ಬೆಂಗಳೂರು 'ಪಿಎಫ್' ಕಾರ್ಮಿಕರ ದಂಗೆಯ ಹಿಂದಿನ ಕಾಣದ 'ಕೈ'ಗಳು?
ಭವಿಷ್ಯನಿಧಿ ವಿಚಾರ ಕೇಂದ್ರದ್ದು, ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಯಾರದ್ದು? ಬೆಂಗಳೂರಿನ ಜನತೆ ಸಿದ್ದರಾಮಯ್ಯ ಸರಕಾರದ ಮುಂದಿಡುತ್ತಿರುವ ಗಂಭೀರ ಪ್ರಶ್ನೆಯಿದು.
ಬೇಕಾದಾಗ ಸಿಗದ ದುಡ್ಡು, ಸತ್ತ ಮೇಲೆ ಸಿಕ್ಕರೆ ಏನು ಪ್ರಯೋಜನ ಎನ್ನುವ ಹಾಗೆ, ನೌಕರರ ಭವಿಷ್ಯನಿಧಿ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಧಾರ ತಪ್ಪು ಎನ್ನುವುದು ಒಪ್ಪಿಕೊಳ್ಳುವ ಮಾತು.
ಆದರೆ, ಯಾವುದೇ ಕಾರ್ಮಿಕ ಸಂಘಟನೆಯ ಅಥವಾ ಮುಖಂಡರ ಬೆಂಬಲವಿಲ್ಲದೇ ರಾಜಧಾನಿಯಲ್ಲಿ ಪ್ರತಿಭಟನೆ ಈ ಮಟ್ಟಿಗೆ ಆವರಿಸಿರುವ ಹಿಂದೆ ಕಾಣದ ಕೈಗಳ 'ಕೈ'ವಾಡವಿದೆಯಾ? (ಏ22ರ ತನಕ ಬೆಂಗಳೂರಲ್ಲಿ ನಿಷೇಧಾಜ್ಞೆ)
ಸೋಮವಾರ (ಏ 18) ಹೊಸೂರು ರಸ್ತೆ ಬೊಮ್ಮನಹಳ್ಳಿಯಲ್ಲಿರುವ ಜಾಕಿ ಗಾರ್ಮೆಂಟ್ಸ್ ಫ್ಯಾಕ್ಟರಿ ಮುಂದೆ ಆರಂಭವಾದ ಈ ಪ್ರತಿಭಟನೆ, ಮಂಗಳವಾರ ನಗರದ ನಾಲ್ಕು ಮೂಲೆಗಳಿಗೆ ವ್ಯಾಪಿಸಿ, ರಾಷ್ಟ್ರ ಮಟ್ಟದಲ್ಲಿ ಕಪ್ಪುಚುಕ್ಕೆಯಂತಾಗಿದ್ದಕ್ಕೆ ರಾಜ್ಯ ಸರಕಾರದ ಭದ್ರತಾ ವೈಫಲ್ಯ ಕಾರಣವಲ್ಲವೇ?
ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು ಎನ್ನುವ ಗಾದೆಮಾತಿನಂತೆ, ಭವಿಷ್ಯನಿಧಿ ಹಣ ಹಿಂಪಡೆಯುವ ವಿಚಾರದಲ್ಲಿ ನೌಕರರ ಪ್ರತಿಭಟನೆ ನಿರೀಕ್ಷಿಸಿದ್ದ ಕೇಂದ್ರ ಸರಕಾರ, ಪ್ರತಿಭಟನೆಯ ಕಾವು ಹೆಚ್ಚಾದಂತೇ ತನ್ನ ನಿರ್ಧಾರವನ್ನು ವಾಪಸ್ ಪಡೆದು ಜಾಣತನ ಪ್ರದರ್ಶಿಸಿದೆ. ಫೆಬ್ರವರಿ ತಿಂಗಳಲ್ಲಿ ಹೊರಡಿಸಿದ್ದ ಅಧಿಸೂಚನೆ ಹಿಂದಕ್ಕೆ ಪಡೆದಿದೆ. (ಬೆಂಗಳೂರಿನ ಶಾಂತಿ ಕದಡಿದವರು ಯಾರು)
ಆದರೆ, ಎರಡು ದಿನಗಳ ಹಿಂದೆ ಆರಂಭವಾದ ಈ ಪ್ರತಿಭಟನೆಗೆ ರಾಜ್ಯ ಗೃಹ ಸಚಿವರು, ಕಾರ್ಮಿಕ ಸಚಿವರು ಮತ್ತು ಪೊಲೀಸ್ ಇಲಾಖೆ ಸ್ಪಂಧಿಸಿದ ರೀತಿ ಮಾತ್ರ 'ಏನೋ ಇಲ್ಲಿ ಎಡವಟ್ಟಾಗಿದೆ' ಎಂದು ಸಂಶಯದ ಕಣ್ಣಿನಿಂದ ನೋಡುವಂತಾಗಿದೆ.
ಬೆಂಗಳೂರು ಪೊಲೀಸ್ ವರಿಷ್ಠರು ಮತ್ತು ಸಿಎಂ ತುರ್ತು ಸಭೆಯ ನಂತರ ನೀಡಿದ ಹೇಳಿಕೆ, ಬೆಂಗಳೂರು 'ಪಿಎಫ್' ಗಲಭೆಯನ್ನು ಒಂದು ಇಲಾಖೆಯ ಹೊಣೆ ಹೊತ್ತವರ ಮೇಲೆ ಗೂಬೆ ಕೂರಿಸುವ ರಾಜಕೀಯ ಮೇಲಾಟ ಯಾಕಿರಬಾರದು ಎನ್ನುವ ಕೆಲವೊಂದು ಸಂದೇಹ ಕಾಡದೇ ಇರದು. ಸ್ಲೈಡಿನಲ್ಲಿ... [ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಪ್ರತಿಭಟನೆ ಏಕೆ ಎಂದು ಗೊತ್ತಿತ್ತೆ?]

ಕಾರ್ಮಿಕ ಸಂಘಟನೆಗಳ ಹೋರಾಟ
ರಾಜ್ಯದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಈ ಮಟ್ಟಕ್ಕೆ ಹಿಂಸಾಚಾರಕ್ಕೆ ಇಳಿದ ಉದಾಹರಣೆಗಳು ಕಮ್ಮಿ. ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ ಎಂದು ಕಡೆಗಣಿಸಿದ್ದು ಒಂದೆಡೆಯಾದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇಲಾಖೆಯವರು ಹೆಚ್ಚಿನ ಸಂಖ್ಯೆಯಲ್ಲಿ ರಜೆಯಲ್ಲಿ ಇದ್ದದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇರಲು ಇನ್ನೊಂದು ಕಾರಣ ಇದ್ದರೂ ಇರಬಹುದು.

ಮುಖ್ಯಮಂತ್ರಿಗಳು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲವಾ?
ರಾಜ್ಯ ರಾಜಧಾನಿ ಹೆಚ್ಚುಕಮ್ಮಿ ಸ್ತಬ್ದವಾಗಿದ್ದರೂ, ದೊರೆ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಿಸಲು ಗಂಭೀರ ಹೆಜ್ಜೆ ಇಟ್ಟ ಲಕ್ಷಣಗಳೇ ಕಾಣುತ್ತಿರಲಿಲ್ಲ. ಪಿಎಫ್ ವಿಚಾರ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವಂತದ್ದು, ಇದಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಅದಕ್ಕಾಗಿ ರಾಜ್ಯದ ಆಸ್ತಿಪಾಸ್ತಿಯನ್ನು ಹಾಳು ಮಾಡಿ, ಇಲ್ಲಿ ಪ್ರತಿಭಟನೆ ನಡೆಸುವುದು ತಪ್ಪು ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಕೇಂದ್ರ ಸರಕಾರದ ಆಸ್ತಿಗಳಿಗೆ ಹಾನಿ ಮಾಡಿದರೆ ಸರಿಯೇ ಎಂದು ಪ್ರಶ್ನಿಸುವಂತಿತ್ತು.

