತನಾಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಕೃಷ್ಣ ಅವರು ಭಾಗವಹಿಸಲಿದ್ದಾರೆಯೇ? ಕಾದು ನೋಡಬೇಕು.












Click it and Unblock the Notifications