'ಭಾರತ್ ಬಂದ್' ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ!
ಬೆಂಗಳೂರು, ಡಿ. 07: ಕೇಂದ್ರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ಲಕ್ಷಾಂತರ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆಯಿಂದ ಕೇಂದ್ರ ಬಿಜೆಪಿ ಸರ್ಕಾರ ಅಕ್ಷರಶಃ ಕಂಗಾಲಾಗಿದೆ. ನಾಳೆ (ಡಿ.08) ಭಾರತ್ ಬಂದ್ಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ. ರೈತರು ಕರೆ ಕೊಟ್ಟಿರುವ ಭಾರತ್ ಬಂದ್ಗೆ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮಾತುಗಳನ್ನು ಆಡಿದ್ದಾರೆ.
Recommended Video
ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆಕೊಟ್ಟಿರುವ ಡಿಸೆಂಬರ್ ಎಂಟರ ಭಾರತ ಬಂದ್ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬಂದ್ ನಲ್ಲಿ ಭಾಗವಹಿಸುವುದಲ್ಲದೆ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಕೋರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಅನ್ನ ತಿನ್ನುವ ನಮ್ಮೆಲ್ಲರ ಕರ್ತವ್ಯ
ದೇಶದ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಕೊರೆಯುವ ಚಳಿ,ಪೊಲೀಸರ ದೌರ್ಜನ್ಯ ಮತ್ತು ಬಿಜೆಪಿ ಕಿಡಿಗೇಡಿಗಳ ಅಪಪ್ರಚಾರಕ್ಕೆ ಎದೆಗೊಟ್ಟು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ನಮಗಾಗಿ ಹೋರಾಟ ನಡೆಸುತ್ತಿರುವ ಅನ್ನದಾತರ ಬೆಂಬಲಕ್ಕೆ ನಿಲ್ಲುವುದು ಅನ್ನ ತಿನ್ನುವ ನಮ್ಮೆಲ್ಲರ ಕರ್ತವ್ಯವಾಗಿದೆ.
ಕೊರೊನಾ ವೈರಸ್ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು 'ನಮ್ಮನ್ನು ರಕ್ಷಿಸಿ,ಉಳಿಸಿ' ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಅವಸರದಲ್ಲಿ ಜಾರಿಗೊಳಿಸಿ ಅವರ ಗಾಯದ ಮೇಲೆ ಬರೆ ಎಳೆದು ನಿಧಾನವಾಗಿ ಸಾಯಿಸಲು ಹೊರಟಿದೆ.

ಖಾಸಗಿ ಕಂಪೆನಿಗಳ ತಾಳಕ್ಕೆ ಕೇಂದ್ರದ ಕುಣಿತ
ಖಾಸಗಿ ಕಂಪೆನಿಗಳ ತಾಳಕ್ಕೆ ಕೇಂದ್ರ ಸರ್ಕಾರ ಕುಣಿಯತೊಡಗಿದೆ. ಈ ಸಂಚಿನ ಭಾಗವಾಗಿಯೇ ಎಪಿಎಂಸಿ ಹೊಂದಿರುವ ನಿಯಂತ್ರಣವನ್ನು ಕಿತ್ತು ಹಾಕಿ ಖಾಸಗಿಯವರಿಗೆ ಅನಿಯಂತ್ರಿತವಾದ ಮುಕ್ತ ಹಸ್ತ ನೀಡುವ ದುರುದ್ದೇಶದಿಂದ ಈ ಕಾಯ್ದೆ ತರಲಾಗಿದೆ. ಈ ಬಗ್ಗೆ ನಮ್ಮ ರೈತರು ಜಾಗೃತರಾಗಬೇಕಾಗಿದೆ.
ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿದರೂ ಕನಿಷ್ಠ ಬೆಂಬಲ ಬೆಲೆಯ ಒಂದು ಅಂಶವನ್ನು ಕಾನೂನಿನಲ್ಲಿ ಅಳವಡಿಸಬೇಕೆಂಬ ಸಣ್ಣ ಬೇಡಿಕೆಯನ್ನು ಒಪ್ಪದಿರುವ ಕೇಂದ್ರ ಸರ್ಕಾರದ ದುರುದ್ದೇಶ ಸ್ಪಷ್ಟವಾಗಿದೆ. ಇದು ಕಾರ್ಪೋರೇಟ್ವ ಧಣಿಗಳ ಗುಲಾಮಿ ಸರ್ಕಾರ.

