ಗೃಹ ಸಚಿವರಾಗಿ ರಮಾನಾಥ ರೈ: ಇನ್ನೇನು ಅಧಿಕೃತ ಘೋಷಣೆ?
ಮಾಧ್ಯಮಗಳ ವರದಿ ಪ್ರಕಾರ ಡಾ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಸ್ಥಾನವನ್ನು ಕೊನೆಗೂ ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಬಂಟ್ವಾಳದ ಶಾಸಕ ಮತ್ತು ಅರಣ್ಯ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ
ಬೆಂಗಳೂರು, ಆ 21: ಬಂಟ್ವಾಳದ ಶಾಸಕ ಮತ್ತು ಅರಣ್ಯ ಸಚಿವ ರಮಾನಾಥ್ ರೈಗೆ, ತೆರವಾಗಿರುವ ಗೃಹ ಸಚಿವ ಸ್ಥಾನ ನೀಡಲಾಗುವುದು ಎನ್ನುವ ಈ ಹಿಂದೆ ಹರಿದಾಡುತ್ತಿದ್ದ ಸುದ್ದಿಯ ಹಿಂದೆ ಮುಂದೆ ಮತ್ತೆ ರೆಕ್ಕೆಪುಕ್ಕ ಹರಿದಾಡುತ್ತಿದೆ.
ಮಾಧ್ಯಮಗಳ ವರದಿ ಪ್ರಕಾರ ಡಾ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಸ್ಥಾನವನ್ನು ಕೊನೆಗೂ ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಈ ಮಾಸಾಂತ್ಯದ ವೇಳೆಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚುನಾವಣಾ ವರ್ಷದಲ್ಲಿ ರಮಾನಾಥ ರೈ ಅವರನ್ನು ಆಯಕಟ್ಟಿನ ಗೃಹಖಾತೆಗೆ ನಿಯೋಜಿಸಿ, ಪ್ರಮುಖವಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳಿಗೆ ಖಡಕ್ ಸಂದೇಶ ರವಾನಿಸುವ ಉದ್ದೇಶವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆಂದು ತಿಳಿದು ಬಂದಿದೆ.
ಈ ಹಿಂದೆ ಕೂಡಾ ರಮಾನಾಥ ರೈಗೆ ಗೃಹ ಖಾತೆಯ ನೀಡುವ ಬಗ್ಗೆ ವರದಿಯಾಗಿದ್ದವು, ಖುದ್ದು ರೈಗಳೇ ಈ ವಿಷಯವನ್ನು ಸ್ಪಷ್ಟ ಪಡಿಸಿದ್ದರೂ ಕೂಡಾ. ಈಗ ಸಿದ್ದರಾಮಯ್ಯ ಹೈಕಮಾಂಡಿನಿಂದ ಅನುಮತಿ ಪಡೆದಿದ್ದು ಈ ವಾರದಲ್ಲಿ ಅಧಿಕೃತವಾಗಿ ಇದು ಘೋಷಣೆಯಾಗಲಿದೆ ಎಂದು ಟಿವಿ9 ವರದಿ
ಮಾಡಿದೆ.
ರಮಾನಾಥ ರೈ ಜೊತೆ ಇತರ ಮೂವರು ಸಚಿವರಿಗೂ ಸಚಿವ ಸ್ಥಾನದ ಭಾಗ್ಯ ಸಿಗಲಿದೆ ಎನ್ನಲಾಗುತ್ತಿದೆ. ಜೊತೆಗೆ, ವಿಮಲಾ ಗೌಡ ನಿಧನದಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನವನ್ನು ಸಿ ಎಂ ಇಬ್ರಾಹಿಂಗೆ ನೀಡಲು ಸಿಎಂ ನಿರ್ಧರಿಸಿದ್ದಾರೆ. ಮುಂದೆ ಓದಿ..

ಖಡಕ್ ಸಂದೇಶ ರವಾನಿಸಲು ಮುಂದಾಗಿರುವ ಸಿಎಂ
ಸದಾ ಅಶಾಂತಿಯಿಂದ ತುಂಬಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಮಾನಾಥ್ ರೈಗೆ ಗೃಹ ಖಾತೆ ನೀಡುವ ಮೂಲಕ, ಅಲ್ಲಿನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಗೆ ಹಲವು ಸಂದೇಶ ರವಾನಿಸಲು ಸಿಎಂ ಹೊರಟಿದ್ದಾರೆಂದು ಟಿವಿ9 ವರದಿ ಮಾಡಿದೆ.

ರಮಾನಾಥ ರೈ ಅವರನ್ನು ಗೃಹ ಸಚಿವರನ್ನಾಗಿ ನೇಮಿಸುವ ವಿಚಾರ
ಹಾಲೀ ಅರಣ್ಯ ಖಾತೆಯನ್ನು ಹೊಂದಿರುವ ರಮಾನಾಥ ರೈ ಅವರನ್ನು ಗೃಹಖಾತೆಯ ಸಚಿವರನ್ನಾಗಿ ನೇಮಿಸುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಅನುಮತಿ ಪಡೆದಿದ್ದು ತಿಂಗಳೊಳಗೆ ಅಂತಿಮ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.

ಬಹುದಿನಗಳಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಚ್ ಎಂ ರೇವಣ್ಣ
ರಮಾನಾಥ ರೈ ಹೊಂದಿರುವ ಅರಣ್ಯ ಖಾತೆಯನ್ನು ಬಹುದಿನಗಳಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಚ್ ಎಂ ರೇವಣ್ಣ ಅವರಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ, ಕಾಮಕೇಳಿ ವಿಡಿಯೋದಿಂದ ರಾಜೀನಾಮೆ ನೀಡಿದ್ದ ಎಚ್ ವೈ ಮೇಠಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಪ್ರಚಂಡ ವಾಗ್ಮಿ ಸಿ ಎಂ ಇಬ್ರಾಹಿಂ ಅವರಿಗೆ ವಿಧಾನಪರಿಷತ್ ಸ್ಥಾನ
ಇನ್ನು ಸಿಎಂ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಚಂಡ ವಾಗ್ಮಿ ಸಿ ಎಂ ಇಬ್ರಾಹಿಂ ಅವರಿಗೆ ವಿಧಾನಪರಿಷತ್ ಸ್ಥಾನ ಕರುಣಿಸುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ನಾಯಕಿ ವಿಮಲಾ ಗೌಡ ನಿಧನದಿಂದ ತೆರವಾಗಿರುವ ಸ್ಥಾನ ಇಬ್ರಾಹಿಂ ಅವರಿಗೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭರ್ಜರಿ ಆದಾಯ ತಂದುಕೊಡುವ ಅಬಕಾರಿ ಖಾತೆಗೆ ಹೊಸ ಸಚಿವರು
ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಡುವ ಅಬಕಾರಿ ಖಾತೆಯನ್ನು ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ ಅವರಿಗೆ ಹಂಚುವ ಸಾಧ್ಯತೆಯಿದೆ. ಈ ಎಲ್ಲಾ ಸಚಿವ ಸಂಪುಟ ವಿಸ್ತರಣೆ ಆಗಸ್ಟ್ ಮಾಸಾಂತ್ಯದೊಳಗೆ ಆಗುವ ಸಾಧ್ಯತೆಯಿದೆ.












Click it and Unblock the Notifications