ಮಾ.12ರ ಬುಧವಾರದಿಂದ ದ್ವಿತೀಯ ಪಿಯು ಪರೀಕ್ಷೆ
ಬೆಂಗಳೂರು, ಮಾ.11 : ಲೋಕಸಭೆ ಚುನಾವಣೆ ಕಾವಿನ ನಡುವೆಯೇ ಬುಧವಾರದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದೆ. ಒಟ್ಟು 6,15,870 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಮಾ.12ರ ಬುಧವಾರ ಆರಂಭವಾಗುವ ಪರೀಕ್ಷೆ ಮಾರ್ಚ್ 27ಕ್ಕೆ ಮುಕ್ತಾಯವಾಗಲಿದೆ. ರಾಜ್ಯಾದ್ಯಂತ 984 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನೆರವು ಪಡೆಯಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. [ಪರೀಕ್ಷೆ ವೇಳಾಪಟ್ಟಿ]

ಪರೀಕ್ಷೆಯಲ್ಲಿ ನಕಲು ತಡೆಯಲು ಸಾಮಾನ್ಯ ಪರೀಕ್ಷಾ ಕೇಂದ್ರಗಳಿಗೆ ಇಬ್ಬರು, ಸೂಕ್ಷ್ಮ ಕೇಂದ್ರಕ್ಕೆ ಮೂವರು ಹಾಗೂ ಅತಿ ಸೂಕ್ಷ್ಮ ಕೇಂದ್ರಕ್ಕೆ ನಾಲ್ವರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರ ನೇತೃತ್ವದಲ್ಲಿ ಗಸ್ತು ತಂಡ ರಚಿಸಲಾಗಿದ್ದು, ತಂಡದಲ್ಲಿ ಒಬ್ಬರು ಮಹಿಳೆ ಸೇರಿದಂತೆ ಐವರು ಸದಸ್ಯರು ಇರುತ್ತಾರೆ.
ಒಟ್ಟು 6,15,870 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 984 ಒಟ್ಟು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 726 ಸಾಮಾನ್ಯ, 188 ಸೂಕ್ಷ್ಮ ಮತ್ತು 70 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿವೆ. ಅಂದಹಾಗೆ ಎಸ್ಎಸ್ಎಲ್ ಸಿ ಪರೀಕ್ಷೆಗಳು ಮಾರ್ಚ್ 28ರಿಂದ ಆರಂಭವಾಗಲಿದ್ದು ಏಪ್ರಿಲ್ 9ರವರೆಗೆ ನಡೆಯಲಿದೆ. [ಎಸ್ಎಸ್ಎಲ್ ಸಿ ವೇಳಾಪಟ್ಟಿ]
ಮಾ.29ರಂದು ಫಲಿತಾಂಶ : ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮಾ.29 ರಂದು ಪ್ರಕಟಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ. ಮೊದಲು ಮಾ.31 ರಂದು ಫಲಿತಾಂಶ ಪ್ರಕಟಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, 31 ರಂದು ಸೋಮವಾರ ಯುಗಾದಿ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಘೋಷಿಸಲಾಗಿದೆ. ಆದ್ದರಿಂದ ಮಾ 29ರಂದು ಫಲಿತಾಂಶ ಪ್ರಕಟಿಸಲು ಸುತ್ತೋಲೆ ಹೊರಡಿಸಲಾಗಿದೆ.












Click it and Unblock the Notifications