ಕಾಂಗ್ರೆಸ್ ಬಂದಿದೆ ಕೋಮುಗಲಭೆ ತಂದಿದೆ; ಬಿಜೆಪಿ ಟ್ವೀಟ್ ಬಾಣ!
ಬೆಂಗಳೂರು, ಅಕ್ಟೋಬರ್ 06; ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ. ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರು ಈ ವಿಚಾರದಲ್ಲಿ ವಾಕ್ಸಮರ ನಡೆಸುತ್ತಿದ್ದಾರೆ.
ಗುರುವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಪಕ್ಷದ ನಾಯಕರ ನಿಯೋಗ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿತ್ತು. ಬಳಿಕ ಮಾತನಾಡಿದ್ದ ಕಟೀಲ್, "ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಹಲವಾರು ಕಡೆ ಕೋಮುಗಲಭೆ ನಡೆದಿದೆ, ಈ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಬೇಕು" ಎಂದು ಒತ್ತಾಯಿಸಿದ್ದರು.

ಕರ್ನಾಟಕ ಬಿಜೆಪಿ ಶುಕ್ರವಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದೆ. 'ಕಾಂಗ್ರೆಸ್ ಬಂದಿದೆ ಕೋಮುಗಲಭೆ ತಂದಿದೆ' ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದೆ.
ಬಿಜೆಪಿಯ ಟ್ವೀಟ್
'ಶಿವಮೊಗ್ಗದಲ್ಲಿ ಹಿಂದೂಗಳ ಬದಲು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿದ್ದರೆ ಕರ್ನಾಟಕ ಕಾಂಗ್ರೆಸ್ ಕೈಗೊಳ್ಳುತ್ತಿದ್ದ ಸಂಭವನೀಯ ನಿರ್ಧಾರಗಳು' ಎಂದು ಟ್ವೀಟ್ ಮಾಡಿರುವ ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.
* ಬಿಜೆಪಿ ನಾಯಕರೇ ಮಾಡಿದ್ದಾರೆಂದು ತಲೆಗೆ ಕಟ್ಟುವುದು..!
* ಹಿಂದೂ ಭಯೋತ್ಪಾದನೆ ಶುರುವಾಗಿದೆಯೆಂದು ಬೊಬ್ಬೆ ಹಾಕುವುದು..!
* ಸಿದ್ದರಾಮಯ್ಯ ಅವರಿಂದ ಕೂಡಲೇ ಸ್ಥಳಕ್ಕೆ ಭೇಟಿ, ಪರಿಹಾರ ಘೋಷಣೆ..!
* ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರ ಟಾಸ್ಕ್ ಫೋರ್ಸ್ ಸ್ಥಾಪನೆ..!
* ಶಿವಮೊಗ್ಗ ಘಟನೆ ನಡೆಯಲು ಹಿಂದೂಗಳೇ ಪ್ರಚೋದನೆ ನೀಡಿದ್ದಾರೆಂದು ಪುಕಾರು..!
* ಅಲ್ಪಸಂಖ್ಯಾತರ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ಪರಿಹಾರ ಘೋಷಣೆ..!
* ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ನಿಂತಿದೆ ಎಂದು ಬೆನ್ನುತಟ್ಟುವ ಕೆಲಸ..!
'ವಾಸ್ತವದಲ್ಲಿ ಜಿಹಾದಿಗಳಿಂದ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆಯೇ ಹೊರತು, ಹಿಂದೂಗಳಿಂದ ಜಿಹಾದಿಗಳ ಮೇಲೆ ದಾಳಿ ನಡೆದಿಲ್ಲ. ಜಿಹಾದಿಗಳನ್ನು ಅಮಾಯಕರೆನ್ನಲು, ಕೋಮುಗಲಭೆ ನಡೆಯಲು ಕಾರಣ ಕಾಂಗ್ರೆಸ್.. ಕಾಂಗ್ರೆಸ್.. ಕಾಂಗ್ರೆಸ್..!' ಎಂದು ಬಿಜೆಪಿ ಟ್ವೀಟ್ನಲ್ಲಿ ಆರೋಪ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ವಿದೇಶ ಪ್ರವಾಸದ ಬಗ್ಗೆ ಕಿಡಿ ಕಾರಿದೆ. 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಸಮರ್ಥ ಮಂತ್ರಿಗಳಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಅರಾಜಕತೆ ಸೃಷ್ಟಿಯಾಗಿದೆ' ಎಂದು ಹೇಳಿದೆ.
'ಗೂಂಡಾಗಳು, ಜಿಹಾದಿಗಳು ಬೀದಿಗಿಳಿದು ಕಲ್ಲು ತೂರುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಸೇರಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ಯಥಾ ಮುಖ್ಯಮಂತ್ರಿ ತಥಾ ಮಂತ್ರಿ ಎನ್ನುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಡೆದುಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದೆ.
'ಇಲ್ಲಿ ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ, ಗೃಹ ಸಚಿವರು ವಿದೇಶದಲ್ಲಿ ಬೆಂಕಿ ಕಾಯಿಸಿಕೊಳ್ಳಲು ಹೋಗಿದ್ದಾರೆ' ಎಂದು ಪ್ರತಿಪಕ್ಷ ಆರೋಪ ಮಾಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ವಿದೇಶ ಪ್ರವಾಸ ಕೈಗೊಂಡಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಸಹ ಗೈರು ಹಾಜರಾಗಿದ್ದರು.
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ, 'ಕಾಂಗ್ರೆಸ್ಸಿನ ಗೂಂಡಾ ರಾಜ್ಯದ ಕನಸು ನನಸಾಗುವತ್ತ..! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದು ಕಡೆ ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳ ಅಡಗುತಾಣವಾದರೆ, ಮತ್ತೊಂದಡೆ ರಾಜ್ಯದಲ್ಲಿ ದಲಿತರು, ಹಿಂದುಳಿದವರ ಮೇಲೆ ಹಲ್ಲೆ, ದೌರ್ಜನ್ಯ, ದರೋಡೆ ಪ್ರಕರಣಗಳು ಹೆಚ್ಚಾಗಿವೆ' ಎಂದು ಆರೋಪಿಸಿದೆ.
'ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಗೂಂಡಾಗಳು, ಸಮಾಜಘಾತುಕರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಮಾಯಕರು ಎನ್ನುವ ಕಾರಣದಿಂದಲೇ ಈ ಪರಿ ಪ್ರಕರಣಗಳು ದಾಖಲಾಗಿವೆ..!' ಎಂದು ಹೇಳಿದೆ.












Click it and Unblock the Notifications