ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಹಿಂದಿನ ರಹಸ್ಯ ಬಯಲು!
ಬೆಂಗಳೂರು, ಜು. 23: ದಿಢೀರ್ ಅಂತಾ ಕಪ್ಪು-ಬಿಳುಪು ಬಣ್ಣದ ಹಳೆಯ ಟಿವಿಗಳಿಗೆ ಬೇಡಿಕೆ ಬಂದಿದ್ದರ ರಹಸ್ಯ ಬಯಲಾಗಿದೆ. ಕೊರೊನಾ ವೈರಸ್ ಲಾಕ್ಡೌನ್ ಕಾಲದಲ್ಲಿಯೇ ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಬಂದಿತ್ತು. ಲಾಕ್ಡೌನ್ ಕೂಡ ಲೆಕ್ಕಿಸದೆ, ಜೀವಭಯವನ್ನೂ ತೊರೆದು ಅನೇಕರು ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಗಳ ಹುಡುಕಾಟದಲ್ಲಿ ತೊಡಗಿದ್ದರು. ನಿಜವಾಗಿಯೂ ಆ ಟಿವಿಗಳಿಗೆ ಅಷ್ಟೊಂದು ಬೆಲೆ ಇದೆಯಾ ಎಂಬುದು ಹುಡುಕುತ್ತಿದ್ದವರಿಗೂ ಗೊತ್ತಿರಲಿಲ್ಲ.
Recommended Video
ಇಡೀ ಜಗತ್ತು ಕೊರೊನಾ ವೈರಸ್ನ್ನು ಆತಂಕದಿಂದ ಎದುರಿಸುತ್ತಿದ್ದಾಗ ಇದೆಲ್ಲ ಶುರುವಾಗಿತ್ತು. ಎರಡು ದಶಕಗಳಿಂದ ಮನೆಯ ಮೂಲೆ ಸೇರಿದ್ದ ಟಿವಿಗಳಿಗೆ ಒಮ್ಮೆಲೆ ಲಕ್ಷ ಲಕ್ಷ ರೂಪಾಯಿಗಳ ಬೇಡಿಕೆ ಎಲ್ಲಿಂದ ಬಂತು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಕಪ್ಪು-ಬಿಳುಪು ಟಿವಿಗಳ ಹಿಂದಿನ ರಹಸ್ಯ ಇದೀಗ ಬಯಲಾಗಿದೆ.

ಹಳೆ ಟಿವಿಗೆ ಕೋಟಿ ರೂ
ಇತ್ತೀಚೆಗೆ ರಾಜ್ಯದಾದ್ಯಂತ ಜನರು ಹಳೆಯ ಬ್ಲ್ಯಾಕ್ & ವೈಟ್ TV ಹಿಂದೆ ಬಿದ್ದಿದ್ದರು. ಆ ಹಳೆಯ ಬ್ಲ್ಯಾಕ್ ಆ್ಯಂಡ್ ವೈಟ್ TVಗೆ ಲಕ್ಷ ಲಕ್ಷ ರೂಪಾಯಿಗಳನ್ನು ರೂಪಾಯಿಗಳನ್ನು ಕೊಟ್ಟು ಖರೀದಿಸುತ್ತಾರೆ ಎಂಬಮಾಹಿತಿ ಹಿನ್ನೆಲೆಯಲ್ಲಿ ಹುಡುಕಾಟ ಜೋರಾಗಿಯೆ ನಡೆದಿತ್ತು. ಹಳೆಯ ಟಿವಿಗಳ ಹುಡುಕಾಟದಲ್ಲಿ ವಂಚನೆ ನಡೆಯುತ್ತಿದೆ ಎಂಬ ಮಾಹಿತಿಯೂ ಪೊಲೀಸರಿಗೆ ಇತ್ತು.
ಸದ್ಯ ನೂರು ರೂಪಾಯಿಯೂ ಬೆಲೆ ಬಾಳದ ಹಳೆಯ ಟಿವಿಗಳಿಂದ ಕೋಟ್ಯಂತರ ರೂಪಾಯಿಗಳು ಸಿಗಬಹುದು ಎಂಬ ನಂಬಿಕೆಯಲ್ಲಿ ಜನರೂ ವದಂತಿ ನಂಬಿದ್ದರು.
ಹಳೆಯ ಟಿವಿಗಳಲ್ಲಿ ರೆಡ್ ಮರ್ಕ್ಯೂರಿ ಇರುತ್ತದೆ. ಅದಕ್ಕೆ ಕೋಟ್ಯಂತರ ರೂಪಾಯಿಗಳ ಬೆಲೆಯಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಇದೆಲ್ಲ ಆಗಿತ್ತು. ಮಂಡ್ಯ ಜಿಲ್ಲೆಯಲ್ಲಿಯೂ ವಂಚನೆ ಆಗಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.

ರೆಡ್ ಮರ್ಕ್ಯೂರಿ ವಂಚನೆ
ಹೀಗಾಗಿ ಲಕ್ಷ ಲಕ್ಷ ರೂಪಾಯಿ ಹಣ ಸಿಗುತ್ತದೆ ಎಂದು ಜನಸಾಮಾನ್ಯರೂಹಳೆಯ ಟಿವಿಗಳಿಗಾಗಿ ಹುಡುಕಾಟ ನಡೆಸಿದ್ದರು. ವದಂತಿ ನಂಬಿ, ಮಂಡ್ಯ ಜಿಲ್ಲೆಯಲ್ಲಿ ಹಲವು ಜನರು ವಂಚನೆಗೆ ಒಳಗಾಗಿದ್ದರು. ವಂಚನೆ ಜಾಡು ಹಿಡಿದ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸರು ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ವದಂತಿಯನ್ನೆ ಬಂಡವಾಳ ಮಾಡಿಕೊಂಡು ಜನರಿಗೆ ವಂಚನೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ನ್ನು ಮಂಡ್ಯದ ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.
ವದಂತಿ ಸೃಷ್ಟಿಸಿ ಜನರನ್ನು ವಂಚನೆ ಮಾಡುತ್ತಿದ್ದ 8 ಜನರ ತಂಡವನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.

ವಂಚನೆ ಹೇಗೆ?
ವಂಚಕರ ತಂಡ ಹಳೆಯ ಕಪ್ಪು-ಬಿಳುಪು ಟಿವಿಗಳಲ್ಲಿ ರೆಡ್ ಮರ್ಕ್ಯೂರಿ ಟ್ಯೂಬ್ಗೆ ಹೆಚ್ಚಿನ ಬೆಲೆ ಕೊಡುವುದಾಗಿ ನಂಬಿಸಿ, ಜನರಿಂದ ಟಿವಿ ಖರೀದಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮುಗ್ದ ಜನರನ್ನು ನಂಬಿಸಿ ವಂಚನೆ ಮಾಡುತ್ತಿತ್ತು.
ಇದೇ ವಂಚಕರ ತಂಡದಿಂದ ವಂಚನೆಗೊಳಗಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡು, ಮಳವಳ್ಳಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರ ಬಲೆಗೆ ವಂಚಕರ ತಂಡ ಇದೀಗ ಸಿಕ್ಕಿಬಿದ್ದಿದೆ. ಬಂಧಿತ ಆರೋಪಿಗಳು ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ 22 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಹೀಗಾಗಿ ವಂಚಕರ ಜಾಲ ಇನ್ನೂ ದೊಡ್ಡದಾಗಿರುವ ಸಂಶಯವಿದೆ.

ವಜಾಗೊಂಡ ಪೊಲೀಸ್
ಸೇವೆಯಿಂದ ವಜಾಗೊಂಡಿರುವ ಪೊಲೀಸ್ ಕಾನ್ಸ್ಟೆಬಲ್ ಕೂಡ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಜೊತೆಗೆ ಕೊಳ್ಳೇಗಾಲ ಗ್ರಾಮದ ಬಾಬು, ಸಲ್ಲು, ಸಾಜೀದ್, ಸುರೇಶ ಮೂರ್ತಿ, ಪಿ. ರಾಜೇಶ್, ಉಮೇಶ್, ಸಿ.ರಾಜೇಶ್ ಹಾಗೂ ಉಮೇಶ್ ಇತರ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 10.36 ಲಕ್ಷ ರೂಪಾಯಿಗಳು ನಗದು ಹಣ ಸೇರಿದಂತೆ 1 ಕಾರು, 2 ಬೈಕ್ ಜಪ್ತಿ ಮಾಡಿದ್ದಾರೆ.
ಹಳೆಯ ಟಿವಿಗೆ ಲಕ್ಷ ಲಕ್ಷ ರೂಪಾಯಿ ಕೊಡಿಸುವ ನೆಪದಲ್ಲಿ ರೆಡ್ ಮರ್ಕ್ಯೂರಿ ದಂಧೆ ನಡೆಸಿ ವಂಚನೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಳವಳ್ಳಿ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಪರಶುರಾಮ್ ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ. ಜೊತೆಗೆ ಜಿಲ್ಲೆಯ ಜನರು ಇಂತಹ ವದಂತಿ ನಂಬಿ ವಂಚನೆಗೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಎಚ್ಚರಿಕೆ ಕೊಟ್ಟಿದ್ದ ತಜ್ಞರು
ಈ ಹಳೆಯ ಟಿವಿ, ರೆಡ್ ಮರ್ಕ್ಯೂರಿ ವಂದಂತಿ ಕುರಿತು ಒನ್ಇಂಡಿಯಾ ವಿಸ್ತ್ರತ ವರದಿ ಪ್ರಕಟ ಮಾಡಿತ್ತು. ಜೊತೆಗೆ ತಜ್ಞರ ಅಭಿಪ್ರಾಯವನ್ನೂ ಪ್ರಕಟಿಸಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಮಟೆರಿಯಲ್ ಸೈನ್ಸ್ ವಿಭಾಗದ ಪ್ರೊ. ಮಹಾವೀರ್ ಕುರಕುರಿ ಅವರು, ಪಾದರಸ ಅಥವಾ ಅದರ ಉಪ ಉತ್ಪನ್ನಗಳಿಂದ ಬಾಂಬ್ ತಯಾರಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಹಾಗಾಗಿ ಅದೊಂದು ವದಂತಿ ಮಾತ್ರ.
ವಾಸ್ತವದಲ್ಲಿ ರೆಡ್ ಮರ್ಕ್ಯೂರಿ ಎಂಬ ರಾಸಾಯನಿಕ ವಸ್ತು ಇಲ್ಲ ಎಂದು ವಿಜ್ಞಾನಿಗಳೂ ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಹಳೆಯ ಟಿವಿಗಳಲ್ಲಿನ ರಾಸಾಯನಿಕ ವಸ್ತುಗಳನ್ನು ಮುಟ್ಟಿ ಅಪಾಯವನ್ನು ಮೈಮೇಲೆ ತಂದುಕೊಳ್ಳಬಾರದು ಎಂದು ಪ್ರೊ. ಮಹಾವೀರ ಕುರಕುರಿ ಎಚ್ಚರಿಸಿದ್ದರು.












Click it and Unblock the Notifications