ಹಗರಣ ಮುಚ್ಚಿಹಾಕುವ ಯತ್ನವೇ? ಸಿಎಂ ರಾಜೀನಾಮೆಯೇ?: ರಾಹುಲ್ ಗಾಂಧಿಗೆ ಸಿ.ಎನ್.ಅಶ್ವತ್ಥನಾರಾಯಣ್ ಪ್ರಶ್ನೆ
ಬೆಂಗಳೂರು,ಜೂನ್ 07: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಅವ್ಯವಹಾರ ಹಗರಣವನ್ನು ಮುಚ್ಚಿ ಹಾಕಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲು ರಾಹುಲ್ ಗಾಂಧಿಯವರು ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದಾರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರಕಾರವಿದು. ನೀವು ಈ ಸರಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಕೇಳಿದರು.

ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ರಾಜೀನಾಮೆಯೇ? ಪಕ್ಷದಿಂದ ಉಚ್ಚಾಟಿಸುವಿರಾ? ಅವರನ್ನು ಬಂಧಿಸುವಿರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.
ಹಗರಣರಡಿ ದೊಡ್ಡ ಜಾಲ ಇದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ ಎಂದು ಟೀಕಿಸಿದರು. ಅವರ ಬಂಧನ ಆಗಬೇಕಿತ್ತು. ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದು ವ್ಯಂಗ್ಯವಾಗಿ ತಿಳಿಸಿದರು.
ರಾಜ್ಯದ ಇಡೀ ಕಾಂಗ್ರೆಸ್ ಸರಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ, ಸಾಕ್ಷಿ ನಾಶಕ್ಕೆ ನಿಮ್ಮಲ್ಲಿ ಏನು ಉತ್ತರ ಇದೆ ಎಂದೂ ಅವರು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳಿಗೆ ಕಿಂಚಿತ್ತು ನೈತಿಕತೆ, ಮೌಲ್ಯ ಇದ್ದರೆ, ಏನಾದರೂ ನಿಮ್ಮ ಅನುಭವಕ್ಕೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಿ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು. ನಿಮ್ಮ ಇಲಾಖೆಯಡಿ ಹಗರಣ ಆಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಎಲ್ಲರ ಭಾಗಿತ್ವ, ಸರಕಾರದ ಸಹಮತ ಇಲ್ಲದೆ, ಎಲ್ಲರ ಗಮನಕ್ಕೆ ಬಾರದೆ ರಾಜ್ಯ ಖಜಾನೆಯಿಂದ ಹಣ ವರ್ಗಾವಣೆ ಮಾಡಲು ಹೇಗೆ ಸಾಧ್ಯ? ಮುಖ್ಯ ಲೆಕ್ಕಾಧಿಕಾರಿ ಪರಶುರಾಂ ಅವರು ತಮ್ಮ ಅಫಿಡವಿಟ್ನಲ್ಲಿ ಸಾಕ್ಷಿ ನಾಶ ಆಗದಂತೆ ನೋಡಿಕೊಳ್ಳಲು ಕೋರಿದ್ದಾರೆ. ಮೇ 25 ನೇ ತಾರೀಕು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೊಠಡಿಯಲ್ಲಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ- ಶಾಸಕ ಬಸವನಗೌಡ ದದ್ದಲ್ ಜೊತೆ ಈ ಪ್ರಕರಣದ ಚರ್ಚೆ ನಡೆದಿದೆ. ಆದ್ದರಿಂದ ಆ ಸಭೆಯ ಸಿಸಿ ಟಿವಿ ಫೂಟೇಜ್ ಅನ್ನು ಸಂರಕ್ಷಿಸಿ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ದದ್ದಲ್ ಎಂಬ ಈ ಮಹಾಪುರುಷರು ಪರಿಶಿಷ್ಟ ಪಂಗಡದ ಶಾಸಕರು. ಈ ಜನರ ರಕ್ಷಣೆ, ಪ್ರತಿನಿಧಿತ್ವ, ಸಬಲೀಕರಣ, ಅಭಿವೃದ್ಧಿಗಾಗಿ ಡಾ. ಅಂಬೇಡ್ಕರರು ಮೀಸಲಾತಿ ಕೊಟ್ಟಿದ್ದಾರೆ. ಆ ಜನಾಂಗಕ್ಕೆ ಸೇರಿ, ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಎಂಥ ದ್ರೋಹ ಬಗೆಯುತ್ತಿದ್ದಾರೆ? ನಾಗೇಂದ್ರ, ದದ್ದಲ್ ಅವರು ಜನಾಂಗದ ದುಡ್ಡನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇವರು ಕಮೀಷನ್ ಪಡೀತಾರೆ. ನೇರವಾಗಿ ಖಜಾನೆಯಿಂದ ಲೂಟಿ ಹೊಡೀತಾರೆ. ಆರ್ಥಿಕ ಸಚಿವರಾದ ಸಿದ್ದರಾಮಯ್ಯನವರ ಧ್ವನಿಯೇ ಹೊರಟು ಹೋಗಿದೆ. ಎಲ್ಲೂ ಅವರು ಕಾಣುತ್ತಿಲ್ಲ ಎಂದು ತಿಳಿಸಿದರು. ದೇಶಾನೇ ಬರ್ಕೊಟ್ಟವ್ರ ಹಂಗೆ ರಾಜೀನಾಮೆ ಕೊಡುತ್ತಿದ್ದಾರೆ ಎಂದು ಅವರು ರಾಜೀನಾಮೆಗೆ ಸಂಬಂಧಿಸಿದ ಫೋಟೊವನ್ನು ಪ್ರದರ್ಶಿಸಿದರು. ಪಾಪ ಎಲ್ಲರೂ ಏನು ದುಃಖದಲ್ಲಿದ್ದಾರೆ ನೋಡಿ ಎಂದು ತಿಳಿಸಿದರು.











Click it and Unblock the Notifications