ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ; ಮತ್ತೆ ಆರಂಭವಾದ ಚರ್ಚೆ!
ಬೆಂಗಳೂರು, ಸೆಪ್ಟೆಂಬರ್ 28; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಯಾವುದು?. ಹಾಲಿ ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಅವರು ಕ್ಷೇತ್ರ ಬದಲಾವಣೆ ಮಾಡುತ್ತಾರಾ?. ಈ ಬಗ್ಗೆ ಹಲವು ದಿನಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ.
ಕಳೆದ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸೋತು, ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪ್ರಯಾಸದ ಗೆಲುವು ಕಂಡಿದ್ದರು ಸಿದ್ದರಾಮಯ್ಯ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಬಾದಾಮಿಯಿಂದ ಕಣಕ್ಕಿಳಿಯಲ್ಲ ಎಂಬುದು ಚರ್ಚೆಯ ವಿಚಾರ. ಆದ್ದರಿಂದ ಪರ್ಯಾಯ ಕ್ಷೇತ್ರದ ಹುಡುಕಾಟ ನಡೆಯುತ್ತಿದೆ.
2023ಕ್ಕೆ ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ!
ಹುಣಸೂರು, ಚಾಮರಾಜಪೇಟೆ, ವರುಣಾದಿಂದ ಸಿದ್ದರಾಮಯ್ಯ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಸಾಗಿವೆ. ಹಲವಾರು ಶಾಸಕರು ತಮ್ಮ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಆಹ್ವಾನವನ್ನು ಸಹ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿಲ್ಲ.
ಮುಂದಿನ ಚುನಾವಣೆ: ಸಿದ್ದರಾಮಯ್ಯ ಬಹುತೇಕ ಇಲ್ಲಿಂದಲೇ ಸ್ಪರ್ಧೆ?
ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯುತ್ತಾರೆ ಎಂದು ಹಲವು ಬಾರಿ ಚರ್ಚೆಗಳು ನಡೆದಿವೆ. ಈಗ ಪುನಃ ಇದೇ ವಿಚಾರ ಚರ್ಚೆಗೆ ಬಂದಿದೆ. ಅದರಲ್ಲೂ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂಬುದು ಸದ್ಯದ ವಿಷಯ. ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನು ಅಂತಿಮಗೊಳಿಸುತ್ತಾರೆಯೇ? ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿರುವ ವಿಚಾರವಾಗಿದೆ.
2023ರ ಚುನಾವಣೆ; ಸಿದ್ದರಾಮಯ್ಯ, ಮಾಧುಸ್ವಾಮಿ ಎದುರಾಳಿಗಳು?
ಆಪ್ತವಲಯದಲ್ಲಿ ಈ ಕುರಿತು ಚರ್ಚೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಅವರು ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿವೆ. ಜೊತೆಗೆ ಕೋಲಾರ ಭಾಗದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಹಬ್ಬಿವೆ. ಕೋಲಾರದಿಂದ ಸ್ಪರ್ಧೆ ಮಾಡಲು ಶಾಸಕರು ಆಹ್ವಾನ ನೀಡಿದ್ದಾರೆ, ಅವರು ಸಹ ಬಹುತೇಕ ಸಮ್ಮತಿ ಸೂಚಿಸಿದ್ದಾರೆ ಎನ್ನುವುದು ಮಾಲೂರು ಶಾಸಕ ಕೆ. ವೈ. ನಂಜೇಗೌಡ ಅವರ ಹೇಳಿಕೆ.
ಸಿದ್ದರಾಮಯ್ಯಗೆ ಹೇಳಿ ಮಾಡಿಸಿದ ಕ್ಷೇತ್ರ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೆಸಿ ವ್ಯಾಲಿ ಯೋಜನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಕುರುಬ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತಗಳು ಹೆಚ್ಚಿವೆ. ಆದ್ದರಿಂದ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿದರೆ ಗೆಲುವು ಸಾಧಿಸುವುದು ಸುಲಭ ಎಂಬುದು ಲೆಕ್ಕಾಚಾರವವಾಗಿದೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ವಿರೋಧಿಸುವ ಜನರೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಕಣಕ್ಕಿಳಿದರೆ ಸುಲಭವಾಗಿ ಗೆದ್ದು ಬರಬಹುದು ಎಂದು ಶಾಸಕರು ಸಿದ್ದರಾಮಯ್ಯಗೆ ವಿವರಣೆ ನೀಡಿದ್ದಾರೆ.
ಕೋಲಾರ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ನ ಕೆ. ಶ್ರೀನಿವಾಸ್ ಗೌಡ. 2018ರ ಚುನಾವಣೆಯಲ್ಲಿ 82,788 ಮತಗಳನ್ನು ಪಡೆದು ಗೆದ್ದಿದ್ದಾರೆ. ಪಕ್ಷದಿಂದ ಅವರು ಈಗ ದೂರವಾಗಿದ್ದು, ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿವೆ.
ನಾನಿನ್ನೂ ತೀರ್ಮಾನ ಮಾಡಿಲ್ಲ
ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲಾರಕ್ಕೆ ಆಗಮಿಸಿದ್ದರು. ಆಗ ಸಹ ಕೋಲಾರದಿಂದ ಕಣಕ್ಕಿಳಿಯುವಂತೆ ಒತ್ತಾಯಿಸಲಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ನಾನಿನ್ನೂ ಅಂತಿಮ ತೀರ್ಮಾನ ಮಾಡಿಲ್ಲ" ಎಂದು ಹೇಳಿದ್ದರು.
ಮುಂದಿನ ಚುನಾವಣೆ ನನ್ನ ಕೊನೆ ಚುನಾವಣೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದ್ದರಿಂದ ಬಹಳ ಲೆಕ್ಕಾಚಾರ ಹಾಕಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ಒಂದು ವೇಳೆ ಬಾದಾಮಿಯಿಂದಲೇ ಅವರು ಮತ್ತೆ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ ಎಂಬ ಮಾತುಗಳು ಸಹ ಹಬ್ಬಿವೆ.
ಶಾಸಕರ ಅಭಿಪ್ರಾಯವೇನು?
ಶಾಸಕ ರಮೇಶ್ ಕುಮಾರ್, ಎಸ್. ಎನ್. ನಾರಾಯಣಸ್ವಾಮಿ, ಕೆ. ವೈ. ನಂಜೇಗೌಡ ಸೇರಿದಂತೆ ಹಲವರು ಸಿದ್ದರಾಮಯ್ಯಗೆ ಕೋಲಾರದಿಂದ ಕಣಕ್ಕಿಳಿಯುವ ಕುರಿತು ಸಲಹೆ ನೀಡಿದ್ದಾರೆ. ರಮೇಶ್ ಕುಮಾರ್ ಮಾತನ್ನು ಸಿದ್ದರಾಮಯ್ಯ ಪರಿಗಣಿಸುತ್ತಾರೆ. ಆದ್ದರಿಂದ ಕೋಲಾರದಿಂದ ಅವರು ಕಣಕ್ಕಿಳಿಯಲು ಒಪ್ಪಿಗೆ ನೀಡಬಹುದು ಎಂದು ಅಂದಾಜಿಸಲಾಗಿದೆ.
ಮತ್ತೊಂದು ಕಡೆ ಸಿದ್ದರಾಮಯ್ಯ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿವೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಶಾಸಕರು. ಕೆಲವು ದಿನಗಳಿಂದ ಹಲವು ಕಾರ್ಯಕ್ರಮದಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿದ್ದಾರೆ. ಪದೇ ಪದೇ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.