ಕೆಪಿಎಸ್ಸಿ ಫೈಟ್ : ಹೊಸ ಪಟ್ಟಿ ಸಿದ್ಧಪಡಿಸಲಿದ್ದಾರೆ ಸಿಎಂ!
ಬೆಂಗಳೂರು, ಜ. 13 : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಾಗಿ ಕಳುಹಿಸಿದ ಪಟ್ಟಿಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಪಟ್ಟಿಯೊಂದನ್ನು ಸಿದ್ಧಪಡಿಸಲು ನಿರ್ಧರಿಸಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿರುವ ವಿ.ಆರ್.ಸುದರ್ಶನ್ ಹೆಸರು ಬದಲಾವಣೆಯಾಗಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಮುಖ್ಯಮಂತ್ರಿಗಳು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್ ಅವರ ಹೆಸರನ್ನು ಮತ್ತು ಸದಸ್ಯರ ಮಂಡಳಿಗೆ ಹಲವು ಹೆಸರುಗಳನ್ನು ಶಿಫಾರಸು ಮಾಡಿ ರಾಜ್ಯಪಾಲರ ಅಂತಿಮ ಒಪ್ಪಿಗೆಗಾಗಿ ಕಳುಹಿಸಿದ್ದರು. ಆದರೆ, ಬಿಜೆಪಿ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಸರ್ಕಾರ ಕಳುಹಿಸಿದ ಶಿಫಾರಸಿನ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಪಟ್ಟಿಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದ್ದರು. [ಕೆಪಿಎಸ್ ಸಿ ಪಟ್ಟಿ ದೋಷಪೂರಿತ]

ಕೆಪಿಎಸ್ಸಿಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರ ಹಲವಾರು ಆರೋಪಗಳನ್ನು ಎದುರಿಸುತ್ತಿರುವವರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಲು ಹೊರಟಿದೆ. ಆದ್ದರಿಂದ ಪಟ್ಟಿಗೆ ಒಪ್ಪಿಗೆ ನೀಡಬಾರದು ಎಂದು ಬಿಜೆಪಿ ಮತ್ತು ಟಿ.ಜೆ.ಅಬ್ರಾಹಂ ದೂರಿನಲ್ಲಿ ತಿಳಿಸಿದ್ದರು. [ಸುದರ್ಶನ್ ವಿರುದ್ಧ ಭೂ ಒತ್ತುವರಿ ದೂರು]
ಭೂ ಹಗರಣ : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಶಿಫಾರಸುಗೊಂಡಿರುವ ವಿ.ಆರ್. ಸುದರ್ಶನ್ ಜಮೀನು ಒತ್ತುವರಿ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು ಮತ್ತು ಅವರ ಹೆಸರನ್ನು ಕೈಬಿಡಬೇಕು ಎಂದು ಒತ್ತಾಯಿಸಿತ್ತು. [ಸರ್ಕಾರ, ರಾಜಭವನದ ನಡುವೆ ಗುದ್ದಾಟ]
ಪಟ್ಟಿ ತಿರಸ್ಕರಿಸಲು ಜೆಡಿಎಸ್ ಒತ್ತಾಯ : ಸರ್ಕಾರ ಶಿಫಾರಸು ಮಾಡಿರು ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದರು. ಸರ್ಕಾರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಪಟ್ಟಿ ಸಲ್ಲಿಸಿದೆ ಎಂದು ದೂರಿದ್ದರು.
ಈ ಎಲ್ಲಾ ವಿವಾದಗಳ ನಂತರ ಹೊಸ ಪಟ್ಟಿಯನ್ನು ಸಿದ್ಧಪಡಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಆದರೆ, ಸುದರ್ಶನ್ ಅವರ ಹೆಸರನ್ನು ಕೈಬಿಡಲಾಗುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ. ರಾಜ್ಯಪಾಲರು ತವರು ರಾಜ್ಯ ಗುಜರಾತ್ಗೆ ತೆರಳಿದ್ದು, ಅವರು ಮರಳಿದ ಬಳಿಕ ಹೊಸ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications