ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!
Recommended Video
ಬೆಂಗಳೂರು, ಜುಲೈ 18 : ಬಹುಮತ ಕಳೆದುಕೊಂಡಿರುವ ಕರ್ನಾಟಕ ಸರ್ಕಾರ ಇಂದೇ ಪತನವಾಗಲಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರವೇ ರಾಜೀನಾಮೆ ನೀಡಲಿದ್ದಾರೆ ಎಂಬ ಬಿಜೆಪಿ ಲೆಕ್ಕಾಚಾರ ತಪ್ಪಾಗಿದೆ...ಮಾಜಿ ಸಿಎಂ ಸಿದ್ದರಾಮಯ್ಯ ತಂತ್ರ ಬಿಜೆಪಿ ನಾಯಕರ ನಿರೀಕ್ಷೆ ಹುಸಿ ಮಾಡಿದೆ.
ಗದ್ದಲ, ಗಲಾಟೆ, ಆರೋಪ, ಪ್ರತ್ಯಾರೋಪ, ಕೂಗಾಟ, ಆಕ್ರೋಶಕ್ಕೆ ಕರ್ನಾಟಕ ವಿಧಾನಸಭೆ ಗುರುವಾರ ಸಾಕ್ಷಿಯಾಯಿತು. ವಿಶ್ವಾಸಮತಯಾಚನೆ ಚರ್ಚೆಯನ್ನು ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಶುಕ್ರವಾರಕ್ಕೆ ಮುಂದೂಡಿದರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಸನದಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರ ಬೆಳಗ್ಗೆ ವಿಶ್ವಾಸಮತ ನಿರ್ಣಯ ಮಂಡನೆ ಮಾಡಿ ಭಾಷಣ ಆರಂಭಿಸಿದರು. ಕೆಲವು ಹೊತ್ತಿನ ಬಳಿಕ ಭಾಷಣ ಆರಂಭಿಸಿದ ಸಿದ್ದರಾಮಯ್ಯ ಬಿಜೆಪಿಯ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿತು.
ಇಂದೇ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದ ಬಿಜೆಪಿಗೆ ಸಿದ್ದರಾಮಯ್ಯ ತಂತ್ರ ಅರ್ಥವಾಗಲೇ ಇಲ್ಲ. ಇದರಿಂದಾಗಿ ಸದನ ಶುಕ್ರವಾರಕ್ಕೆ ಮುಂದೂಡಲಾಯಿತು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಒಂದು ದಿನದ ಮಟ್ಟಿಗೆ ಉಳಿಯಿತು.

ಸಿದ್ದರಾಮಯ್ಯ ಮಾಡಿದ್ದೇನು?
ವಿಶ್ವಾಸಮತದ ಮೇಲೆ ಭಾಷಣ ಆರಂಭಿಸಿದ ಸಿದ್ದರಾಮಯ್ಯ, "ಶಾಸಕಾಂಗದ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಗೊಂದಲ ಇದೆ. ಇದು ಸ್ಪಷ್ಟವಾಗುವ ವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು" ಎಂದು ಹೇಳಿದರು.

ಹಲವು ಕಾಂಗ್ರೆಸ್ನ ಸದಸ್ಯರ ಭಾಷಣ
ಸಿದ್ದರಾಮಯ್ಯ ಎತ್ತಿದ ವಿಪ್ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಹಲವಾರು ಕಾಂಗ್ರೆಸ್ ಸದಸ್ಯರು ಮಾತನಾಡಿದರು. ಇದರಿಂದಾಗಿ ಚರ್ಚೆ ವಿಶ್ವಾಸಮತದಿಂದ ಸುಪ್ರೀಂಕೋರ್ಟ್ ತೀರ್ಪು, ಶಾಸಕರ ಅನರ್ಹತೆ ಬಗ್ಗೆ ಹೊರಳಿತು. ಇದು ಪ್ರತಿಪಕ್ಷ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಆದರೆ, ಈ ಬಗ್ಗೆ ವಿವರವಾದ ಚರ್ಚೆ ನಡೆಯಿತು.

ಅಡ್ವೊಕೇಟ್ ಜನರಲ್ ಸಲಹೆ
ವಿಪ್ ಗೊಂದಲದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ ಪ್ರಶ್ನೆ ಬಗ್ಗೆ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರ ಜೊತೆ ಸ್ಪೀಕರ್ ರಮೇಶ್ ಕುಮಾರ್ ಚರ್ಚೆ ನಡೆಸಿದರು. ಗೊಂದಲ ಬಗೆಹರಿಯುವ ತನಕ ವಿಶ್ವಾಸಮತಯಾಚನೆ ಮಾಡಬಹುದೇ? ಇಲ್ಲವೇ ಎಂದು ವಿವರವಾದ ಚರ್ಚೆ ನಡೆಸಿದರು.

ಇಂದೇ ವಿಶ್ವಾಸಮತ ಮುಗಿಸಿ
ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ, "ಇವತ್ತು 12 ಗಂಟೆವರೆಗೆ ಅವಕಾಶ ಮಾಡಿಕೊಡಿ. ಎಲ್ಲರಿಗೂ ಚರ್ಚೆಗೆ ಅವಕಾಶ ಕೊಡಿ. ಇವತ್ತಿನ ಕಲಾಪ ಇವತ್ತೇ ಮುಗಿಸಿ. ನಾವು ಹನ್ನೆರಡು ಗಂಟೆಯವರೆಗೆ ಕಾಯೋಕೆ ಸಿದ್ಧರಿದ್ದೇವೆ. ಇವತ್ತೇ ಮತಕ್ಕೆ ಹಾಕಲು ಅವಕಾಶ ಕೊಡಿ" ಎಂದು ಮನವಿ ಮಾಡಿದರು. ಆದರೆ, ಸದನದಲ್ಲಿ ಗಲಾಟೆ, ಗದ್ದಲ ಕೋಲಾಹಲಕ್ಕೆ ಕಾರಣವಾಗಿದ್ದರಿಂದ, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.












Click it and Unblock the Notifications