ಸಂಪುಟ ವಿಸ್ತರಣೆ: ಹೊಸದುರ್ಗ ಗೋವಿಂದಪ್ಪ ರೇಸಿನಲ್ಲಿ ಮುಂದೆ!
ಬೆಂಗಳೂರು, ಜುಲೈ 06: ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಮುಗಿದ ಬಳಿಕ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಜುಲೈ 17ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಹಾಗೂ ಜುಲೈ 20ರಂದು ಮತ ಎಣಿಕೆ ನಡೆಯಲಿದೆ. ಆಗಸ್ಟ್ 05ರಂದು ಉಪರಾಷ್ಟ್ರಪತಿ ಸ್ಥಾನದ ಭವಿಷ್ಯ ತಿಳಿಯಲಿದೆ.
ಈ ನಡುವೆ ರಾಜ್ಯ ಸಚಿವ ಸಂಪುಟ ಸ್ಥಾನಕ್ಕಾಗಿ ಕುರುಬ ಸಮುದಾಯದವರು ಭಾರಿ ಲಾಬಿ ಪ್ರಾರಂಭಿಸಿದ್ದಾರೆ. ವಿಡಿಯೋ ಪ್ರಕರಣದಿಂದ ಕ್ಲೀನ್ ಚಿಟ್ ಪಡೆದಿರುವ ಮಾಜಿ ಸಚಿವ ಎಚ್ ವೈ ಮೇಟಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕೂಡಾ ಒತ್ತಡ ಹೆಚ್ಚಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್ ನಾಯಕರ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕುರುಬ ಸಮುದಾಯದ ಬಿ.ಜಿ.ಗೋವಿಂದಪ್ಪ, ಶಿವಳ್ಳಿ, ವರ್ತೂರು ಪ್ರಕಾಶ್ ಮತ್ತಿತರರು ಬುಧವಾರ(ಜುಲೈ 05) ಸಂಜೆ ವೇಳೆ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹೊರ ಬಂದಿದ್ದಾರೆ.
ಈ ಹಿಂದೆ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಹೊಸಬರಿಗೆ ಸಚಿವ ಸ್ಥಾನ ನೀಡುವ ಸುಳಿವು ನೀಡಿದ ಸಿದ್ದರಾಮಯ್ಯ ಅವರು, ಯಾರಿಗೆ ಅದೃಷ್ಟ ಸಿಗಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬಿ.ಜಿ ಗೋವಿಂದಪ್ಪಗೆ ಅವಕಾಶ
ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದು ಕುರುಬ ಸಮುದಾಯಕ್ಕೆ, ಮತ್ತೊಂದು ಪರಿಶಿಷ್ಟ ಬಲಗೈ ಗೆ ಹಾಗೂ ಇನ್ನೊಂದನ್ನು ವೀರಶೈವ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ. ಇರುವ ಮೂರು ಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಲಾಬಿ ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಸಂಸದ ಚಂದ್ರಪ್ಪ, ಶಾಸಕರಾದ ಡಿ.ಸುಧಾಕರ್ ಮತ್ತಿತರರೊಂದಿಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ಸಿಗೆ ವರ್ತೂರು ಪ್ರಕಾಶ್?
ಪಕ್ಷೇತರ ಶಾಸಕರಾಗಿರುವ ವರ್ತೂರು ಪ್ರಕಾಶ್ ಕೂಡ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಆಸಕ್ತಿ ತೋರಿಸಿದ್ದು, ಕಳೆದ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಅನುಭವವಿರುವುದರಿಂದ ತಮಗೆ ಮತ್ತೊಂದು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಗೆ ಹತ್ತಿರವಾಗಿ ಈಗ ದೂರವುಳಿದಿರುವ ವರ್ತೂರ್ ಪ್ರಕಾಶ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ.
ಕುರುಬ ಸಮುದಾಯದಿಂದ ಯಾರು?
ಕುರುಬ ಸಮುದಾಯದಿಂದ ಮಂತ್ರಿಯಾಗಲು ಕುರುಬ ಸಮುದಾಯದ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರು ರೇಸಿನಲ್ಲಿದ್ದಾರೆ. ಮಾಜಿ ಸಚಿವ ಎಚ್ಎಂ ರೇವಣ್ಣ ಅವರಿಗೆ ಸ್ಥಾನ ಸಿಗುವ ಅವಕಾಶ ಹೆಚ್ಚಾಗಿದೆ. ರೇವಣ್ಣ ಹಾಗೂ ಬಿ.ಜಿ ಗೋವಿಂದಪ್ಪ ಇಬ್ಬರಿಗೂ ಸ್ಥಾನ ಸಿಕ್ಕರೂ ಅಚ್ಚರಿಯೇನಿಲ್ಲ ಎಂಬ ಸುದ್ದಿಯೂ ಇದೆ.
ಸಚಿವ ಭಾಗ್ಯ ಕೈತಪ್ಪಲಿದೆ
ವಿಡಿಯೋ ಹಗರಣದಲ್ಲಿ ಸಿಲುಕಿ ಕ್ಲೀನ್ ಚಿಟ್ ಪಡೆದಿರುವ ಮಾಜಿ ಅಬಕಾರಿ ಸಚಿವ ಎಚ್ ವೈ ಮೇಟಿ ಅವರನ್ನು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗಿದೆ. ಚುನಾವಣೆಯ ಮುಂದಿಟ್ಟುಕೊಂಡು ರಗಳೆ ಬೇಡ ಎಂದು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ದಲಿತ ಹಾಗೂ ವೀರಶೈವರಿಗೂ ಸ್ಥಾನ ಕಲ್ಪಿಸಬೇಕಾಗಿರುವುದರಿಂದ ಮೇಟಿ ಅವರಿಗೆ ಮತ್ತೆ ಸಚಿವ ಭಾಗ್ಯ ಕೈತಪ್ಪಲಿದೆ.
ರೋಷನ್ ಬೇಗ್ ಗೆ ಅವಕಾಶ
ಗೃಹ ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂಬುದೇ ದೊಡ್ಡ ತಲೆ ನೋವಿನ ಸಂಗತಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ಡಿ.ಕೆ. ಶಿವಕುಮಾರ್, ಹಿಂದಿನ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಪೈಕಿ ಒಬ್ಬರಿಗೆ ಗೃಹ ಖಾತೆ ಜವಾಬ್ದಾರಿ ನೀಡಲಾಗುತ್ತದೆ, ರೋಷನ್ ಬೇಗ್, ಯುಟಿ ಖಾದರ್ ಸೇರಿದಂತೆ ಮುಸ್ಲಿಂ ಸಮುದಾಯದ ಸಚಿವರಿಗೆ ಅವಕಾಶ ನೀಡುವ ತಂತ್ರಗಾರಿಕೆ ಬಗ್ಗೆ ಚರ್ಚೆ ಮುಂದುವರೆದಿದೆ. ಬೆಂಗಳೂರು ಉಸ್ತುವಾರಿ ಹಾಗೂ ಗೃಹ ಖಾತೆ ಬಗ್ಗೆ ಕುತೂಹಲ ಇದ್ದೆ ಇದೆ.