ಪಠ್ಯಪುಸ್ತಕ ಪರಿಷ್ಕರಣೆ.. 262 ಕೋಟಿ ರೂಪಾಯಿ ವೇಸ್ಟ್?
ಬೆಂಗಳೂರು: ಯಾರದ್ದೋ ತಪ್ಪಿಗೆ ರಾಜ್ಯದ ಮಕ್ಕಳು ಪರಿತಪಿಸುವಂತಾಗಿದೆ. ಬಿಜೆಪಿ & ಕಾಂಗ್ರೆಸ್ ನಡುವಿನ ಪಠ್ಯಪುಸ್ತಕ ತಿಕ್ಕಾಟದಲ್ಲಿ ಆತಂಕ ಶುರುವಾಗಿದೆ. ಶಾಲೆಗಳು ಶುರುವಾಗುವ ಸಂದರ್ಭದಲ್ಲೇ ಪಠ್ಯಪುಸ್ತಕ ಬದಲಾವಣೆ ಪೋಷಕರಿಗೂ ಚಿಂತೆ ತಂದಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ 262 ಕೋಟಿ ರೂಪಾಯಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದ್ದು, ಆ ಬಗ್ಗೆ ಒಂದು ವರದಿ ಇಲ್ಲಿದೆ ಓದಿ.
ನಾಳೆಯಿಂದ ಕರ್ನಾಟಕದಲ್ಲಿ ಅಧಿಕೃತವಾಗಿ ಶಾಲೆಗಳು ಶುರುವಾಗಲಿವೆ. ಮೊದಲ ದಿನವೇ ಮಕ್ಕಳಿಗೆ ಸ್ವೀಟ್ ಕೊಟ್ಟು, ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಇದೇ ಹೊತ್ತಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ತಲೆಬಿಸಿ ಶುರುವಾಗಿದ್ದು, ಪೋಷಕರು & ಮಕ್ಕಳಲ್ಲಿ ಭಯ ಶುರುವಾಗಿದೆ. ಯಾರದ್ದೋ ತಪ್ಪಿಗೆ ಇಂದು ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾದ್ರೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಎಡವಟ್ಟಾದರೂ ಏನು? ಇದರ ಹಿಂದಿನ ಉದ್ದೇಶ ಏನಿರಬಹುದು? ತಿಳಿಯೋಣ ಬನ್ನಿ (Karnataka Syllabus).
ಬಿಜೆಪಿ ಪಠ್ಯಪುಸ್ತಕದ ವಿರುದ್ಧ ಅಭಿಯಾನ!

