ದ್ವಿತೀಯ ಪಿಯುಸಿ ಫಲಿತಾಂಶ: 2.60 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಲು ಕಾರಣವೇನು?
ಬೆಂಗಳೂರು, ಜೂನ್ 18: ವಿದ್ಯೆ ಬೇರು ಮಟ್ಟದಿಂದಲೇ ಗಟ್ಟಿಯಾಗಬೇಕು. ವಿದ್ಯೆಯ ಬೇರು ಗಟ್ಟಿಯಾಗಿಲ್ಲವಾದರೆ ಮರ ಒಂದು ಹಂತಕ್ಕೆ ಬೆಳೆದಾಗ ಬುಡಮೇಲಾಗಿ ಬಿದ್ದುಬಿಡುತ್ತೆ. ಪಿಯುಸಿ ಫಲಿತಾಂಶವೂ ಇದನ್ನೇ ಸಾರಿ ಸಾರಿ ಹೇಳುತ್ತಿದೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 38.22% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೋವಿಡ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸುಲಭವಾಗಿ ಉತ್ತೀರ್ಣ ಮಾಡಿದ್ದರ ಪರಿಣಾಮ ಕಣ್ಮುಂದೆ ಕಾಣಿಸುತ್ತಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಶೈಕ್ಷಣಿಕ ವರ್ಷ 2021-22 ರಲ್ಲಿ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಈ ವಿದ್ಯಾರ್ಥಿಗಳು 2019-20ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆದಿದ್ದರು. ಮೊದಲ ಕೋವಿಡ್ ಅಲೆಯ ಭೀತಿಯಲ್ಲಿದ್ದ ಸಮಯದಲ್ಲಿ ವಿದ್ಯಾರ್ಥಿಗಳು ಬಹಳಷ್ಟು ಹೆದರಿದ್ದರು. ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ರವರು ಸರಳ ಪ್ರಶ್ನೆ ಪತ್ರಿಕೆಯನ್ನು ಮಾಡಿ ಪರೀಕ್ಷೆಯನ್ನು ಮಾಡಿದ್ದರು. 72.42% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಪಿಯುಸಿ ಫಲಿತಾಂಶ; ಹುಬ್ಬಳ್ಳಿಯ ವಿದ್ಯಾರ್ಥಿನಿಗೆ 3ನೇ Rank
ಕೋವಿಡ್ ಸಮಯದಲ್ಲಿ ಗ್ರೇಸ್ ಮತ್ತು ಸುಲಭ ಪತ್ರಿಕೆಯ ಸದುಪಯೋಗ ಪಡಿಸಿಕೊಂಡು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಎಸ್ಎಸ್ಎಲ್ಸಿ ಸುಲಭದ ಪತ್ರಿಕೆಯ ಪರಿಣಾಮ ದ್ವಿತೀಯ ಪಿಯುಸಿಯಲ್ಲಿ ಕಠಿಣವಾಗಿ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಕೋವಿಡ್ನ ಪರಿಣಾಮ ಕ್ಷಣ ಮೇಲೆ
ದ್ವಿತೀಯ ಪಿಯುಸಿ ಕಳೆದ ಸಾಲಿಗೆ ಹೋಲಿಕೆ ಮಾಡಿದರೇ 0.8% ವಿದ್ಯಾರ್ಥಿಗಳು ಹೆಚ್ಚಿಗೆ ಉತ್ತೀರ್ಣರಾಗಿದ್ದಾರೆ. ಅಂದರೆ 61.88% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಪರೀಕ್ಷೆಯಲ್ಲಿ 38.22% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೋವಿಡ್ನ ಪರಿಣಾಮ ಶಿಕ್ಷಣ ಮೇಲೆ ಬಿದ್ದಿರುವುದು ಗೊತ್ತಾಗುತ್ತಿದೆ.
ಸಂಯೋಜನೆ ಅನುತ್ತೀರ್ಣತೆ
ದ್ವಿತೀಯ ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಸಂಯೋಜನೆಗಳಿರುತ್ತವೆ. ಸಂಯೋಜನೆ ಹಾಜರಾದವರು ಉತ್ತೀರ್ಣ ಅನುತ್ತೀರ್ಣ ವಿವರ ಹೀಗಿದೆ..
