ಬಿಟ್ ಕಾಯಿನ್ ದಂಧೆಯಲ್ಲಿ ಯಾರಿದ್ದಾರೆ? ಎಸ್ಡಿಪಿಐ ಬಿಚ್ಚಿಟ್ಟ ಮಾಹಿತಿ!
ಬೆಂಗಳೂರು, ನ. 07: ಮುಂದಿನ ವಿಧಾನಸಭಾ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ತಯಾರಿ ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 2 ದಿನಗಳ ರಾಜ್ಯ ಪ್ರತಿನಿಧಿಗಳ ಸಭೆ ನಡೆಸಿ ಎಸ್ಡಿಪಿಐ ಕಾರ್ಯಕಾರಣಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರಮುಖವಾಗಿ 11 ನಿರ್ಣಯಗಳನ್ನು ಎಸ್ಡಿಪಿಐ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹನ ಸಚಿವ ಅಮಿತ್ ಶಾ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಪ್ರಮುಖ ಪ್ರತಿಪಕ್ಷಗಳು ಧ್ವನಿಎತ್ತದೆ ಮೌನವಾಗಿವೆ. ಪ್ರಮುಖ ಪಕ್ಷಗಳು ಕೇಂದ್ರ ಸರ್ಕಾರದ ದುಷ್ಟ ಅಜೆಂಡಾಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಎಸ್ಡಿಪಿಐ ಮಾತ್ರ ಸಂಘಪರಿವಾರ ನೇತೃತ್ವದ ಸರ್ಕಾರದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷ ಎಂ.ಕೆ. ಫೈಝಿ ಆರೋಪಿಸಿದ್ದಾರೆ. ಜೊತೆಗೆ ಪ್ರಮುಖವಾಗಿ ಬಿಟ್ ಕಾಯಿನ್ ದಂಧೆ ಕುರಿತು ಎಸ್ಡಿಪಿಐ ಗಂಭೀರ ಆರೋಪ ಮಾಡಿದ್ದು, ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಅದರೊಂದಿಗೆ ಎಸ್ಡಿಪಿಐ ರಾಜ್ಯ ಪ್ರತಿನಿಧಿಗಳು ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳು ಮುಂದಿವೆ.

ಬೀಟ್ ಕಾಯಿನ್ ದಂಧೆಯಲ್ಲಿ ಯಾರಿದ್ದಾರೆ?
ಕಾನೂನು ಬಾಹಿರವಾಗಿರುವ ಬಿಟ್ ಕಾಯಿನ್ ದಂಧೆಯಲ್ಲಿ ರಾಜ್ಯದ ಪ್ರಭಾವಶಾಲಿಗಳು ಶಾಮೀಲಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ಬಿಟ್ ಕಾಯಿನ್ ದಂಧೆಯಲ್ಲಿ ರಾಜ್ಯದ ಪ್ರಭಾವಿಗಳು ಶಾಲೀಲಾಗಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಕಳಂಕ ತರುವ ವಿಷಯವಾಗಿದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಂಡು, ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸಿ, ಈ ಅಕ್ರಮ ವ್ಯವಹಾರದಲ್ಲಿ ತೊಡಗಿರುವ ದಂಧೆಕೋರರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸ ಬೇಕು ಎಂದು ಎಸ್ಡಿಪಿಐ ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯಕೈಗೊಂಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಜೊತೆಗೆ ಮತ್ತಷ್ಟು ನಿರ್ಣಯಗಳನ್ನು ಎಸ್ಡಿಪಿಐ ತೆಗೆದುಕೊಂಡಿದೆ.

