ಹಲ್ಲೆಗೊಳಗಾದ ಪರಿಶಿಷ್ಟ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ ಎಸ್ಡಿಪಿಐ!
ಬೆಂಗಳೂರು, ಸೆ. 09: ಬಸ್ನಲ್ಲಿ ಪ್ರಯಾಣಿಸುತ್ತಿರುವಾಗ ಹಲ್ಲೆಗೊಳಲಾಗಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ ಗ್ರಾಮದ ದಲಿತ ಹೆಣ್ಣುಮಕ್ಕಳನ್ನು ಎಸ್ಡಿಪಿಐ ನಿಯೋಗ ಭೇಟಿ ಮಾಡಿ ಧೈರ್ಯ ತುಂಬಿದೆ.
ಎಸ್ಡಿಪಿಐ ರಾಜ್ಯ ನಾಯಕರನ್ನೊಳಗೊಂಡ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ, ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿ ಧೈರ್ಯವನ್ನು ತುಂಬಿದೆ. ಆ ಬಳಿಕ ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದ ನಿಯೋಗ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ಒದಗಿಸಲು ಮನವಿ ಮಾಡಿದೆ. ಎಸ್ಡಿಪಿಐ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಪರಿಹಾರ ಹಾಗೂ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ ಎಂದು ಎಸ್ಡಿಪಿಐ ತಿಳಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ ಗ್ರಾಮದ ಪರಿಶಿಷ್ಟ ಜಾತಿಯ ಹೆಣ್ಣುಮಕ್ಕಳು ಚಿಂತಾಮಣಿ ಶಾಲೆಗೆ ಬಸ್ನಲ್ಲಿ ದಿನನಿತ್ಯ ಪ್ರಯಾಣ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಕೆಲವು ಪುಂಡರ ಗುಂಪು ನಿರಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಹೆಣ್ಣುಮಕ್ಕಳು ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಪೋಷಕರು ಬುದ್ಧಿವಾದ ಹೇಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಪುಂಡಾಟ ಕೊನೆಗೊಳ್ಳಲಿಲ್ಲ.

ಕಳೆದ ಸೆ. 04 ರಂದು ಬೆಳಗ್ಗೆ 8:30 ಕ್ಕೆ ಕಾಲೇಜಿಗೆ ಹೋಗುತ್ತಿರುವಾಗ ಬಸ್ಸಿನ ಒಳಗೆ ನುಗ್ಗಿ ಹೆಣ್ಣುಮಕ್ಕಳನ್ನು ಎಳೆದು ಹಿಗ್ಗಾ ಮುಗ್ಗಾ ತಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಹೋದ 6 ಜನ ಸಂಬಂಧಿಕರನ್ನು ಸುಮಾರು 50 ಜನರ ಗುಂಪು ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಗಾಯಗೊಂಡ ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 9 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳನ್ನು ತಕ್ಷಣ ಬಂಧಿಸಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು IPC ಕಲಂ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಬೇಕೆಂದು ಎಸ್ಡಿಪಿಐ ಒತ್ತಾಯಿಸಿದೆ. ನಿಯೋಗದಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಮುಜಾಹಿದ್ ಪಾಷ, ರಾಜ್ಯ ಸಮಿತಿ ಸದಸ್ಯರಾದ ಬಿ. ಆರ್. ಭಾಸ್ಕರ್ ಪ್ರಸಾದ್, ಕೋಲಾರ ಜಿಲ್ಲಾಧ್ಯಕ್ಷರಾದ ಶಾಹುಝಮಾ ಹಾಗೂ ಸ್ಥಳೀಯ ಕಾರ್ಯಕರ್ತರು ಇದ್ದರು.

ದೆಹಲಿಯಲ್ಲಿ ಅಧಿಕಾರಿಯ ಅತ್ಯಾಚಾರ, ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ:
ದೆಹಲಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿಯ ಹತ್ಯೆ ಘಟನೆ ಅತ್ಯಂತ ಭಯಾನಕ ಮತ್ತು ಆಘಾತಕಾರಿಯಾದುದು. ಈ ಕ್ರೂರ ಕೊಲೆಗಾರನಿಗೆ ಗರಿಷ್ಠ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಒತ್ತಾಯಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಈ ಕಚೇರಿಯೊಳಗೆ ಪ್ರತಿ ದಿನ 3ರಿಂದ 4 ಲಕ್ಷ ರೂಪಾಯಿ ಭ್ರಷ್ಟಾಚಾರದ ಹಣವನ್ನು ಠೇವಣಿ ಇಡಲಾಗುತ್ತಿತ್ತು. ಇಂತಹ ಹಣವನ್ನು ಇಡಲು ರಹಸ್ಯ ಲಾಕರ್, ರಹಸ್ಯ ಬೀಗದಂತಹ ಅನೇಕ ರಹಸ್ಯ ಸಂಗತಿಗಳನ್ನು ಮರೆಮಾಚಲು ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. ಆಕೆಯ 'ಅಕ್ರಮ ಸಂಬಂಧ'ದ ಕಾರಣಕ್ಕಾಗಿ ಆಕೆಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂಬ ಶರಣಾದ ಆರೋಪಿಯ ಹೇಳಿಕೆಯನ್ನು ಮಾತ್ರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬ ಮಾಡಿರುವ ಆರೋಪಗಳ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿರುವುದಾಗಿ ಎಸ್ಡಿಪಿಐ ತಿಳಿಸಿದೆ.

ಕೇಂದ್ರದಲ್ಲಿ ಫ್ಯಾಶಿಸ್ಟರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತದಲ್ಲಿ, ವಿಶೇಷವಾಗಿ ದೆಹಲಿ ಮತ್ತು ಯುಪಿಯಲ್ಲಿ ಮಹಿಳೆಯರ ಘನತೆ, ಗೌರವ ಮತ್ತು ಸುರಕ್ಷತೆಯು ಅಪಾಯದಲ್ಲಿದೆ. ಅತ್ಯಾಚಾರ ಮತ್ತು ಕೊಲೆ, ಕೆಲವು ಗುಂಪಿನ ಜನರ ಸವಲತ್ತು ಅಥವಾ ಹಕ್ಕು ಎಂಬಂತಾಗಿದೆ. ಏಕೆಂದರೆ ಈ ಘೋರ ಅಪರಾಧದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಬದಲು ಸರ್ಕಾರ ಮತ್ತು ಅಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿರುವುದು ಕಂಡುಬರುತ್ತಿದೆ. ಅತ್ಯಾಚಾರಿಗಳ ಬಗ್ಗೆ ಅಧಿಕಾರಿಗಳ ಈ ಆಲಸ್ಯ ಮನೋಭಾವವು ಸಮಾಜವಿರೋಧಿಗಳನ್ನು ಇಂತಹ ಕೃತ್ಯಗಳಲ್ಲಿ ಮತ್ತೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಫೈಝಿ ಎಚ್ಚರಿಸಿದ್ದಾರೆ.
Recommended Video
ಪೊಲೀಸರ ನಿರ್ಲಕ್ಷ್ಯ ಹಾಗೂ ಈ ಧೋರಣೆಯನ್ನು ಎಂ.ಕೆ.ಫೈಝಿ ತೀವ್ರವಾಗಿ ಖಂಡಿಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ, ಹತ್ಯೆಯ ಹಿಂದಿನ ರಹಸ್ಯವನ್ನು ಭೇದಿಸುವಂತೆ ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಆಗಸ್ಟ್ 26 ರಂದು ಈ ