ಸಂಪುಟ ಪುನಾರಚನೆ, ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?
ಬೆಂಗಳೂರು, ಜೂನ್ 15 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆಗೆ ಈಗ ಕಾಲ ಕೂಡಿ ಬಂದಿದೆ. ಜೂನ್ 16ರಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಹೈಕಮಾಂಡ್ ನಾಯಕರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. [ಸಿದ್ದರಾಮಯ್ಯ ಸಂಪುಟ ಸೇರುವ ಅದೃಷ್ಟವಂತರು ಯಾರು?]
ಇಂದು ಎಲ್ಲರ ಕಣ್ಣು ವಿಧಾನಸೌಧದ ಮೇಲಿರಲಿದೆ. ಸಿದ್ದರಾಮಯ್ಯ ಅವರು ಬೆಳಗ್ಗೆ 10.30ಕ್ಕೆ ಮಂತ್ರಿ ಪರಿಷತ್ ಸಭೆ ಕರೆದಿದ್ದು, ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಿದ್ದಾರೆ. ಯಾರು ಸಂಪುಟದಿಂದ ಹೊರ ಹೋಗಲಿದ್ದಾರೆ? ಎಂಬುದು ಸದ್ಯದ ಕುತೂಹಲ. [ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]
2018ರಲ್ಲಿ ಚುನಾವಣೆ ಎದುರಾಗುವುದರಿಂದ ಸಚಿವ ಸ್ಥಾನ ಕಳೆದುಕೊಂಡವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಚಿಂತನೆ ವರಿಷ್ಠರದ್ದು. ಕೆಪಿಸಿಸಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕಾಗಿದೆ. ಆದ್ದರಿಂದ, ಸಂಪುಟದಿಂದ ಹೊರಬರುವ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯೂ ಇದೆ. ['ಸಚಿವ ಸಂಪುಟದಿಂದ ಕೈ ಬಿಟ್ಟರೂ ಸಂತೋಷ']
ಕೆಲಸ ಮಾಡದ, ವಿವಾದಗಳಿಗೆ ಸಿಲುಕಿರುವ 10 ಸಚಿವರನ್ನು ಸಂಪುಟದಿಂದ ಕೈಬಿಡಬಹುದು ಎನ್ನುವುದು ಸದ್ಯದ ಮಾಹಿತಿ. ಸಂಪುಟ ಸೇರಲು ಶಾಸಕರು ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹತ್ತು ಜನರನ್ನು ಕೈ ಬಿಟ್ಟರೆ ಹೊಸಬರನ್ನು ಕರೆತರಲಾಗುತ್ತದೆ. ಆದ್ದರಿಂದ, ಲಾಬಿ ಜೋರಾಗಿದೆ. ಯಾರನ್ನು ಸಂಪುಟದಿಂದ ಕೈಬಿಡಬಹುದು ಇಲ್ಲಿದೆ ಮಾಹಿತಿ.......['ಸಂಪುಟದಿಂದ ನನ್ನನ್ನು ಕೈ ಬಿಟ್ಟರೆ ಒಳ್ಳೆಯದು']
ಅಪ್ಪ ಹೊರಗೆ ಮಗ ಒಳಗೆ?
ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಸಚಿವರ ಆರೋಗ್ಯ ಸರಿ ಇಲ್ಲ, ವಯಸ್ಸಿನ ಆಧಾರದ ಮೇಲೆ ಶಾಮನೂರು ಅವರನ್ನು ಕೈ ಬಿಟ್ಟು, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಚಿಂಚನಸೂರು ಕೈ ಬಿಡಲಿದ್ದಾರೆ ಸಿದ್ದರಾಮಯ್ಯ
ಜವಳಿ ಸಚಿವ ಬಾಬೂರಾವ್ ಚಿಂಚನಸೂರು ಅವರು ಮಂತ್ರಿ ಪದವಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಕಾಮಗಾರಿಯ ಟೆಂಡರ್ ಮಂಜೂರು ಮಾಡಿಸಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪವನ್ನು ಸಚಿವರು ಎದುರಿಸುತ್ತಿದ್ದಾರೆ. ಸಚಿವರನ್ನು ಕೈ ಬಿಟ್ಟು ಅವರ ಜಾಗಕ್ಕೆ ಹೊಸಬರನ್ನು ತರುವ ಆಲೋಚನೆ ಇದೆ
ಕಿಮ್ಮನೆ ಬದಲು ಕಾಗೋಡು
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಗೆ ಆದ್ಯತೆ ಕೊಡಲು ಕಿಮ್ಮನೆ ಅವರ ಜಾಗಕ್ಕೆ ಕಾಗೋಡು ತಿಮ್ಮಪ್ಪ ಅವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದು ಸದ್ಯದ ಸುದ್ದಿ.
ಅಂಬರೀಶ್ ಸಂಪುಟದಿಂದ ಹೊರಕ್ಕೆ?
ವಸತಿ ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಈಗಾಗಲೇ 'ಸಚಿವ ಸಂಪುಟ ಪುನಾರಚನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಮುಂದುವರೆಸಿದರೂ ಸಂತೋಷ ಕೈ ಬಿಟ್ಟರೂ ಸಂತೋಷ. ಅಧಿಕಾರ ಶಾಶ್ವತವಲ್ಲ' ಎಂದು ಅಂಬರೀಶ್ ಹೇಳಿದ್ದಾರೆ.
ಪರಮೇಶ್ವರ ನಾಯಕ್ ಹೊರಕ್ಕೆ?
ಅನುಪಮಾ ಶೆಣೈ ರಾಜೀನಾಮೆ ವಿಚಾರದಲ್ಲಿ ಭಾರೀ ವಿವಾದಕ್ಕೆ ಸಿಲುಕಿರುವ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.
ಖಮರುಲ್ ಇಸ್ಲಾಂ ಕೈ ತಪ್ಪಲಿಗೆ ಸಚಿವ ಸ್ಥಾನ?
ತಮ್ಮ ಖಾತೆಯಲ್ಲಿ ಸರಿಯಾಗಿ ಕೆಲಸ ಮಾಡದ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಇಸ್ಲಾಂ ಅವರ ಬದಲು ಬೇರೆ ಅಲ್ಪ ಸಂಖ್ಯಾತ ನಾಯಕರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ.
ಸೊರಕೆ ಕೈ ತಪ್ಪಲಿದೆ ಸಚಿವ ಸ್ಥಾನ?
ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಭಾಗದ ಮೂವರು ಸಚಿವರು ಸಂಪುಟದಲ್ಲಿದ್ದಾರೆ. ಒಬ್ಬರನ್ನು ಕೈ ಬಿಟ್ಟು, ಬೇರೆ ಜಿಲ್ಲೆಯವರಿಗೆ ಆದ್ಯತೆ ನೀಡುವ ಲೆಕ್ಕಾಚಾರವಿದೆ.
ಸಿದ್ದರಾಮಯ್ಯ ಆಪ್ತ ಆಂಜನೇಯ ಸಂಪುಟದಿಂದ ಹೊರಕ್ಕೆ
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. 'ಸಚಿವ ಸಂಪುಟದಿಂದ ನನ್ನನ್ನು ಕೈ ಬಿಟ್ಟರೆ ಒಳ್ಳೆಯದು. ಪಕ್ಷ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಈಗಾಗಲೇ ಹಲವು ಬಾರಿ ಹೇಳಿದ್ದಾರೆ.
ಎಸ್.ಆರ್.ಪಾಟೀಲ್ ಅವರಿಗೆ ಅಧ್ಯಕ್ಷ ಪಟ್ಟ
ವಿಧಾನಪರಿಷತ್ ಸದಸ್ಯರಾದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಪಾಟೀಲ್ ಅವರ ಹೆಸರು ಕೇಳಿಬರುತ್ತಿದ್ದು, ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬುದು ಸದ್ಯದ ಮಾಹಿತಿ.
ಸತೀಶ್ ಜಾರಕಿಹೊಳಿ ಸಂಪುಟದಿಂದ ಹೊರಗೆ?
ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿ ಮಾಡಿದ್ದ ಸತೀಶ್ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿತ್ತು. ಜಾರಕಿಹೊಳಿ ಅವರ ನಿರೀಕ್ಷೆಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಗಿತ್ತು. ಆದರೆ, ಈಗ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.