ತುಂಗಭದ್ರೆ ನದಿಯ ಏತನೀರಾವರಿ ಯೋಜನೆ, ಏನಿದು?
ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 40 ಸಾವಿರ ಎಕರೆ ಕೃಷಿ ಜಮೀನು ನೀರಾವರಿಗೆ 7.64 ಟಿ.ಎಂ.ಸಿ. ನೀರು ಬಳಕೆ ಮಾಡುವ 63.62 ಕೋಟಿ ರೂ. ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಚಾಲನೆ
ಗದಗ, ನವೆಂಬರ್, 13: ಶನಿವಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಂಗಟಾಲೂರು ಏತನೀರಾವರಿ ಯೋಜನೆಯ ಎಡಭಾಗದ ಮೊದಲ ಹಂತದ ನೀರೆತ್ತುವ ಘಟಕವನ್ನು ಉದ್ಘಾಟಿಸಿದ್ದಾರೆ.
ಏನಿದು ತುಂಗಭದ್ರಾ ಯೋಜನೆ ಒಂದಿಷ್ಟು ಮಾಹಿತಿ ಇಲ್ಲಿದೆ.
ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 40 ಸಾವಿರ ಎಕರೆ ಕೃಷಿ ಜಮೀನು ನೀರಾವರಿಗೆ 7.64 ಟಿ.ಎಂ.ಸಿ. ನೀರು ಬಳಕೆ ಮಾಡುವ 63.62 ಕೋಟಿ ರೂ. ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ 1991-1992 ರಲ್ಲಿ ರಾಜ್ಯ ಸರ್ಕಾರ ನೀಡಿತ್ತು.
ತದನಂತರ 2000 ನೇ ವರ್ಷದಲ್ಲಿ ಅಂದು ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಚ್.ಕೆ.ಪಾಟೀಲರು ಈ ಯೋಜನೆಯ ವ್ಯಾಪ್ತಿ ಹೆಚ್ಚಿಸಿ ಹೆಚ್ಚುವರಿಯಾಗಿ 10.91 ಟಿ.ಎಂ.ಸಿ. ನೀರು ಹಂಚಿಕೆ ಮಾಡಿಸಿ ಪರಿಷ್ಕೃತ 595 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ದೊರಕಿಸಿದ್ದರು.
ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಬ್ಯಾರೇಜು ನಿರ್ಮಿಸಿ ಎಡ ಹಾಗೂ ಬಲ ಬದಿಗಳ ಏತ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಮೂಲ ಉದ್ದೇಶವಾಗಿತ್ತು.
5758 ಕೋಟಿ ರೂ. ಅನುದಾನ
ಮುಖ್ಯಮಂತ್ರಿ ಸಿದ್ಧರಾಮಯ್ಯ 2015 ರ ರಾಜ್ಯ ಬಜೆಟ್ ನಲ್ಲಿ ಪರಿಷ್ಕೃತ 5768 ಕೋಟಿ ರೂ. ಅನುದಾನ ಒದಗಿಸಿ 48,381 ಎಕರೆ ಹರಿ ನೀರಾವರಿ ಹಾಗೂ 2,16,848 ಎಕರೆ ಹನಿ ನೀರಾವರಿ ಒಟ್ಟು 2.65 ಲಕ್ಷ ಎಕರೆ ಕೃಷಿ ಜಮೀನಿಗೆ ನೀರಾವರಿ ಕಲ್ಪಿಸುವುದಕ್ಕೆ ಅವಕಾಶ ನೀಡಿದರು.
ಇದರನ್ವಯ ಬಳ್ಳಾರಿಯ ಹೂವಿನ ಹಡಗಲಿ ಯೋಜಿತ ಅಚ್ಚುಕಟ್ಟು ಪ್ರದೇಶ 35,791 ಎಕರೆ, ಕೊಪ್ಪಳ ತಾಲೂಕಿನಲ್ಲಿ 15,520 ಸೂಕ್ಷ್ಮ ನೀರಾವರಿ ಸೇರಿದಂತೆ ಒಟ್ಟು 55,706 ಹಾಗೂ ಯಲಬುರ್ಗಾದಲ್ಲಿ 14,624 ಸೂಕ್ಷ್ಮ ನೀರಾವರಿಯ 14,624 ಎಕರೆ ಪ್ರದೇಶಗಳು ನೀರಾವರಿ ಸೌಲಭ್ಯ ದೊರಕಲಿದೆ.
1,59,108 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ
ಗದಗ ತಾಲೂಕಿನಲ್ಲಿ 27,754 ಎಕರೆ ಸೂಕ್ಷ್ಮ ನೀರಾವರಿ ಸೇರಿದಂತೆ ಒಟ್ಟು 66,827 ಹಾಗೂ ಮುಂಡರಗಿ ತಾಲೂಕಿನಲ್ಲಿ 37.095 ಎಕರೆ ಸೂಕ್ಷ್ಮ ನೀರಾವರಿ ಪ್ರದೇಶ ಸೇರಿದಂತೆ 92,281 ಹೀಗೆ ಒಟ್ಟು ಗದಗ ಜಿಲ್ಲೆಯ ಎರಡೂ ತಾಲೂಕಿನ ಒಟ್ಟು 1,59,108 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಲಭ್ಯವಾಗಲಿದೆ.
