ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದೇನು?
ಬೆಂಗಳೂರು, ಜ.16 : ಸಂಕ್ರಾಂತಿ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಶನ್ ವಿವಾದ, ಸಂಪುಟ ವಿಸ್ತರಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಮುಂತಾದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ಅವರು ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಆರೋಪದ ಕುರಿತು ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದಾರೆ. [ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ]

ಸಂಪುಟ ವಿಸ್ತರಣೆ : ರಾಹುಲ್ ಗಾಂಧಿ ಅವರನ್ನು ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆ ನಡೆಯುವುದು ನಿಶ್ಚಿತ. ಆದರೆ ಅದಕ್ಕಿನ್ನೂ ಮುಹೂರ್ತ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಬಿಜೆಪಿ ಆರೋಪ ಆಧಾರ ರಹಿತ : ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿರುವ ವಿ.ಆರ್.ಸುದರ್ಶನ್ ಅವರ ವಿರುದ್ಧ ಬಿಜೆಪಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ. ಕೆಪಿಎಸ್ಸಿಯಲ್ಲಿ ರಾಜಕಾರಣಿಗಳು ಇರಬಾರದು ಎಂದೇನಿಲ್ಲ. ಆದರೆ, ರಾಜಕೀಯ ಮಾಡಬಾರದು ಎಂದು ಸಿಎಂ ಶಿಫಾರಸನ್ನು ಸಮರ್ಥಿಸಿಕೊಂಡರು. [ನಿವೇಶನ ಪಡೆದಿದ್ದು ಶಾಸಕನಾಗಿದ್ದರಿಂದ : ಸುದರ್ಶನ್]
ಡಿನೋಟಿಫಿಕೇಷನ್ ಮಾಡಿಲ್ಲ : ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಅರ್ಕಾವತಿ ಬಡಾವಣೆಯ ಒಂದು ಗುಂಟೆ ಭೂಮಿಯನ್ನೂ ಡಿನೋಟಿಫಿಕೇಶನ್ ಮಾಡಿಲ್ಲ. ಅವ್ಯವಹಾರ, ಡಿನೋಟಿಫಿಕೇಶನ್ ಎಲ್ಲಾ ಬಿಜೆಪಿ ಕಾಲದಲ್ಲಿ ನಡೆದಿದೆ. ಅವ್ಯವಹಾರದ ಲಾಭವನ್ನು ಬಿಜೆಪಿ ಪಡೆದಿದೆ ಎಂದು ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ದೆಹಲಿ ಭೇಟಿಯ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಹೊಸ ವರ್ಷ ಬಂದ ಮೇಲೆ ದೆಹಲಿಗೆ ಬಂದಿರಲಿಲ್ಲ. ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಹೊಸ ವರ್ಷ ಶುಭಾಶಯ ಹೇಳಲು ಆಗಮಿಸಿದ್ದೆ. ಈ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತು ಸಲಹೆ, ಸೂಚನೆಗಳನ್ನು ಪಡೆದಿದ್ದೇನೆ ಎಂದರು.












Click it and Unblock the Notifications