ಹಿಂದಿನ ಬಿಜೆಪಿ ಸರ್ಕಾರ, ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿ ಮಾತು ಕೇಳಿ ಹೊಸ ಪಠ್ಯ ರಚನೆ ಮಾಡಿ ಪುಸ್ತಕಗಳನ್ನೂ ಮುದ್ರಿಸಿದೆ. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆಕ್ರೋಶವು ಭುಗಿಲೆದ್ದಿದ್ದು, ರೋಹಿತ್ ಚಕ್ರತೀರ್ಥ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯ ಬದಲಾಯಿಸಿ, 2017-18ರಲ್ಲಿ ಜಾರಿಯಲ್ಲಿದ್ದ ಪಠ್ಯಕ್ರಮ & ಪಠ್ಯ ಪುಸ್ತಕಗಳನ್ನೇ ಮಕ್ಕಳಿಗೆ ನೀಡಲು ಒತ್ತಾಯ ಕೇಳಿಬಂದಿದೆ. ಇದಕ್ಕೆ ಸರ್ಕಾರ ಪರೋಕ್ಷವಾಗಿ ಯೆಸ್ ಅಂದಿದ್ದು, ಪಠ್ಯ ಬದಲಾವಣೆ ಗ್ಯಾರಂಟಿ ಎನ್ನಲಾಗ್ತಿದೆ.
262 ಕೋಟಿ ರೂಪಾಯಿ ಕಥೆ ಏನು?
ಹೌದು, ಈಗಾಗಲೇ ಶಿಕ್ಷಣ ಇಲಾಖೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯಪುಸ್ತಕ ಮುದ್ರಿಸಿಬಿಟ್ಟಿದೆ. ಶಾಲೆಗಳಿಗೂ ಹೊಸ ಪುಸ್ತಕ ತಲುಪಿಸಲು ಸಿದ್ಧತೆ ನಡೆಸಿದೆಯಂತೆ. ಕರ್ನಾಟಕದಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ & ಖಾಸಗಿ ಅನುದಾನಿತ ಶಾಲೆಗಳಿವೆ. 1 ಕೋಟಿಗೂ ಹೆಚ್ಚು ಮಕ್ಕಳು ಓದುತ್ತಿದ್ದು, ಈಗಾಗಲೇ ಶಿಕ್ಷಣ ಇಲಾಖೆ ಪಠ್ಯಪುಸ್ತಕ ಮುದ್ರಣ ಮಾಡಲು 262 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಯಾರೋ ಮಾಡಿದ್ದ ತಪ್ಪಿಗೆ ಪಠ್ಯಪುಸ್ತಕ ಮರು ಮುದ್ರಣ ಮಾಡುವ ಸ್ಥಿತಿ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಾ? ಎಂಬ ಡೌಟ್ ಶುರುವಾಗಿದೆ.
ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ?
ಅಂದಹಾಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಹಲವರು ಒತ್ತಾಯ ಮಾಡಿದ್ದಾರೆ. ಇದರ ಜೊತೆ ಹಲವು ಸಂಘ ಸಂಸ್ಥೆಗಳು ಕೂಡ ರೋಹಿತ್ ಚಕ್ರತೀರ್ಥ ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಈ ಹೊತ್ತಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯ ಸರ್ಕಾರಕ್ಕೆ 262 ಕೋಟಿ ರೂಪಾಯಿ ನಷ್ಟವಾಗುತ್ತಿರುವ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾ ಸಿದ್ದರಾಮಯ್ಯ ಸರ್ಕಾರ? ಎಂಬ ಅನುಮಾನ ಭುಗಿಲೆದ್ದಿದೆ.

ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭಾಶಯ!
ನಾಳೆಯಿಂದ ಆರಂಭವಾಗಲಿರುವ ಶಾಲೆಗಳಿಗೆ, ರಾಜ್ಯದ ವಿದ್ಯಾರ್ಥಿಗಳನ್ನ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ. ಹೀಗಾಗಿ ಮಕ್ಕಳಿಗಾಗಿ ಸ್ಪೆಷಲ್ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದ 23- 24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಮೇ 31 ರಿಂದ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ. ಪೂರಕ ಸಿದ್ಧತೆಗಳು ಇಂದಿನಿಂದ ನಡೆಯಲಿದ್ದು, ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಕೋರುತ್ತಾ, ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ರಾಜ್ಯದ 23- 24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಮೇ 31 ರಿಂದ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ. ಪೂರಕ ಸಿದ್ಧತೆಗಳು ಇಂದಿನಿಂದ ನಡೆಯಲಿದ್ದು, ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಕೋರುತ್ತಾ, ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ, pic.twitter.com/7YX1kyS2jK
— Madhu Bangarappa (@Madhu_Bangarapp) May 29, 2023
ಒಟ್ನಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ, ಹೊಸ ಶಿಕ್ಷಣ ಸಚಿವರ ಜೊತೆ ಶಾಲೆಗಳು ಭರ್ಜರಿಯಾಗಿ ಶುರುವಾಗುತ್ತಿವೆ. ಆದ್ರೆ ಸುಖಾಸುಮ್ಮನೆ ಸರ್ಕಾರದ 262 ಕೋಟಿ ರೂಪಾಯಿ ವ್ಯರ್ಥವಾಗುತ್ತಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಈ ಹಿನ್ನೆಲೆ ತಪ್ಪು ಯಾರೇ ಮಾಡಿದ್ದರೂ ತನಿಖೆ ನಡೆಸಿ ತಪ್ಪು ಕಂಡು ಬಂದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಳ್ಳಲಿ ಎಂಬ ಆಗ್ರಹ ಶಿಕ್ಷಣ ತಜ್ಞರಿಂದ ಕೇಳಿಬಂದಿದೆ.












Click it and Unblock the Notifications