ಲಾಟರಿ ಹಗರಣ : ಕುಮಾರಸ್ವಾಮಿ ಹೇಳುವುದೇನು?
ಬೆಂಗಳೂರು, ಮೇ 26 : 'ಅಕ್ರಮ ಲಾಟರಿ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕುವ ಯತ್ನವೂ ನಡೆದಿತ್ತು. ಆದ್ದರಿಂದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಪೊಲೀಸ್ ಅಧಿಕಾರಿಗಳಾದ ಅರುಣ್ ಚಕ್ರವರ್ತಿ, ಸುನಿಲ್ ಅಗರ್ವಾಲ್ ಅವರು ಸಹ ಲಾಟರಿ ಹಗರಣದಲ್ಲಿ ಭಾಗಿಯಾಗಿದ್ದಾರೆ' ಎಂದು ಬಾಂಬ್ ಸಿಡಿಸಿದರು.

'ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೇ ಪ್ರಭಾವಿ ಸಚಿವರು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಿಐಡಿ ತನಿಖೆ ನಡೆದರೆ ಹಗರಣ ಮುಚ್ಚಿ ಹೋಗುತ್ತದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದರು. [ಎಲ್ಲಿಯ ಅಕ್ರಮ ಲಾಟರಿ ದಂಧೆ, ಎಲ್ಲಿಯ ಡಿಕೆ ರವಿ ಸಾವು?]
ಪತ್ರಿಕಾಗೋಷ್ಠಿ ಮುಖ್ಯಾಂಶಗಳು
* 'ಲಾಟರಿ ದಂಧೆಯನ್ನು ಮುಚ್ಚಿಹಾಕುವ ಯತ್ನ ನಡೆದಿತ್ತು. ಇದಕ್ಕಾಗಿ 100 ಕೋಟಿ ರೂ.ಗಳ ಬೇಡಿಕೆ ಇಡಲಾಗಿತ್ತು. ಆಡಳಿತದಲ್ಲಿರುವ ಪ್ರಭಾವಿಗಳೊಬ್ಬರು ಈ ಬೇಡಿಕೆ ಇಟ್ಟಿದ್ದರು. ಪಾರಿರಾಜನ್ 10 ಕೋಟಿ ಕೊಡಲು ಒಪ್ಪಿದ್ದರು. ಆದ್ದರಿಂದ ವಿವರವಾದ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು'. [ಲಾಟರಿ ಹಗರಣ : ಗೃಹ ಸಚಿವ ಜಾರ್ಜ್ ಹೇಳುವುದೇನು?]
* 'ಸಿಐಡಿ ಬಂಧಿಸಿರುವ ಪಾರಿರಾಜನ್ ಸಣ್ಣ ಮೀನು. ಮೈಕಲ್, ಮಾರ್ಟಿನ್ ಎಂಬ ದೊಡ್ಡ ಮೀನುಗಳಿವೆ. ಇವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಸರ್ಕಾರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಜನರ ದಾರಿ ತಪ್ಪಿಸುತ್ತಿದೆ'.
* 'ಪೊಲೀಸ್ ಅಧಿಕಾರಿಗಳ ಜೊತೆ ಪ್ರಭಾವಿ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಸಿಐಡಿ ತನಿಖೆ ನಡೆದರೆ ಪ್ರಭಾವಿಗಳನ್ನು ರಕ್ಷಿಸಲಾಗುತ್ತದೆ. ಆದ್ದರಿಂದ ಸಿಬಿಐ ತನಿಖೆಯಾಗಬೇಕು'.
* 'ಹಗರಣದ ಬಗ್ಗೆ ಇರುವ ದಾಖಲೆಯನ್ನು ಸಿಐಡಿಗೆ ಕೊಡಿ ಎಂದು ಗೃಹ ಸಚಿವ ಜಾರ್ಜ್ ಹೇಳುತ್ತಾರೆ. ನಾನು ಸಿಐಡಿಗೆ ದಾಖಲೆಗಳನ್ನು ನೀಡುವುದಾದರೆ ಗೃಹ ಸಚಿವರು ಇರುವುದು ಏಕೆ?, ಅವರಿಗೆ ಸಲಹೆಗಾರರು ಏಕೆ ಬೇಕು?'.
* 'ಲಾಟರಿ ಹಗರಣದ ಬಗ್ಗೆ ಪ್ರಸ್ತಾಪಿಸಿದರೆ ಗೃಹ ಸಚಿವರು ಎಲುಬಿಲ್ಲದ ನಾಲಿಗೆ ಎನ್ನುತ್ತಾರೆ. ಯಾರ ನಾಲಿಗೆಗೂ ಎಲುಬಿಲ್ಲ ಗೃಹ ಸಚಿವ ಕೆ.ಜೆ ಜಾರ್ಜ್ಗೆ ಇರಬಹುದೇನೋ.'












Click it and Unblock the Notifications