ಬಿಜೆಪಿ ಯಾತ್ರೆಗೆ ಸೆಡ್ಡು ಹೊಡೆಯಲು, ಸಿದ್ದರಾಮಯ್ಯ ಪ್ರತಿತಂತ್ರ!
Recommended Video

ಬೆಂಗಳೂರು, ನವೆಂಬರ್ 27 : ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 2018ರ ಚುನಾವಣೆಯತ್ತ ಗಮನಹರಿಸಿದ್ದಾರೆ. ಪ್ರತಿಪಕ್ಷ ಬಿಜೆಪಿಗೆ ಸೆಡ್ಡು ಹೊಡೆಯಲು ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಹೌದು, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇದೆ. ರಾಜಕೀಯ ಪಕ್ಷಗಳು ಭರ್ಜರಿಯಾಗಿ ತಯಾರಿ ಆರಂಭಿಸಿದ್ದು, ಮೊದಲ ಹಂತದ ಪ್ರಚಾರಕ್ಕೂ ಚಾಲನೆ ನೀಡಿವೆ.
ಕಾಂಗ್ರೆಸ್ ಕರ್ನಾಟಕದ ಆಡಳಿತ ಪಕ್ಷ, ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವ ದೊಡ್ಡ ರಾಜ್ಯವೂ ಇದೆ. ಮುಂದಿನ ಚುನಾವಣೆಯಲ್ಲಿಯೂ ಅಧಿಕಾರ ಪಡೆಯಬೇಕು ಎಂಬ ತಂತ್ರದೊಂದಿಗೆ ಪಕ್ಷ ಚುನಾವಣಾ ತಯಾರಿ ಆರಂಭಿಸಿದೆ. ಮನೆ-ಮನೆಗೆ ಕಾಂಗ್ರೆಸ್ ಎಂಬ ಅಭಿಯಾನವನ್ನು ಪಕ್ಷ ಈಗಾಗಲೇ ಬೂತ್ ಮಟ್ಟದಲ್ಲಿ ಆರಂಭಿಸಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯ ಪ್ರವಾಸವನ್ನು ಕೈಗೊಂಡು ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಈ ತಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿತಂತ್ರ ರೂಪಿಸಿದ್ದು ರಾಜ್ಯದ ನಾಲ್ಕು ಕಡೆಗಳಿಂದ ಪ್ರಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ...
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಸಭೆಯಲ್ಲಿ ಚರ್ಚೆ ನಡೆಸಿದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉತ್ತರ ಕರ್ನಾಟಕ ಭಾಗದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ್ ಜೊತೆ ಒಂದು ಸುತ್ತಿನ ಸಭೆ ನಡೆಸಿ, ರೂಪುರೇಷೆ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

4 ದಿಕ್ಕಿನಿಂದ ಯಾತ್ರೆ ಆರಂಭ
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ರಾಜ್ಯದ ನಾಲ್ಕು ದಿಕ್ಕಿನಿಂದ ನಾಲ್ವರು ನಾಯಕರ ನೇತೃತ್ವದಲ್ಲಿ ಯಾತ್ರೆಗಳನ್ನು ಆರಂಭಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶಗಳನ್ನು ನಡೆಸಲಿದೆ.

ಯಾವ ನಾಯಕರ ನೇತೃತ್ವ?
ಸಿದ್ದರಾಮಯ್ಯ, ಪರಮೇಶ್ವರ, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ರಾಜ್ಯದ 4 ದಿಕ್ಕಿನಿಂದ ಯಾತ್ರೆ ಆರಂಭವಾಗಲಿದೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾ, ಪ್ರಚಾರ ಆರಂಭಿಸಲಾಗುತ್ತದೆ.

ಡಿಸೆಂಬರ್ನಲ್ಲಿ ಆರಂಭ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ನಾಯಕರು ಚರ್ಚೆ ನಡೆಸಿ, ಯಾತ್ರೆಯ ಅಂತಿಮ ರೂಪುರೇಷೆ ತಯಾರು ಮಾಡಲಿದ್ದಾರೆ. ಡಿಸೆಂಬರ್ 10ರ ಬಳಿಕ ಕಾಂಗ್ರೆಸ್ ನಾಯಕರ ಯಾತ್ರೆ ಆರಂಭವಾಗುವ ನಿರೀಕ್ಷೆ ಇದೆ.

ಬಿಜೆಪಿಯ ಪರಿವರ್ತನಾ ಯಾತ್ರೆ
ಕರ್ನಾಟಕ ಬಿಜೆಪಿ 'ನವ ಕರ್ನಾಟಕ ಪರಿವರ್ತನಾ ಯಾತ್ರೆ'ಯನ್ನು ಆರಂಭಿಸಿದೆ. 17 ದಿನಗಳನ್ನು ಯಾತ್ರೆ ಪೂರ್ಣಗೊಳಿಸಿದ್ದು, ಅಥಣಿಯಿಂದ ನ.27ರಂದು 18ನೇ ದಿನದ ಯಾತ್ರೆ ಆರಂಭವಾಗಿದೆ.

ಕುಮಾರಪರ್ವ ಯಾತ್ರೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು 'ಕುಮಾರಪರ್ವ' ಹೆಸರಿನಲ್ಲಿ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಯಾತ್ರೆ ಮುಗಿದಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವರು ಬಿಡುವು ಪಡೆದಿದ್ದರು. ಈಗ ಮತ್ತೆ ಯಾತ್ರೆ ಆರಂಭವಾಗಲಿದೆ.












Click it and Unblock the Notifications