3.12 ಟಿ.ಎಂ.ಸಿ. ಸಾಮರ್ಥ್ಯದ ಹಮ್ಮಿಗಿ ಬ್ಯಾರೇಜಿನಿಂದ 24.18 ಕಿ.ಮೀ ದೂರವಿರುವ ಮುಂಡವಾಡ- ಹಮ್ಮಿಗಿ ಹಾಗೂ 69.44 ಕಿ.ಮೀ ಉದ್ದದ ಗದಗ - ಶಾಖಾ ಕಾಲುವೆ ಪೂರ್ಣಗೊಂಡಿದ್ದ ಗದುಗಿನ ಭೀಷ್ಮ ಕೆರೆಯವರೆಗೆ ಪ್ರಾಯೋಗಿಕವಾಗಿ ತುಂಗಭದ್ರಾ ನೀರನ್ನು ಈಗಾಗಲೇ ಹರಿಸಲಾಗಿದೆ.
ಪ್ರಮುಖ ಕೆರೆಗಳಿಗೆ ನೀರು
ಹಮ್ಮಿಗಿ-ಮುಂಡವಾಡ ಮೊದಲ ಹಂತದ ಘಟಕ, ಬೀಡನಾಳದ ಎರಡನೇ ಎತ್ತುವಳಿ ಹಾಗೂ ಚುರ್ಚಿಹಾಳದ ( ಕದಾಂಪೂರ) ಮೂರನೇ ಹಾಗೂ ಕೊನೆಯ ನೀರು ಎತ್ತುವಳಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಈ ಮಾರ್ಗದಲ್ಲಿ ಬರುವ 9 ಪ್ರಮುಖ ಕೆರೆಗಳನ್ನು ತುಂಗಭದ್ರಾ ನೀರಿನಿಂದ ತುಂಬಿಸಲಾಗುತ್ತಿದ್ದು, ಇದರಿಂದ ಆ ಪ್ರದೇಶ ವ್ಯಾಪ್ತಿಯ ಅಂತರ್ಜಲ ಹೆಚ್ಚುವುದಲ್ಲದೇ ಸತತ 3 ವರ್ಷಗಳಿಂದ ಮಳೆ ಕೊರತೆ ಎದುರಿಸುತ್ತಿರುವ ಗದಗ ಮತ್ತು ಮುಂಡರಗಿ ಪಟ್ಟಣಗಳಿಗೆ ಸಂಬಂಧಿಸಿದಂತೆ ಸ್ವಲ್ಪ ಮಟ್ಟಿಗೆ ಕುಡಿಯುವ ನೀರು ಪೂರೈಕೆ ದಾಹವನ್ನು ತಣಿಸಿದಂತಾಗಿದೆ.
ಹಿರೇವಡ್ಡಟ್ಟಿ ಕೆರೆ, ಡಂಬಳದ 534 ಎಕರೆ ವಿಸ್ತಾರದ ಐತಿಹಾಸಿಕ ಮಹಾರಾಣಿ ವಿಕ್ಟೋರಿಯಾ ಕೆರೆ ಹಾಗೂ ಗದುಗಿನ ಭೀಷ್ಮ ಕೆರೆಗಳು ಈಗ ತುಂಗಬದ್ರಾ ನೀರಿನಿಂದ ತುಂಬಿಸಲಾಗಿದೆ.
ಈ ಮಾರ್ಗದಲ್ಲಿರುವ ಸಂಭಾಪುರ, ಲಕ್ಕುಂಡಿ, ಜಂತ್ಲಿ ಶಿರೂರ, ಶಿರೋಳ ಕೆರೆಗಳೂ ಕೂಡ ತುಂಗಭದ್ರಾ ನೀರಿನಿಂದ ತುಂಬಿವೆ.
ಯೋಜನೆಯಿಂದ ಗ್ರಾಮಗಳಲ್ಲಿ ಪುನರ್ವಸತಿ ಕಾರ್ಯ
ಈ ಯೋಜನೆಯಡಿ ಮುಂಡರಗಿ ತಾಲೂಕಿನ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳ ಪುನರ್ವಸತಿ ಕಾರ್ಯ ಕೈಗೊಂಡಿದ್ದು, ವಿಠಲಾಪುರ ಹೊರತುಪಡಿಸಿ ಉಳಿದ ಗ್ರಾಮಗಳ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ.
ಗದಗ ಜಿಲ್ಲೆಯ ಗಡಿ ಭಾಗಕ್ಕೆ ಸೀಮಿತಗೊಂಡಿದ್ದ ತುಂಗಭದ್ರೆಯನ್ನು 214 ಮಿ.ಗಳಷ್ಟು ಎತ್ತರದಿಂದ 3 ಹಂತಗಳಲ್ಲಿ ಎತ್ತುವಳಿ ಮೂಲಕ ನೀರನ್ನು ಮುಂಡರಗಿ, ಗದಗ ತಾಲೂಕಿನಲ್ಲಿ ಹರಿಯುವಂತೆ ಮಾಡುವ ಭಗೀರಥ ಯತ್ನ ಕೊನೆಗೂ ಸಾಕಾರಗೊಂಡು ಜಿಲ್ಲೆಯ ಸಾರ್ವಜನಿಕರ, ವಿಶೇಷವಾಗಿ ಕೃಷಿಕರಿಗೆ ಜೀವ ಸೆಲೆಯಾಗುವುದಕ್ಕೆ ತುಂಗಭದ್ರೆ ಮುಂದಾಗಿರುವುದು ಗದಗ ಜಿಲ್ಲೆಗೆ ಅತ್ಯಂತ ಸಂಭ್ರಮದ ಮತ್ತು ಅಪರೂಪದ ಸಂಗತಿಯಾಗಿದೆ.