ಆಪರೇಷನ್ ಕಮಲದಲ್ಲಿ ಮೋದಿ, ಅಮಿತ್ ಶಾ ಕೂಡ ಭಾಗಿ: ಸಿದ್ದರಾಮಯ್ಯ ಆರೋಪ
ಬೆಂಗಳೂರು, ಜನವರಿ 18: ಬಿಜೆಪಿ ಮುಳುಗುತ್ತಿರುವ ಹಡಗು. ಈ ಸತ್ಯ ಗೊತ್ತಿದ್ದರೂ ಯಾರಾದರೂ ಅದರಲ್ಲಿ ಹೋಗಿ ಕೂರುವ ಪ್ರಯತ್ನ ಮಾಡುತ್ತಾರೆಯೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಆಪರೇಷನ್ ಕಮಲದಲ್ಲಿ ರಾಜ್ಯ ನಾಯಕರು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಲಕ್ಷಣಗಳು ಕಾಣಿಸುತ್ತಿವೆ. ಪಕ್ಷದ ಸಭೆಗೆ ಹಾಜರಾಗುವಂತೆ ಖಡಕ್ ಎಚ್ಚರಿಕೆ ನೀಡಿದ್ದರೂ ಕಾಂಗ್ರೆಸ್ನ ನಾಲ್ವರು ಶಾಸಕರು ಗೈರು ಹಾಜರಾಗಿದ್ದಾರೆ.
ಸಭೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನೂ ಬಿಡದಿಯ ಈಗಲ್ಟನ್ ಮತ್ತು ವಂಡರ್ಲಾ ರೆಸಾರ್ಟ್ನಲ್ಲಿ ಇರಿಸಲು ಕರೆದೊಯ್ದಿದೆ. ಆಪರೇಷನ್ ಕಮಲದ ಭೀತಿಯಿಂದ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ಗೆ ಕರೆದೊಯ್ಯಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಈ ಮಧ್ಯೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಿಜೆಪಿ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಬಿಜೆಪಿಯವರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ನ ಯಾವ ಶಾಸಕರೂ ಅವರೊಂದಿಗಿಲ್ಲ. 76 ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಾಗಿದ್ದರು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ಬಳಿಕ ಅವರು ಮಾಡಿರುವ ಸರಣಿ ಟ್ವೀಟ್ಗಳಲ್ಲಿನ ಆರೋಪಗಳು ಇಲ್ಲಿವೆ.
|
ಬಿಜೆಪಿ ಮುಳುಗುತ್ತಿರುವ ಹಡಗು
ಬಿಜೆಪಿಯವರು ಅದೆಷ್ಟು ಬಾರಿ ಸರ್ಕಾರ ಬೀಳಿಸಲು ಪ್ರಯತ್ನಿಸಿದರೂ, ಮೈತ್ರಿ ಹಿಂದಿಗಿಂತಲೂ ಇನ್ನಷ್ಟು ಒಗ್ಗಟ್ಟಿನಿಂದ ಗಟ್ಟಿಗೊಳ್ಳುತ್ತಿದೆ. ಬಿಜೆಪಿ ಮುಳುಗುತ್ತಿರುವ ಹಡಗು. ಇದು ಗೊತ್ತಿದ್ದು ಗೊತ್ತಿದ್ದು ಅದರಲ್ಲಿ ಹೋಗಿ ಕೂರುತ್ತಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
|
ಮೋದಿ, ಶಾ ಕೂಡ ಭಾಗಿ
ಆಪರೇಷನ್ ಕಮಲದಲ್ಲಿ ರಾಜ್ಯದ ನಾಯಕರು ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆ ನಡೆಸಿರುವ ದಾಳಿ ಎಂದು ನೇರವಾಗಿ ಆರೋಪಿಸಿದ್ದಾರೆ.
|
ನಿಷ್ಠೆಯನ್ನು ಸಾಬೀತುಪಡಿಸಿದ ಶಾಸಕರು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಪಕ್ಷ ನಿಷ್ಠೆಯನ್ನು ಸಾಬೀತುಪಡಿಸಿದ ಶಾಸಕರೆಲ್ಲರಿಗೂ ಧನ್ಯವಾದಗಳು. ಇನ್ನಾದರೂ ಸಮ್ಮಿಶ್ರ ಸರ್ಕಾರ ಉರುಳಿಸುವ ದುಷ್ಟಬುದ್ಧಿಯನ್ನು ಬಿಜೆಪಿ ನಾಯಕರು ಬಿಟ್ಟು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾದ ರೀತಿಯಲ್ಲಿ ರಾಜಕಾರಣ ನಡೆಸಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
|
ಪ್ರಜಾಪ್ರಭುತ್ವಕ್ಕೆ ಕೊಡುವ ಗೌರವ ಇದೆಯೇ?
ಮಾನ್ಯ ನರೇಂದ್ರ ಮೋದಿ ಅವರು ಆಪರೇಷನ್ ಕಮಲವೇ ಪ್ರಜಾಪ್ರಭುತ್ವಕ್ಕೆ ಕೊಡುವ ಗೌರವ; ಇದೇ ಅಚ್ಚೇ ದಿನ್ ಅಂದುಕೊಂಡ ಹಾಗಿದೆ. 'ವಿಕಾಸ್' ಮಾಡಲಾಗದ ಚೌಕಿದಾರನಿಗೆ 'ನಿಯತ್ ಸಾಫ್' ಕೂಡ ಇಲ್ಲ. ಶಾಸಕಾಂಗ ಸಭೆಯ ನಂತರವೂ ಬಿಜೆಪಿಗೆ ಈ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಮನವರಿಕೆಯಾಗದಿದ್ದರೆ ಅದು ಬಿಜೆಪಿ ನಾಯಕರ ಮಹಾ ಮೂರ್ಖತನವಾಗುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications