ಸೋನಿಯಾ ಸೆರಗು ಹಿಡಿದುಕೊಂಡು ಓಡಾಡುವರಿಗೆ RSS ಬಗ್ಗೆ ಏನು ಗೊತ್ತು?
ಶಿವಮೊಗ್ಗ, ಮೇ 28: ಪಂಡಿತ್ ಜವಾಹರ್ ಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲವನ್ನು ಕೆಣಕಿದ್ದರು. ಇದರಿಂದ ರಾಜ್ಯ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ದ ತಿರುಗಿಬಿದ್ದಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿದೇಶಿ ಮಹಿಳೆಯ ಸೆರಗು ಎಂದು ಪ್ರಸ್ತಾವಿಸಿ ಮತ್ತೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
"ವಿದೇಶಿ ಮಹಿಳೆಯ (ಸೋನಿಯಾ ಗಾಂಧಿ) ಸೆರಗು ಹಿಡಿದುಕೊಂಡು ಓಡಾಡುವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ನೆಹರೂ ಮತ್ತು ಅವರ ಸ್ನೇಹಿತರು ತಮ್ಮ ಅಧಿಕಾರದ ಆಸೆಗೆ ದೇಶವನ್ನೇ ಇಬ್ಭಾಗ ಮಾಡಿದವರು" ಎಂದು ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಕಿಡಿಕಾರಿದ್ದಾರೆ.

"ಆರ್ಎಸ್ಎಸ್ ನವರು ಸ್ವಾತಂತ್ರ್ಯ ಪೂರ್ವದಿಂದಲೂ ದೇಶಭಕ್ತಿ, ಹಿಂದೂತ್ವ ಮೈಗೂಡಿಸಿಕೊಂಡವರು. ಅಧಿಕಾರಕ್ಕೋಸ್ಕರ ಚಾಮುಂಡೇಶ್ವರಿ, ಬಾದಾಮಿಗೆ ಹೋಗುವ ಅಲೆಮಾರಿಯಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಈಗ ಮತ್ತೆ ಸೋಲುವ ಭೀತಿಯಿಂದ ಬೆಂಗಳೂರಿನ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ"ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
"ನೆಹರೂ ಅವರು ಹಿಂದೂಸ್ಥಾನ ಮತ್ತು ಪಾಕಿಸ್ತಾನ ಸೃಷ್ಟಿಸಿದವರು. ಪ್ರಧಾನಿ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿ ಈ ದೇಶಕ್ಕೆ ಒಂದೇ ಸಂವಿಧಾನ ಮತ್ತು ಧ್ವಜ ಎಂಬ ನಿಯಮ ಜಾರಿಗೆ ತಂದವರು. ಹಾಗಾಗಿ, ಮೋದಿ ಮತ್ತು ನೆಹರೂಗೆ ಹೋಲಿಕೆ ಬೇಡ" ಎಂದು ಈಶ್ವರಪ್ಪ ಹೇಳಿದ್ದಾರೆ.

"ಆರ್ಎಸ್ಎಸ್ ನವರು ಮೂಲ ಭಾರತದವರಾ? ಇವರೇನು ದ್ರಾವಿಡರಾ, ಅಫ್ಘಾನಿಸ್ತಾನ ಮೂಲದವರಾ? ಅಂಬೇಡ್ಕರ್ ಈ ಹಿಂದೆ ಹೇಳಿದ್ದರು, ಯಾರು ಚರಿತ್ರೆಯನ್ನು ಒದಿಕೊಂಡು ಇರುವುದಿಲ್ಲವೋ, ಅಂತವರು ಇತಿಹಾಸ ನಿರ್ಮಾಣ ಮಾಡಲಿಕ್ಕೆ ಆಗುವುದಿಲ್ಲವೆಂದು. ಬಿಜೆಪಿ ಸರಕಾರ ಬಂದ ನಂತರ, ಯಾರ ಚರಿತ್ರೆಯನ್ನು ಓದಬೇಕು ಎನ್ನುವ ಗೊಂದಲ ಎಲ್ಲರಲ್ಲೂ ಇದೆ"ಎಂದು ಸಿದ್ದರಾಮಯ್ಯ ಹೇಳಿದ್ದರು.












Click it and Unblock the Notifications