ಸಿದ್ದರಾಮಯ್ಯಗೆ ಕೃಷ್ಣ, ಹರಿಪ್ರಸಾದ್ ಏಟು, ತಿರುಗೇಟು
ಬೆಂಗಳೂರು, ಆಗಸ್ಟ್ 21 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನ ಗುರುವಾರ ಬಹಿರಂಗಗೊಂಡಿದೆ. ಬಿಬಿಎಂಪಿ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಪಕ್ಷದ ನಾಯಕರು ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಇದಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಮೇಲುನೋಟಕ್ಕೆ ಕಂಡುಬಂದರೂ ನಾಯಕರ ಮಾತಿನಲ್ಲಿ ಅದು ವ್ಯಕ್ತವಾಗುತ್ತಿಲ್ಲ. ಪಕ್ಷದ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಹಾಗೂ ಬಿ.ಕೆ.ಹರಿಪ್ರಸಾದ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. [ಶಾಸಕರು ಬಯಸಿದರೆ ಕರ್ನಾಟಕ ರಾಜಕಾರಣಕ್ಕೆ ಮರಳುವೆ]
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಅರಸು ಜನ್ಮ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ. ಕೃಷ್ಣ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
'ನಾಯಕತ್ವ ಜನರ ಮಧ್ಯದಿಂದ ಬರಬೇಕೇ ಹೊರತು ಮೇಲಿನಿಂದ ಬಂದರೆ ಅದು ನಾಯಕತ್ವವಾಗಿ ಬೆಳೆಯುವುದಿಲ್ಲ' ಎಂದು ಮೈಸೂರಿನಲ್ಲಿ ಹೇಳುವ ಮೂಲಕ ಸಿದ್ದರಾಮಯ್ಯ ಅವರು ಈ ಎರಡೂ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಚಿತ್ರಗಳಲ್ಲಿ ನೋಡಿ ನಾಯಕರ ಹೇಳಿಕೆಗಳು.....
ಸಿದ್ದರಾಮಯ್ಯಗೆ ಪಾಠ ಮಾಡಿದ ಹಿರಿಯರು
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಅರಸು ಜನ್ಮ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರಿಗೆ ರಾಜಕೀಯದ ಪಾಠ ಹೇಳಿಕೊಟ್ಟರು.
ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಹೇಳಿದ್ದು
'ಅಧಿಕಾರ ನಡೆಸುವವರು 'ಅಹಂ ಬ್ರಹ್ಮಾಸ್ಮಿ' ರೀತಿಯಲ್ಲಿ ನಡೆದುಕೊಳ್ಳಬಾರದು. ಕಲಿಯಲು ಸಾಕಷ್ಟು ಇರುತ್ತದೆ. ನಾನು ಎಲ್ಲ ಕಲಿತಿದ್ದೇನೆ. ನನಗೆ ಎಲ್ಲವೂ ಗೊತ್ತಿದೆ ಎನ್ನುವ ಧೋರಣೆ ಆಡಳಿತ ನಡೆಸುವವರಿಗೆ ಮತ್ತು ರಾಜಕಾರಣಿಗಳಿಗೆ ಇರಬಾರದು. ಅಧಿಕಾರ ಸಿಕ್ಕ ತಕ್ಷಣ ಮತ್ತು ರಾಜ್ಯಭಾರ ಮಾಡುವಾಗ ಪ್ರತಿಯೊಂದು ವಿಷಯ ನನಗೆ ತಿಳಿದಿದೆ, ಯಾರನ್ನೂ ಕೇಳುವ ಅಗತ್ಯವಿಲ್ಲ ಅನ್ನುವ ಅಹಂ ಇರಬಾರದು' ಎಂದು ಎಸ್.ಎಂ.ಕೃಷ್ಣ ಹೇಳಿದರು.
ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದು
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, 'ಅಧಿಕಾರಕ್ಕೆ ಬರುವ ಮೊದಲು ಜಾತಿ ವ್ಯವಸ್ಥೆ, ಮೀಸಲಾತಿ, ಸಾಮಾಜಿಕ ನ್ಯಾಯ, ಸಮಾನತೆ ಎಂದು ಏನೆಲ್ಲಾ ಮಾತನಾಡುತ್ತಾರೆ. ಆದರೆ, ಅಧಿಕಾರ ಸಿಕ್ಕ ತಕ್ಷಣ ಅದನ್ನೆಲ್ಲ ಮರೆತು ತಮ್ಮ ಜಾತಿಗೆ ಮಾತ್ರ ಸಿಮೀತಗೊಂಡು ಬಿಡುತ್ತಾರೆ' ಎಂದು ಹೇಳಿದರು.
ಮೈಸೂರಿನಲ್ಲಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ಮೈಸೂರಿನಲ್ಲಿ ನಡೆದ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಈ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ. 'ಸಾಮಾಜಿಕ ನ್ಯಾಯ ರೂಪಿಸುವವರನ್ನು ಕೆಲವರು ಸಹಿಸುವುದಿಲ್ಲ. ಶೋಷಿತರು ನಾಯಕತ್ವ ವಹಿಸುವುದನ್ನು ಸಹಿಸುವುದಿಲ್ಲ. ನಾಯಕತ್ವ ಜನರ ಮಧ್ಯದಿಂದ ಬರಬೇಕೇ ಹೊರತು ಮೇಲಿನಿಂದ ಬಂದರೆ ಅದು ನಾಯಕತ್ವವಾಗಿ ಬೆಳೆಯುವುದಿಲ್ಲ' ಎಂದು ಹೇಳಿದರು.
ಪರ್ಯಾಯ ನಾಯಕತ್ವದ ಪ್ರಶ್ನೆ?
ಸಿದ್ದರಾಮಯ್ಯ ಅವರು ಅಧಿಕಾರವಹಿಸಿಕೊಂಡ ಬಳಿಕ ಮೂಲ ಕಾಂಗ್ರೆಸ್ನ ಕೆಲವು ನಾಯಕರು ಮೂಲೆ ಗುಂಪಾಗಿದ್ದಾರೆ ಎಂಬ ಆರೋಪಗಳಿವೆ. ಇಂತಹ ನಾಯಕರು ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿದ್ದಾರೆ. 'ನಾನು ರಾಜ್ಯ ರಾಜಕಾರಣಕ್ಕೆ ಬರುವಂತೆ ಬಯಸುತ್ತಿರುವ ಶಾಸಕರ ಪಟ್ಟಿ ಕೊಡಿ. ಶಾಸಕರು ಬಯಸಿದರೆ ನಾನು ರಾಜ್ಯ ರಾಜಕಾರಣಕ್ಕೆ ಹಿಂತಿರುಗುವೆ, ಆದರೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕೆಲವು ದಿನಗಳ ಹಿಂದೆ ಹೇಳಿದ್ದನ್ನು ನೆನಪುಮಾಡಿಕೊಳ್ಳಬಹುದಾಗಿದೆ.