ಪ್ರಜಾಪ್ರಭುತ್ವ ವಿರೋಧಿ ನಡೆ
ಸಂವಿಧಾನದ ಪ್ರಕಾರ ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ರಾಜ್ಯ ಸರ್ಕಾರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಈ ಕರಾಳ ಕಾನೂನುಗಳನ್ನು ತಂದಿರುವ ಕೇಂದ್ರಸರ್ಕಾರದ ನಡೆ ಪ್ರಜಾಪ್ರಭುತ್ವ ವಿರೋಧಿಯಾದುದು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ತಿದ್ದುಪಡಿ, ಪ್ರಮುಖ ಬೆಳೆಗಳನ್ನು ಅಗತ್ಯವಸ್ತುಗಳ ಕಾಯ್ದೆ ಹೊರಗಿಡುವ ತಿದ್ದುಪಡಿ, ಬೀಜ-ಗೊಬ್ಬರಗಳ ಮೇಲೆ ಜಿಎಸ್ ಟಿ.. ಹೀಗೆ ಒಂದಾದರ ಮೇಲೊಂದರಂತೆ ರೈತರ ಮೇಲೆ ಪ್ರಹಾರ ಮಾಡುತ್ತಾ ಬಂದಿರುವ ಬಿಜೆಪಿಯಿಂದ ದೇಶಕ್ಕೆ ಉಳಿಗಾಲ ಇಲ್ಲ.

ಗುಂಡು ಹೊಡೆದು ರೈತರನ್ನು ಸಾಯಿಸಿದ್ದ ಸರ್ಕಾರ
ರಾಜ್ಯದ ಬಿಜೆಪಿ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದಗೆ ತಂದಿರುವ ತಿದ್ದುಪಡಿ ಕೂಡಾ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹಿತಾಸಕ್ತಿ ರಕ್ಷಣೆಗಾಗಿ ರೈತರನ್ನು ಬಲಿಗೊಡುವ ಅಜೆಂಡಾದ ಭಾಗವಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರದ ರೈತವಿರೋಧಿ ನೀತಿ-ನಿರ್ಧಾರಗಳನ್ನು ಗುಲಾಮರಂತೆ ತಲೆಬಗ್ಗಿಸಿ ಒಪ್ಪಿಕೊಂಡು ಜಾರಿಗೊಳಿಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ರಾಜ್ಯದ ರೈತರಿಗೆ ದ್ರೋಹಬಗೆಯುತ್ತಿದೆ. ಹಿಂದೆ ಗುಂಡು ಹೊಡೆದು ರೈತರ ಸಾಯಿಸಿದ ಬಿ.ಎಸ್. ಯಡಿಯೂರಪ್ಪ ಅವರು ಈಗ ಕರಾಳ ಕಾನೂನುಗಳ ಮೂಲಕ ರೈತರನ್ನು ಸಾಯಿಸಲು ಹೊರಟಿದ್ದಾರೆ.
ದೆಹಲಿಯಲ್ಲಿ ರೈತರು ಪ್ರಭತ್ವದ ದೌರ್ಜನ್ಯವನ್ನು ಎದುರಿಸಿ, ಕಷ್ಟ-ನಷ್ಟಗಳನ್ನುಂಡು ನಮಗಾಗಿ ಹೋರಾಡುತ್ತಿದ್ದಾರೆ. ನಾಳಿನ ಭಾರತ ಬಂದ್ಗೆ ಎಲ್ಲರೂ ಬೆಂಬಲ ನೀಡುವ ಮೂಲಕ ಅನ್ನದಾತರ ಋಣ ಸಂದಾಯ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.












Click it and Unblock the Notifications