ಸಭೆಯ ನಂತರ ಸಿದ್ದರಾಮಯ್ಯ
ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿಗಳು ಸಭೆ ನಡೆಸಿ, ಇದೊಂದು ಪೊಲೀಸ್ ಇಲಾಖೆಯ ವೈಫಲ್ಯ. ಪೊಲೀಸರು ಉಢಾಫೆ, ಒರಟುತನ ತೋರಿದ್ದರಿಂದ ಗಲಭೆ ಈ ಮಟ್ಟಕ್ಕೆ ಬೆಳೆಯಿತು, ಇದಕ್ಕೆ ಪೊಲೀಸ್ ಇಲಾಖೆಯೇ ಹೊಣೆ ಎಂದು ಹೇಳಿ, ಗೃಹ ಸಚಿವಾಲಯವನ್ನು ಪಿಎಫ್ ಗಲಭೆಗೆ ಹೊಣೆಯನ್ನಾಗಿಸಿದರು. ಊರು ಮುಳುಗಿದ ಮೇಲೆ, ಕೋಟೆ ಬಾಗಿಲು ಹಾಕಿದ ಹಾಗೆ ನಂತರ ನಿಷೇಧಾಜ್ಞೆ ಹೇರಲಾಯಿತು.

ದಲಿತ ಮುಖ್ಯಮಂತ್ರಿ
ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಹೋಗಿ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ್, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಸೋಮವಾರ (ಏ 18) ಮತ್ತೆ ಪ್ರತಿಪಾದಿಸಿದ್ದರು.

ಹೊರಗಿನವರ ಕೈವಾಡ ಸಾಧ್ಯತೆ
ಮಂಗಳವಾರ ಮಧ್ಯಾಹ್ನದ ನಂತರ ಕಾರ್ಮಿಕ ವರ್ಗದವರಲ್ಲದ, ಹೊರಗಿನವರು ಬಂದು ಗಲಭೆ ನಡೆಸಿದ ಸಾಧ್ಯತೆ ಇರಬಹುದು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿರುವುದರಿಂದ ಗಲಭೆಯ ಹಿಂದೆ ಕಾಣದ ಕೈಗಳ ಶಂಕೆ ದಟ್ಟವಾಗಿದೆ.

ಪೊಲೀಸರೇ ಅವಿತುಕೊಂಡರು
ಪ್ರತಿಭಟನೆಯ ಕಾವು ಎಷ್ಟಿತ್ತೆಂದರೆ ಪೊಲೀಸರೇ ಸ್ಟೇಷನ್ ನಲ್ಲಿ ಅವಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುಪ್ತಚರ ವರದಿ ಇದ್ದರೂ, ಪ್ರತಿಭಟನೆಯ ತೀವ್ರತೆಯನ್ನು ಪೊಲೀಸ್ ಇಲಾಖೆ ಕಡೆಗಣಿಸಿದ್ದಕ್ಕೆ ಇದು ಸಾಕ್ಷಿಯಾಗಿತ್ತು.

ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ಎತ್ತಂಗಡಿ ಮಾಡಿಸಿ, ಮುಖಭಂಗ ಅನುಭವಿಸಿದ್ದ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಘಟನೆಗೂ, ತಮಗೂ ಸಂಬಂಧವೇ ಇಲ್ಲದಂತೇ ಬಳ್ಳಾರಿಯಲ್ಲಿದ್ದರು. ಮಾಧ್ಯಮದವರ ಸತತ ಪ್ರಯತ್ನದ ನಂತರ ದೂರವಾಣಿ ಕರೆಗೆ ಸಿಕ್ಕ ನಾಯಕ್, ಬುಧವಾರ (ಏ 20) ಬೆಂಗಳೂರಿಗೆ ಬಂದು ಸಭೆ ನಡೆಸುವುದಾಗಿ ಹೇಳಿದರು. ಒಟ್ಟಿನಲ್ಲಿ ಇದೊಂದು ಭದ್ರತಾ ವೈಫಲ್ಯದ ಜೊತೆಗೆ ಪೂರ್ವಯೋಜಿತ ಗಲಭೆಯಂತೆ ಬಾಸವಾಗುತ್ತಿರುವುದಂತೂ ಹೌದು.












Click it and Unblock the Notifications