ಕೆಎಂಎಫ್ ಅಧ್ಯಕ್ಷರಾಗಿ ಎಂ.ಪಿ ರವೀಂದ್ರ ನೇಮಕ
ಪ್ರತಿಷ್ಠಿತ ಕರ್ನಾಟಕ ಕೋ ಆಪರೇಟಿವ್ ಮಿಲ್ಕ್ ಫೆಡರೇಷನ್ (ಕೆಎಂಎಫ್) ಅಧ್ಯಕ್ಷರಾಗಿ ಹರಪ್ಪನ ಹಳ್ಳಿ ಶಾಸಕ ಎಂ.ಪಿ ರವೀಂದ್ರ ನೇಮಕವಾಗಿದ್ದಾರೆ.
ಬೆಂಗಳೂರು, ಮಾರ್ಚ್ 24: ಪ್ರತಿಷ್ಠಿತ ಕರ್ನಾಟಕ ಕೋ ಆಪರೇಟಿವ್ ಮಿಲ್ಕ್ ಫೆಡರೇಷನ್ (ಕೆಎಂಎಫ್) ಅಧ್ಯಕ್ಷರಾಗಿ ಹರಪ್ಪನ ಹಳ್ಳಿ ಶಾಸಕ ಎಂ.ಪಿ ರವೀಂದ್ರ ನೇಮಕವಾಗಿದ್ದಾರೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರವೀಂದ್ರ ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ನಾಳೆ ರವೀಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ವಿ ನಾಗರಾಜು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಂ.ಪಿ ರವೀಂದ್ರರನ್ನು ಆಯ್ಕೆ ಮಾಡಲಾಗಿದೆ. ಮೊದಲ ಎರಡು ವರ್ಷ ನಾಗರಾಜು ಮತ್ತೆ ಎರಡು ವರ್ಷ ಎಂ.ಪಿ ರವೀಂದ್ರ ಅಧ್ಯಕ್ಷರಾಗುವುದು ಎಂದು ತೀರ್ಮಾನವಾಗಿತ್ತು. ಆದರೆ ಅವಧಿಗೂ ಮುನ್ನ ನಾಗರಾಜು ರಾಜೀನಾಮೆ ನೀಡಿದ್ದರು.
ಹೈಕೋರ್ಟಿನಲ್ಲಿ ಭವಿಷ್ಯ
ನಾಳೆ ಕೆಎಂಎಫ್ ಆಡಳಿತ ಮಂಡಳಿ ಸಭೆ ನಡೆಯಲಿದೆ. ಇದರಲ್ಲಿ ನಾಗರಾಜು ರಾಜೀನಾಮೆ ಅಂಗೀಕಾರ ಮಾಡಿ ಎಂ.ಪಿ ರವೀಂದ್ರರನ್ನು ಉಳಿದ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಆದರೆ ನಾಗರಾಜು ರಾಜೀನಾಮೆ ಪ್ರಕರಣ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದೆ.
"ನಾಗರಾಜು ರಾಜೀನಾಮೆ ನೀಡಿಲ್ಲ. ಡಿ.ಕೆ ಶಿವಕುಮಾರ್ ಒತ್ತಡ ಹೇರಿ ತಮ್ಮ ಮನೆಗೆ ಕರೆಸಿ ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅದರಲ್ಲಿ ರಾಜೀನಾಮೆ ಪತ್ರವೂ ಇತ್ತು. ಹೀಗಾಗಿ ಶನಿವಾರ (ಮಾರ್ಚ್ 25) ರಂದು ಕರೆದಿರುವ ಕೆಎಂಎಫ್ ಆಡಳಿತ ಮಂಡಳಿ ಸಭೆಗೆ ತಡೆ ನೀಡಬೇಕು," ಎಂದು ನಾಗರಾಜು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಸಭೆಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ ಸಭೆಯ ನಿರ್ಣಯಗಳು ಹೈಕೋರ್ಟಿನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದೆ. ಹೀಗಾಗಿ ಸಿದ್ದರಾಮಯ್ಯ ಎಂ.ಪಿ ರವೀಂದ್ರರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಅವರ ಭವಿಷ್ಯ ಹೈಕೋರ್ಟ್ ಕೈಯಲ್ಲಿದೆ.












Click it and Unblock the Notifications