ಚೆಕ್ಮೂಲಕ ಕಿಕ್ಬ್ಯಾಕ್ ಪಡೆದ ಅರೋಪ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು
ಬೆಂಗಳೂರು, ನ.2: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿಂದೆ ಮಖ್ಯಮಂತ್ರಿಯಾಗಿದ್ದ ವೇಳೆ ಚೆಕ್ ಮೂಲಕ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್. ಆರ್. ರಮೇಶ್ ಲೋಕಾಯುಕ್ತದಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಮ್ಮ ಆಪ್ತ L. ವಿವೇಕಾನಂದ ಅವರಿಂದ ರೂ. 1,30,00,000 ರೂ.ಗಳನ್ನು ಚೆಕ್ ಮೂಲಕ ಮೂಲಕ ಪಡೆದುಕೊಂಡು, ಅವರನ್ನು ಬೆಂಗಳೂರು ಟರ್ಫ್ ಕ್ಲಬ್ನ ಅತ್ಯಂತ ಆಯಕಟ್ಟಿನ Steward (ಉಸ್ತುವಾರಿ) ಸ್ಥಾನ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಸ್ಥಾನಗಳಿಗೆ 03 ವರ್ಷಗಳ ಅವಧಿಗೆ ನೇಮಕ ಮಾಡುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಿದ್ಧರಾಮಯ್ಯ ಭ್ರಷ್ಟಾಚಾರದ ಪಿತಾಮಹ ಎಂದ ಸಚಿವ ಸುನೀಲ್ ಕುಮಾರ್
ಸಾರ್ವಜನಿಕ ಜೀವನದಲ್ಲಿ ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ತಮ್ಮ ಸಂಬಂಧಿಕರಿಗೆ / ಆತ್ಮೀಯರಿಗೆ ಲಾಭದಾಯಕ ಹುದ್ದೆಗಳಿಗೆ ಶಿಫಾರಸ್ಸು ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿರುತ್ತದೆ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ತಮ್ಮ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಒಪ್ಪಿಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ನನ್ನ ಆತ್ಮೀಯ ಗೆಳೆಯನಾಗಿರುವ ಎಲ್.ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್ ಕ್ಲಬ್ನ ಉಸ್ತುವಾರಿ ಮತ್ತು ವ್ಯವಸ್ಥಾಪನಾ ಸಮಿತಿ ಸ್ಥಾನಗಳಿಗೆ ನೇಮಕ ಮಾಡಿದ್ದೆ ಎಂದು ಒಪ್ಪಿಕೊಂಡಿರುತ್ತಾರೆ. ಅಲ್ಲದೇ ನಿವೇಶನ ಕೊಂಡುಕೊಳ್ಳಲು ವಿವೇಕಾನಂದ ಅವರಿಂದ 130 ಕೋಟಿ ಹಣವನ್ನು ಚೆಕ್ ಮೂಲಕ ಸಾಲವನ್ನಾಗಿ ಪಡೆದುಕೊಂಡಿದ್ದು, ಅದನ್ನು ಈವರೆವಿಗೂ ವಾಪಸ್ಸು ನೀಡಿಲ್ಲ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಕಾಯ್ದೆ 1968 ಮತ್ತು ಮತ್ತು ಆರ್ಟಿಕಲ್ 62ರ ಲಿಮಿಟೇಷನ್ ಆಕ್ಟ್ ನಿಯಮಗಳಂತೆ ಯಾವುದೇ ವ್ಯಕ್ತಿಯು ತಾನು ಸಾಲ ಕೊಟ್ಟಿರುವ ವ್ಯಕ್ತಿಯಿಂದ ತಾನು ನೀಡಿರುವ ಸಾಲವನ್ನು ಮೂರು ವರ್ಷಗಳವರೆಗೆ ವಾಪಸ್ಸು ಪಡೆಯದಿದ್ದರೆ, ಸಾಲ ಕೊಟ್ಟ ವ್ಯಕ್ತಿಗೆ ತಾನು ನೀಡಿರುವ ಸಾಲವನ್ನು ಮೂರು ವರ್ಷಗಳ ನಂತರ ವಾಪಸ್ಸು ಕೇಳುವ ಹಕ್ಕು ಇರುವುದಿಲ್ಲ. ಈಗಾಗಲೇ ವಿವೇಕಾನಂದ ಅವರಿಂದ ಸಾಲ ಪಡೆದು 7 ವರ್ಷಗಳೇ ಮುಗಿದು ಹೋಗಿರುವ ಕಾರಣ ಮೇಲೆ ತಿಳಿಸಿರುವ ನಿಯಮಗಳಂತೆ ಸಿದ್ಧರಾಮಯ್ಯನವರು ತಾವು ಪಡೆದಿದ್ದ ಸಾಲವನ್ನು ಹಿಂತಿರುಗಿಸಲೇಬೇಕೆಂಬ ಜರೂರತ್ತು ಇರುವುದಿಲ್ಲ.
ಹೀಗಿದ್ದಾಗ ಸಿದ್ಧರಾಮಯ್ಯನವರು ವಿವೇಕಾನಂದ ಅವರಿಂದ ಪಡೆದ ಹಣ ಕಿಕ್ಬ್ಯಾಕ್ ಅಲ್ಲದೇ ಮತ್ತೇನು ಎಂಬ ವಿಷಯಗಳನ್ನೂ ಸಹ ಲೋಕಾಯುಕ್ತರ ಗಮನಕ್ಕೆ ತರಲಾಗಿದೆ ಎಂದು ಎನ್ ಆರ್ ರಮೇಶ್ ವಿವರಿಸಿದ್ದಾರೆ.
ವಿವೇಕ್ ಬಳಿ ಸಾಲ ಪಡೆದದ್ದು ನಿಜ, ತನಿಖೆಯಾಗಲಿ:
ನಾನು ವಿವೇಕ ಅವರ ಬಳಿ ಒಂದೂವರೆ ಕೋಟಿ ಸಾಲ ಪಡೆದಿದ್ದು ನಿಜ. ಅದನ್ನು ಇನ್ನೂ ತೀರಿಸಿಲ್ಲ. ಅವರು ನನ್ನ 40 ವರ್ಷಗಳ ಗೆಳೆಯ. ನಿವೇಶನ ಖರೀದಿಗೆ ಸಾಲ ಮಾಡುವುದು ತಪ್ಪಾ? ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಆದರೆ, ಸಾಲ ಪಡೆದದ್ದಕ್ಕೂ ನೇಮಕ ಮಾಡಿದ್ದಕ್ಕೂ ಸಂಬಂಧ ಇಲ್ಲ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದನ್ನು ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಸಾಯುತ್ತಿದ್ದಾರೆ, ಇದರ ಬಗ್ಗೆ ತನಿಖೆ ಮಾಡಿಸಿ ಎಂದರೆ ಸಿದ್ದರಾಮಯ್ಯ ಸಾಲ ಪಡೆದಿದ್ದು ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಸಾಲ ಮಾಡುವುದು ಅಪರಾಧವಾ? ಎಂದು ಪ್ರಶ್ನಿಸಿದ್ದರು.