ಕಲಾ ವಿಭಾಗ 2,27,929 (ಹಾಜರಿ) 1,11,032 (ಉತ್ತೀರ್ಣ) 1,16,897 (ಫೇಲ್)
ವಾಣಿಜ್ಯ ವಿಭಾಗ 2,45,350 (ಹಾಜರಿ) 1,59,409 (ಉತ್ತೀರ್ಣ) 85941 (ಫೇಲ್)
ವಿಜ್ಞಾನ ವಿಭಾಗ 2,10,284 (ಹಾಜರಿ) 1,52,525 (ಉತ್ತೀರ್ಣ) 57759 (ಫೇಲ್)
ಈ ಅಂಕಿ ಅಂಶಗಳನ್ನು ಗಮನಿಸಿದಾಗ ವಿದ್ಯಾರ್ಥಿಗಳ ಉತ್ತೀರ್ಣತೆಯ ಶೇಕಡವಾರು ಕುಸಿಯುತ್ತಿರುವಿದು ಗಮನಿಸಬೇಕಿದೆ. ಗುಣಮಟ್ಟದ ಶಿಕ್ಷಣವನ್ನು ಕೊಡುವುದು ಬೇರು ಮಟ್ಟದಲ್ಲೇ ಅವಶ್ಯಕ ಎಂಬುದು ತಿಳಿಯುತ್ತಿದೆ. ಆದರೂ ಸರ್ಕಾರ ತನ್ನ ಸಮರ್ಥನೆಯನ್ನು ಮಾತ್ರ ಅಂಕಿ ಅಂಶಗಳ ಆಧಾರದಲ್ಲಿಯೇ 0.8% ಉತ್ತೀರ್ಣತೆ ಹೆಚ್ಚಾಗಿ ಎನ್ನುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯಾನುಸಾರ ಲೆಕ್ಕ ಹಾಕಿದರೇ ಶೇ 38.22% ಅನ್ನೋದು ಹೆಚ್ಚು ಅಂತಲೇ ಪರಿಗಣಿಸಬೇಕಿದೆ.
ದ್ವಿತೀಯ ಪಿಯುಸಿ ಮಕ್ಕಳಿಗೂ ಬೇಕಿದೆ ಕಾಳಜಿ
ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮ ಪಡಿಸಲು ಶಾಲೆಗಳ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿಯೂ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ನೋಟ್ಸ್. ಪಾಸಿಂಗ್ ಪ್ಯಾಕೇಜ್ ನ ಪಿಡಿಎಫ್ ಮಾಡಿ ಶಿಕ್ಷಕರಿಗೂ ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ಹೇಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷವಾದ ಗಮನವನ್ನು ಹರಿಸುತ್ತಾರೆ. ಆದರೆ ಪಿಯುಸಿ ವಿಚಾರದಲ್ಲಿ ಮಾತ್ರ ಕಾಳಜಿ ಕಡಿಮೆಯಾಗಿಬಿಡುತ್ತೆ. ಎಸ್ಎಸ್ಎಲ್ಸಿಯಲ್ಲಿ ಶೇಕಡವಾರು ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ ಮುಗ್ಗರಿಸುವಂತಾಗುತ್ತಿದೆ. ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಶಾಲಾ ಮಕ್ಕಳಂತೆ ವಿಶೇಷ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ.
ಶಿಕ್ಷಣ ಸಚಿವ ಮನೋಸ್ಥೈರ್ಯದ ಮಾತು
ಸೋಲೇ ಗೆಲುವಿನ ಸೋಪಾನ. ಉತ್ತೀರ್ಣರಾದವನ ಅವಕಾಶ ಮುಕ್ತಾಯ ಅನುತ್ತೀರ್ಣ ಆದವರಿಗಿದೆ ಮತ್ತೊಂದು ಅವಕಾಶ ಎನ್ನುವುದು ರೂಢಿಯಲ್ಲಿರುವ ಮಾತಾಗಿದೆ. ಅನುತ್ತೀರ್ಣರಾದವರಿಗೆ ಆಗಸ್ಟ್ ನಲ್ಲಿ ಪೂರಕ ಪರೀಕ್ಷೆ ಎದುರಾಗಲಿದ್ದು ವಿದ್ಯಾರ್ಥಿಗಳು ಧೈರ್ಯಗುಂದದೆ ಪರೀಕ್ಷೆಗೆ ತಯಾರಿಯನ್ನು ಮಾಡಬೇಕಿದೆ. ಶಿಕ್ಷಕರ ಬಳಿಯಲ್ಲಿ ಮತ್ತು ಹಳೇಯ ಪ್ರಶ್ನೆ ಪತ್ರಿಕೆಗಳನ್ನು ಪುನರಾವರ್ತಿಸಿದರು ಉತ್ತೀರ್ಣತೆಗೆ ಸಮಸ್ಯೆಯಿಲ್ಲ. ‘‘ಫಲಿತಾಂಶದಲ್ಲಿ ಹಿನ್ನೆಡೆಯಾದವರು ನಿರಾಶರಾಗಬಾರದು. ಈ ಪರೀಕ್ಷೆಯೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು. ಪರೀಕ್ಷೆ ಹಾಗೂ ಫಲಿತಾಂಶ ನಮ್ಮ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು'' ಎಂದು ಸಚಿವ ಬಿಸಿ ನಾಗೇಶ್ ಕಿವಿ ಮಾತು ಹೇಳಿದರು.