ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಿಂದ ಕಂಗಾಲಾದ ಕಂದಾಯ ಸಚಿವ ಆರ್. ಅಶೋಕ್!
ಬೆಂಗಳೂರು, ಮಾ. 15: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಕಂದಾಯ ಸಚಿವ ಆರ್. ಅಶೋಕ್ ಅವರು ಕಂಗಾಲಾದ ಪ್ರಸಂಗ ವಿಧಾನಸಭೆಯಲ್ಲಿ ನಡೆದಿದೆ. ಬಜೆಟ್ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚರ್ಚೆ ಮಾಡುತ್ತಿದ್ದಾಗ ಇದು ನಡೆದಿದ್ದು, ಸಿದ್ದರಾಮಯ್ಯ ಅವರ ಮಾತಿಗೆ ಸಚಿವ ಅಶೋಕ ವಿಚಿಲಿತರಾಗಿದ್ದಾರೆ.
ಆ ಪ್ರಸಂಗದಿಂದ ಸುಮ್ಮನೆ ಇರಲಾರದೆ ಅದೇನೊ ಮಾಡಿಕೊಂಡಂತೆ ಎಂಬಂತಾಯ್ತು ಸಚಿವ ಅಶೋಕ್ ಅವರ ಪರಿಸ್ಥಿತಿ. ಭೋಜನ ವಿರಾಮದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಜೆಟ್ ಮೇಲೆ ಚರ್ಚೆ ಮುಂದುವರೆಸಿದ್ದರು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನದ ಕುರಿತು ಪ್ರಸ್ತಾಪವಾಯ್ತು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿನ ಗೊಂದಲ: ಡೌಟ್ ಕ್ಲಿಯರ್ ಮಾಡಿದ ಸಿದ್ದರಾಮಯ್ಯ
ಅದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ಸವಾಲು-ಪಾಟಿ ಸವಾಲು ನಡೆದಿದ್ದವು. ಆಗ ಮಧ್ಯೆ ಪ್ರವೇಶ ಮಾಡಿದ ಅಶೋಕ ಅವರಿಗೆ ಸಿದ್ದರಾಮಯ್ಯ ಅವರು ಸರಿಯಾಗಿಯೇ ತಿರುಗೇಟು ನೀಡಿದರು.
ಆಪರೇಷನ್ ಕಮಲ ಮಾಡಿ ಆಡಳಿತಕ್ಕೆ ಬಂದು ಬರ್ಬಾದ್
ಬಜೆಟ್ ಮೇಲೆ ಮಾತು ಮುಂದುವರೆಸಿದ್ದ ಸಿದ್ದರಾಮಯ್ಯ ಅವರು, ಆಪರೇಷನ್ ಕಮಲ ಮಾಡಿ ಆಡಳಿತಕ್ಕೆ ಬಂದು ಬರ್ಬಾದ್ ಮಾಡ್ತಾ ಇದ್ದೀರಿ ಎಂದು ಟೀಕಿಸಿದರು. ಆಗ ಮಧ್ಯೆ ಪ್ರವೇಶ ಮಾಡಿದ ಸಿಎಂ ಯಡಿಯೂರಪ್ಪ ಅವರು, ನೀವೇ ಕಾಂಗ್ರೆಸ್ ಶಾಸಕರನ್ನು ಕಳುಹಿಸಿಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟರು. ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ, ಹಾಗಾದರೆ ನಮ್ಮಿಂದ ಹೋದವರೆಲ್ಲರನ್ನೂ ವಾಪಸು ಕಳುಹಿಸಿ ಎಂದಾಗ, ನೀವು ಸಿಎಂ ಆಗುವ ತಿರುಕನ ಕನಸು ಕಾಣಬೇಡಿ ಎಂದು ಸಿದ್ದರಾಮಯ್ಯರಿಗೆ ಯಡಿಯೂರಪ್ಪ ನಗುತ್ತಲೇ ಹೇಳಿದರು.
ಸಿದ್ದರಾಮಯ್ಯಗೆ ಸವಾಲು ಹಾಕಿದ ಯಡಿಯೂರಪ್ಪ
ನೀವು ಹೇಳುತ್ತಿರುವ ಈ ಎಲ್ಲಾ ಅಂಶಗಳನ್ನು ಉಪ ಚುನಾವಣೆಯಲ್ಲಿ ಜನರ ಮುಂದೆ ಇಡಿ. ಉಪ ಚುನಾವಣೆಯಲ್ಲಿ ನೀವು ಗೆದ್ದು ತೋರಿಸಿ ಆ ಮೇಲೆ ಮಾತನಾಡೋಣ ಎಂದು ಸಿದ್ದರಾಮಯ್ಯಗೆ ಸಿಎಂ ಸವಾಲು ಹಾಕಿದರು. ಆಗ ಸಿಎಂಗೆ ಪ್ರತಿ ಸವಾಲು ಹಾಕಿದ ಸಿದ್ದರಾಮಯ್ಯ, ವಿಧಾನಸಭೆ ವಜಾಗೊಳಿಸಿಚುನಾವಣೆಗೆ ಬನ್ನಿ ಯಾರಿಗೆ ಮತ ಹಾಕುತ್ತಾರೆ ನೋಡೋಣ. ನಾವು ಅದಕ್ಕೆ ಸಿದ್ಧರಿದ್ದೇವೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲಿಗೆ ಸುಮ್ಮನೆ ಕುಳಿತ ಮುಖ್ಯಮಂತ್ರಿ ಯಡಿಯೂರಪ್ಪ!
ಸಿದ್ದರಾಮಯ್ಯ ಕಿಚಾಯಿಸಿದ ಸಾರಾ ಮಹೇಶ್
ಆಗ ಮಧ್ಯೆ ಪ್ರವೇಶ ಮಾಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರು ಕಳುಹಿಸಿದ್ದೀರಿ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದರು.
ಆ ದರಿದ್ರ ವ್ಯವಸ್ಥೆ ನನಗೆ ಬಂದಿಲ್ಲ. ನಮ್ಮ ಶಾಸಕರನ್ನು ಕಳುಹಿಸುವುದಾದರೆ ಬಹಿರಂಗವಾಗಿಯೇ ಕಳುಹಿಸುತ್ತೇನೆ. ಧೈರ್ಯವಾಗಿ ಕಳುಹಿಸುತ್ತೇನೆ. ಕದ್ದು ಮುಚ್ಚಿ ಕಳುಹಿಸುವುದಿಲ್ಲ. ನಾನು ನೇರವಾಗಿ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಕೊನೆವರೆಗೂ ಆ ರೀತಿಯೇ ರಾಜಕಾರಣ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಸಾರಾ ಮಹೇಶ್ ಅವರಿಗೆ ಉತ್ತರ ಕೊಟ್ಟರು.
ನೀವು ಮುಂದೆ ಸ್ಪರ್ಧಿಸ್ತಿರೋ, ಇಲ್ಲವೋ?
ಸಾರಾ ಮಹೇಶ್ ಅವರಿಗೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಡುತ್ತಿದ್ದಂತೆಯೆ, ನೀವು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸ್ತಿರೋ, ಇಲ್ಲವೋ ಅನ್ನೋ ಅನುಮಾನ ಇದೆಯಲ್ಲಾ ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ಘೋಷಣೆ; ವರದಿ ಕೇಳಿದ ಡಿ. ಕೆ. ಶಿವಕುಮಾರ್
ಮುಂದಿನ ಬಾರಿಯೂ ನಾನು ಚುನಾವಣೆ ನಿಲ್ಲುತ್ತೇನೆ. ನಾನು ಎಲ್ಲೂ ಓಡಿ ಹೋಗುವುದಿಲ್ಲ. ಈಗ ಅನುಮಾನ ಕ್ಲೀಯರ್ ಆಯಿತಲ್ಲಾ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ಕಂಗಾಲು!
ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಧ್ಯಪ್ರವೇಶ ಮಾಡಿ ಮಾತನಾಡಿದರು, ಸಿದ್ದರಾಮಯ್ಯ ಅವರು ಚುನಾವಣೆಗೆ ನಿಂತೇ ನಿಲ್ಲುತ್ತಾರೆ. ಮುಂದೆ ಏನಾಗ್ತಾರೆ ಅನ್ನೋದು ಇತಿಹಾಸ ಎಂದರು. ಅದೇ ವೇಳೆ ನಾನು ಮುಂದಿನ ಎಲೆಕ್ಷನ್ ನಿಲ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಮಧ್ಯ ಬಾಯಿ ಹಾಕಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಸಾರ್ ಎಲ್ಲಿ ನಿಲ್ತೀರ ಅದನ್ನು ಹೇಳಿ ಎಂದರು. ನಾನು ನಿನ್ನ ಕ್ಷೇತ್ರ ಪದ್ಮನಾಭನಗರದಿಂದ ಚುನಾವಣೆಗೆ ನಿಲ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು. ಪದ್ಮನಾಭನಗರ ಅನ್ನುತ್ತಿದ್ದಂತೆ ಅಶೋಕ್ ಅವರು ಕಂಗಾಲಾದಂತೆ ಕಂಡು ಬಂದರು.
ರಾಜಕಾರಣ ನಿಂತ ನೀರಲ್ಲ!
ಪದ್ಮನಾಭನಗರದಲ್ಲಿ ನಿಲ್ಲುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಎಂಬುದು ಅಶೋಕ್ ಅವರ ಗಮನಕ್ಕೆ ಬರುತ್ತಿದ್ದಂತೆ ನಿರಾಳರಾದರು. ಆಗ ಸ್ಪಷ್ಟವಾಗಿ ಸದನಕ್ಕೆ ತಿಳಿಸಿದ ಸಿದ್ದರಾಮಯ್ಯ ಅವರು ತಾವು ಬಾದಾಮಿಯಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದರು.
ರಾಜಕಾರಣ ನಿಂತ ನೀರಲ್ಲ. ಬದಲಾವಣೆ ಆಗುತ್ತಾ ಇರುತ್ತದೆ. ಇಂದು ಇದ್ದವರು ನಾಳೆ ಇರುವುದಿಲ್ಲ. ಯಾರೂ ಕೂಡ ಶಾಶ್ವತವಾಗಿ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಜನರ ಮೇಲೆ ವಿಶ್ವಾಸ ಇಲ್ಲದವರು ನಾವು ಇಲ್ಲೇ ಇರುತ್ತೇವೆ ಅಂತ ಹೇಳುತ್ತಾರೆ. ನಾನು ಈಗ ಬಾದಾಮಿಯನ್ನು ಪ್ರತಿನಿಧಿಸುತ್ತಿದ್ದೇನೆ. ಮುಂದೆಯೂ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದರು.