ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಅಮಾನತು
Recommended Video

ಬೆಂಗಳೂರು, ಡಿಸೆಂಬರ್ 29 : ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಲವಾರು ಭ್ರಷ್ಟಾಚಾರದ ಆರೋಪಗಳು ಅವರ ವಿರುದ್ಧ ಕೇಳಿ ಬಂದಿತ್ತು.
ಶನಿವಾರ ವಿಧಾನಸಭೆ ಸಚಿವಾಲಯದಿಂದ ಅಮಾನತು ಆದೇಶವನ್ನು ಹೊರಡಿಸಲಾಗಿದೆ. ಭಷ್ಟಾಚಾರದ ಆರೋಪದ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

2016-17ರಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚ ಮಾಡಿದ ಆರೋಪ ಎಸ್.ಮೂರ್ತಿ ಅವರ ಮೇಲಿತ್ತು. ಈ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ತಂಡ ರಚನೆ ಮಾಡಲಾಗಿತ್ತು. ವರದಿ ಆಧರಿಸಿ, ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ತನಿಖೆಗೆ ಆದೇಶ : ವಿಧಾನಸಭೆ ಸಚಿವಾಲಯದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದರು.
ಸಚಿವಾಲಯದಲ್ಲಿ ಕರೆದಿರುವ ಟೆಂಡರ್ ಹಾಗು ಹಣ ಪಾವತಿ ಸಂಬಂಧ ಕಾರ್ಯದರ್ಶಿ ವಿರುದ್ಧ ಬಂದಿರುವ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವಂತೆ ಎಸಿಬಿ ಎಡಿಜಿಪಿಗೆ ಸೂಚಿಸಿದ್ದಾರೆ. ಕಾರ್ಯದರ್ಶಿ ವಿರುದ್ಧವೇ ದೂರು ಬಂದಿದೆ. ಆದ್ದರಿಂದ, ಆ ಹುದ್ದೆಗಿಂತ ಮೇಲ್ಪಟ್ಟ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು.
ಎಸ್.ಮೂರ್ತಿ ಅವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ನಿವಾಸಿ ಶೇಷಾದ್ರಿ ಅವರು 2017ರ ಅಕ್ಟೋಬರ್ 9ರಂದು ಎಸಿಬಿಗೆ ದೂರು ನೀಡಿದ್ದರು.












Click it and Unblock the Notifications