ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?
ಬೆಂಗಳೂರು, ಅ.25 : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ಮೊದಲ ಬಾರಿಗೆ ರಾಮಕಥಾದ ಹೆಸರಿನಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿರುವ ಅವರು ಶ್ರೀಗಳ ಪರಿಚಯದಿಂದ ಹಿಡಿದು ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ.
ಗಾಯಕಿ ಪ್ರೇಮಲತಾ ಮತ್ತು ಅವರ ಪತಿ ದಿವಾಕರ್ ಶಾಸ್ತ್ರಿ ಅವರು ಪಬ್ಲಿಕ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ 'ಮಠ ಅಂದರೆ ಅದು ನಮ್ಮ ತವರು ಮನೆ ಎನ್ನುವ ಭಾವನೆ ನಮ್ಮಲ್ಲಿ ಬಂದಿತ್ತು, ಆದ್ದರಿಂದ ಮಠದ ಯಾವುದೇ ಕೆಲಸವಾದರೂ ಮನೆಯ ಕೆಲಸವೆಂದೇ ಭಾವಿಸಿ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದೆವು' ಎಂದು ಹೇಳಿದ್ದಾರೆ. ಸಂದರ್ಶನದ ಪ್ರಮುಖ ಅಂಶಗಳು ಇಲ್ಲಿವೆ
ಮಠ ಅಂದರೆ ತವರು : ಮೊದಲು ಶ್ರೀಗಳನ್ನು ಯಾವಾಗ ನೋಡಿದ್ದೇನೆ ಎಂಬ ಬಗ್ಗೆ ನೆನಪಿಲ್ಲ. ನಮ್ಮ ಕುಟುಂಬದ ಕಾರ್ಯಕ್ರಮಗಳಿಗೆ ನಮ್ಮ ಮನೆಗೆ ಶ್ರೀಗಳು ಬರುತ್ತಿದ್ದರು. ನಮ್ಮ ಕುಟುಂಬವು ಮಠದೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಮಠ ಅಂದರೆ ಅದು ನಮ್ಮ ತವರು ಮನೆ ಎನ್ನುವ ಭಾವನೆ ನಮ್ಮಲ್ಲಿತ್ತು. ಆದ್ದರಿಂದ ಮಠದ ಯಾವುದೇ ಕೆಲಸವಾದರೂ ಮನೆಯ ಕೆಲಸವೆಂದೇ ಭಾವಿಸಿ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದೆ ಎಂದು ಪ್ರೇಮಲತಾ ಹೇಳಿದ್ದಾರೆ.

ಗುರು ಶಾಪಕ್ಕೆ ಹೆದರುತ್ತಿದೆ : ರಾಮಕಥಾ ಆರಂಭವಾದಾಗ ಗಾಯಕ, ಗಾಯಕಿ ನೃತ್ಯಪಟುಗಳೊಂದಿಗೆ ಸಭೆ ನಡೆಸುವುದು ಸಾಮಾನ್ಯವಾಗಿತ್ತು. ಆದರೆ, ಬರಬರುತ್ತಾ ನನ್ನೊಂದಿಗೆ ಮಾತ್ರ ಸಭೆ ನಡೆಸುತ್ತಿದ್ದರು. ನನಗೆ ಏನು ಆಗುತ್ತಿದೆ ಎನ್ನುವುದು ಗೊತ್ತಾಗದೇ, ಗುರು ಶಾಪಕ್ಕೆ ಹೆದರಿ ಗುರುಗಳೊಂದಿಗೆ ಏಕಾಂತ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಪ್ರೇಮಲತಾ ಸಂದರ್ಶನದಲ್ಲಿ ತಿಳಿಸಿದ್ದಾರೆ. [ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು]
ದೌರ್ಜನ್ಯದಿಂದ ರೋಸಿ ಹೋಗಿದ್ದೇನೆ : ರಾಮಕಥಾದ ನೆಪದಲ್ಲಿ ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ನಾನು ರೋಸಿ ಹೋಗಿದ್ದೆ. ಆದ್ದರಿಂದ. ರಾಮಕಥಾಗೆ ಬರುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದೆ. ಆದರೆ, ಗುರುಗಳು ನಾನು ಬರಲೇಬೇಕೆಂದು ಅಪ್ಪಣೆ ಕೊಡಿಸಿದರು. ಆದರೆ ನಾನು ಭಾಗವಹಿಸುವುದಿಲ್ಲ ಎಂದು ಬೇರೆ ಗಾಯಕಿಯರನ್ನು ನಿಯೋಜಿಸಿ ಎಂದು ಸೂಚಿಸುತ್ತಿದ್ದೆ. [ಶ್ರೀ ಬೆಂಬಲಕ್ಕೆ ನಿಂತ ರಾಮಕಥಾ ಕಲಾವಿದರು]
ನನಗೆ ಕರೆ ಮಾಡುತ್ತಿದ್ದರು : ಪ್ರೇಮಲತಾ ಮಠಕ್ಕೆ ಬರಲು ನಿರಾಕರಿಸಿದಾಗ ನನಗೆ ಕರೆ ಮಾಡುತ್ತಿದ್ದರು ಎಂದು ದಿವಾಕರ್ ಶಾಸ್ತ್ರಿ ಅವರು ಹೇಳಿದ್ದಾರೆ. ನನಗೆ ನಿನ್ನ ಪತ್ನಿಯಿಂದ ಸಂಗೀತ ಕಲಿಯಬೇಕು. ನೀನೆ ಅವಳನ್ನು ಕಾರ್ಯಕ್ರಮಕ್ಕೆ ಹೋಗದಂತೆ ತಡೆಯುತ್ತಿದ್ದೀಯಾ. ನನಗೆ ಸಂಗೀತ ಕಲಿಯಬೇಕೆಂಬ ಮನಸ್ಸಾಗಿದೆ. ನಿನ್ನ ಪತ್ನಿಯೇ ನನಗೆ ಕಲಿಸಬೇಕು. ಆದ್ದರಿಂದ ಅವಳನ್ನು ನೀನು ಕಳುಹಿಸಬೇಕು ಎಂದಾಗ ಗುರು ಭಕ್ತಿಯಿಂದ ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದೆ ಎಂದು ದಿವಾಕರ್ ಶಾಸ್ತ್ರೀಗಳು ಹೇಳಿದ್ದಾರೆ.
ಹಣಕ್ಕಾಗಿ ಆರೋಪ ಮಾಡುತ್ತಿಲ್ಲ : ನಾವು ಹಣಕ್ಕಾಗಿ ಸ್ವಾಮೀಜಿಗಳ ವಿರುದ್ಧ ದೂರು ನೀಡಿದ್ದೇವೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಮಠಕ್ಕೆ ನಾವು ಲಕ್ಷಾಂತರ ರೂ. ಕಾಣಿಕೆ ನೀಡಿದ್ದೇವೆ. ಮಠಕ್ಕೆ ಹಣ ನೀಡುತ್ತೇವೆ ವಿನಾ ಮಠದ ತಟ್ಟೆಯಿಂದ ಹಣವನ್ನು ಇದುವರೆಗೂ ತೆಗೆದುಕೊಂಡಿಲ್ಲ. ಮುಂದೆಯೂ ತೆಗೆದುಕೊಳ್ಳುವುದಿಲ್ಲ ಎಂದು ದಂಪತಿಗಳು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾವನೊಂದಿಗೆ ಮೊದಲು ಹೇಳಿದೆ : ನನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೊದಲು ಭಾವನಿಗೆ ಪತ್ರದಲ್ಲಿ ತಿಳಿಸಿದೆ. ಅವರು ಧೈರ್ಯ ತುಂಬಿದ ಬಳಿಕ ಪತಿಯೊಂದಿಗೆ ಹೇಳಿದೆ. ಬಳಿಕ ವೃತ್ತಾಂತವನ್ನು ಮಕ್ಕಳೊಂದಿಗೆ ವಿವರವಾಗಿ ಹೇಳಿದೆ. 2010ರಿಂದ ರಾಮಕಥಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಪ್ರತಿ ರಾಮಕಥಾದ ಘಟನೆ ದಾಖಲೆ ಮಾಡಲು ಆರಂಭಿಸಿದ್ದೆವು. ನಾವು ತಯಾರಿ ನಡೆಸುತ್ತಿರುವುದನ್ನು ನೋಡಿ ಪೊಲೀಸರು ಮನೆಗೆ ಬಂದು ನಮ್ಮನ್ನು ಬಂಧಿಸಿದರು. [ದಿವಾಕರ ಶಾಸ್ತ್ರಿ ಸಹೋದರ ಶ್ಯಾಮ ಶಾಸ್ತ್ರಿ ಆತ್ಮಹತ್ಯೆ]
ಅದು ಆತ್ಮಹತ್ಯೆಯಲ್ಲ ನಿಗೂಢ ಸಾವು : ಶ್ಯಾಮ ಪ್ರಸಾದ್ ಶಾಸ್ತ್ರಿ ಅವರು ಮೃತಪಟ್ಟ ವಿಚಾರ ತಡವಾಗಿ ನಮಗೆ ತಿಳಿಯಿತು. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಅತ್ಯ ಸಂಸ್ಕಾರ ವಿಧಿವಿಧಾನಗಳನ್ನು ನಡೆಸಲು ನಮ್ಮ ಕುಟುಂಬದವರು ಪಾಲ್ಗೊಳ್ಳಲು ಸಾಧ್ಯವಾಗದ ವಿಚಾರ ಕೇಳಿ ನೋವಾಯಿತು. ಸ್ವಾಮೀಜಿಗಳ ವಿರುದ್ಧ ಪ್ರಕರಣ ದಾಖಲಿಸುವ ವಿಚಾರ ತಿಳಿದು ನಿವೃತ್ತ ಪೊಲೀಸ್ ಅಧಿಕಾರಿಗಳು, ಮಾಧ್ಯಮದವರು, ಮಠದ ಆಪ್ತರು ನಮ್ಮೊಂದಿಗೆ ಮಾತುಕತೆ ನಡೆಸಿ ಪ್ರಕರಣವನ್ನು ಕೈಬಿಡುವಂತೆ ಹೇಳಿದ್ದರು.
ಸತ್ಯಕ್ಕೆ ಜಯ ಸಿಗುತ್ತದೆ : ನಾವು ಕಾನೂನು ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ. ಸತ್ಯಕ್ಕೆ ಜಯವಾಗುತ್ತದೆ. ಯಾವುದೇ ವಿಚಾರಕ್ಕೂ ಪರ ವಿರೋಧ ಇರುತ್ತದೆ. ಆದರೆ, ಜನರು ಯಾವುದೇ ಅಂಧ ಶ್ರದ್ಧೆಗೆ ಒಳಗಾಗಬಾರದು. ಇಲ್ಲಿಯವರೆಗೂ ಅನ್ಯಾಯ ಸಹಿಸಿದ್ದೇವೆ. ಹೀಗಾಗಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನಮಗಿದೆ ಎಂದು ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಗಳು ಹೇಳಿದ್ದಾರೆ. [ಕೃಪೆ : ಪಬ್ಲಿಕ್ ಟಿವಿ]












Click it and Unblock the Notifications