Shivarajkumar Health: ಫೋನ್ ಮಾಡಿ ಶಿವಣ್ಣನ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 24: ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಾರೈಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ ಎಂದು ತಿಳಿಸಿದ್ದಾರೆ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಮ್ಮ ಆಯಸ್ಸೆಲ್ಲವನ್ನು ದೇವ್ರು ಶಿವಣ್ಣಗೆ ಕೊಡ್ಲಿ: ಧ್ರುವ ಸರ್ಜಾ
ಇನ್ನೂ ಕೆ.ಡಿ ಫಸ್ಟ್ ಸಾಂಗ್ ರಿಲೀಸ್ ಈವೆಂಟ್ನಲ್ಲಿ ನಟ ಧ್ರುವ ಸರ್ಜಾ ಅವರು ಮಾತನಾಡಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಮೆರಿಕಾದಲ್ಲಿ ಆಪರೇಷನ್ ನಡೆಯುತ್ತಿದೆ. ಅವರು ಕನ್ನಡ ಸಿನಿಮಾರಂಗದ ದೊಡ್ಡ ಆಸ್ತಿ. ಅವರಿಗೆ ನಮ್ಮ ಆಯಸ್ಸು ಸಿಗಲಿ. ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದರು.
ಡಾ.ಶಿವರಾಜ್ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದು ಇಂದು(ಡಿಸೆಂಬರ್24) ಶಸ್ತ್ರಚಿಕಿತ್ಸೆ ನಡೆಯಲಿದೆ. ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳು ಕಾಲ ಅಮೆರಿಕದಲ್ಲಿ ಇರಲಿದ್ದಾರೆ. ಜನವರಿ 26ಕ್ಕೆ ಭಾರತಕ್ಕೆ ಶಿವಣ್ಣ ವಾಪಸ್ ಆಗಲಿದ್ದಾರೆ. ಶಿವಣ್ಣ ಜೊತೆ ಗೀತಾ ಶಿವರಾಜ್ಕುಮಾರ್ ಜೊತೆಯಲ್ಲಿ ಇರಲಿದ್ದಾರೆ. ನೆಚ್ಚಿನ ನಟ ಬೇಗ ಗುಣಮುಖರಾಗಿ ಬರಲಿ ಎಂದು ಬೆಳಗ್ಗೆಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ- ಹವನಗಳ ಜೊತೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸಾಕಷ್ಟು ಅಭಿಮಾನಿಗಳು ದೇವರಿಗೆ ಹರಕೆ ಹೊತ್ತಿದ್ದಾರೆ.
ಚಾಮರಾಜನಗರದಲ್ಲಿಯೂ ಶಿವಣ್ಣನಿಗಾಗಿ ಪೂಜೆ
ಅನಾರೋಗ್ಯದ ಕಾರಣ ನಟ ಶಿವರಾಜ್ ಕುಮಾರ್ ಗೆ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ನಟನ ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ. ಮಲೆ ಮಹದೇಶ್ವರನ ಮೊರೆಹೋದ ಅಭಿಮಾನಿಗಳು ಕೇಶ ಮುಂಡನ ( ಮುಡಿ ಸೇವೆ) ಮಾಡಿಸಿಕೊಡು ವಿಶೇಷ ಹರಕೆ ತೀರಿಸಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ಶಿವಣ್ಣ ಅಭಿಮಾನಿಗಳದ ಉರುಳು ಸೇವೆ ಮಾಡಿದ್ದಾರೆ. ಮೈಸೂರಿನ ಕೆಜಿ ಕೊಪ್ಪಲು ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದ್ದು ನೆಚ್ಚಿನ ನಟ ಶೀಘ್ರ ಗುಣಮುಖರಾಗಿ ಬರಲೆಂದು ಪ್ರಾರ್ಥನೆ ಮಾಡಿದ್ದಾರೆ.
ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು (ಡಿಸೆಂಬರ್ 24)ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಶಿವಣ್ಣ ಅಭಿಮಾನಿಗಳಿಂದ ಪೂಜೆ ಮಾಡಲಾಗಿದೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ನಡೆದಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಶಿವಣ್ಣನ ಹಾರೈಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದೆ. ಮುಡಿಕೊಟ್ಟು, ಉರುಳು ಸೇವೆ ಮಾಡಿದ ಶಿವಣ್ಣ ಫ್ಯಾನ್ಸ್ ಶಿವಣ್ಣ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.












Click it and Unblock the Notifications