ರಾಜ್ಯದಲ್ಲಿ ಚರ್ಚ್ ಸಮೀಕ್ಷೆ ಅಸಾಂವಿಧಾನಿಕ!
ರಾಜ್ಯದಲ್ಲಿ ಚರ್ಚ್ಗಳ ಸಮೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ಅಸಾಂವಿಧಾನಿಕವಾಗಿದ್ದು, ಸಂವಿಧಾನದ 14 ಮತ್ತು 21 ನೇ ವಿಧಿಯಡಿಯಲ್ಲಿ ದೊರೆತಿರುವ ಸಮಾನತೆ ಮತ್ತು ಖಾಸಗಿ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿ ಕೊಂಡು ಈ ರೀತಿಯಾಗಿ ಅಸಾಂವಿಧಾನಿಕ ಆದೇಶ ಹೊರಡಿಸಿರುವುದು ಖಂಡನೀಯ. ಆದುದರಿಂದ ಈ ಆದೇಶವನ್ನು ಸರ್ಕಾರ ವಾಪಸ್ಸುಪಡೆಯಬೇಕು ಎಂಬ ನಿರ್ಣಯವನ್ನು ರಾಜ್ಯ ಎಸ್ಡಿಪಿಐ ಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸರೋಜಿನಿ ಮಹಿಷಿ ವರದಿಯನ್ನು ತಕ್ಷಣ ಜಾರಿಗೆ ತನ್ನಿ!
ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಸರೋಜಿನಿ ಮಹಿಷಿ ವರದಿಯನ್ನು ತಕ್ಷಣ ಜಾರಿಗೆ ತರಬೇಕು. ಆ ಮೂಲಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿ ಕೂಡಬೇಕು ಎಂಬ ಹಕ್ಕೋತ್ತಾಯದ ನಿರ್ಣಯವನ್ನು ಎಸ್ಡಿಪಿಐ ತೆಗೆದುಕೊಂಡಿದೆ. ಅದರೊಂದಿಗೆ ಸಂಘಪರಿವಾರ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆಯೋಜಿಸಿರುವುದು ಶಾಂತಿಯ ನಾಡಾಗಿರುವ ಕರ್ನಾಟಕಕ್ಕೆ ಸವಾಲಾಗಿದೆ. ರಾಜ್ಯದಲ್ಲಿ ಆಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿ.ಎಚ್.ಪಿ ಹಾಗೂ ಬಜರಂಗದಳ ಸಂಘಟನೆಗಳ ಪುಂಡಾಟಿಕೆಗೆ ಸರ್ಕಾರ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು ಎಂದು ಎಸ್ಡಿಪಿಐ ನಿರ್ಣಯ ತೆಗೆದುಕೊಂಡು ಒತ್ತಾಯಿಸಿದೆ.

ಉದ್ದೇಶಪೂರ್ವಕವಾಗಿ ವರದಿ ಕಡೆಗಣನೆ!
158 ಕೋಟಿ ಖರ್ಚು ಮಾಡಿ ತಯಾರಿಸಲಾಗಿದ್ದ 'ಸಾಮಾಜಿಕ ಮತ್ತು ಶೈಕ್ಷಣಿಕ ವರದಿ'ಯು 2016ರಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಅದಿನ್ನೂ ಅಂಗೀಕಾರವಾಗಿಲ್ಲ. ವಿವಿಧ ಪಕ್ಷಗಳ ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರ ಈ ವರದಿಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಸರ್ಕಾರ ಬಡ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವರದಿಯನ್ನು ತಕ್ಷಣ ಅಂಗೀಕರಿಸಿ, ಬಡ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸ ಬೇಕು ಎಂದು ನಿರ್ಣಯಿಸಿ ಆಗ್ರಹಿಸಿದೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಮಾರಕ!
ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವುದಲ್ಲದೇ, ಸರ್ಕಾರಿ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಬಹಳ ಮುಖ್ಯವಾಗಿ ಪಠ್ಯ ಪುಸ್ತಕಗಳ ವಿಷಯಗಳನ್ನು ನಿರ್ಧರಿಸುವ ಹಕ್ಕು ರಾಜ್ಯದಿಂದ ಕಸಿದು ಕೊಳ್ಳುವ ಷಡ್ಯಂತ್ರ ಸೇರಿದಂತೆ ಅನೇಕ ಲೋಪದೋಷಗಳಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿ ಯಾವ ಕಾರಣಕ್ಕೂ ರಾಜ್ಯದಲ್ಲಿ ಅನುಷ್ಠಾನಗೊಳಿಸ ಬಾರದು ಎಂದು ಎಸ್ಡಿಪಿಐ ಒತ್ತಾಯಿಸಿದೆ.
ಜೊತೆಗೆ ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ತ್ವರಿತವಾಗಿ ನಡೆಸಬೇಕು, ವಕ್ಫ್ ಆಸ್ತಿ ಹಗರಣದಲ್ಲಿ ಕೇಳಿ ಬಂದಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಜನರ ಹಿತಾಸಕ್ತಿಗಾಗಿ ಈ ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ತಕ್ಷಣ ಕನಿಷ್ಠ ಪಕ್ಷ 50 ರೂಪಾಯಿಗಳನ್ನು ಕಡಿಮೆ ಮಾಡಬೇಕು, ಕರ್ನಾಟಕ ರಾಜ್ಯದಲ್ಲಿ ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು, ಮತಾಂತರ ನಿಷೇಧ ಎಂಬ ಸಂವಿಧಾನ ವಿರೋಧಿ ಕಾನೂನನ್ನು ಜಾರಿಗೊಳಿಸ ಬಾರದು ಎಂಬ ಪ್ರಮುಖ ನಿರ್ಣಯಗಳನ್ನು ಎಸ್ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ತೆಗೆದುಕೊಂಡಿದೆ.












Click it and Unblock the Notifications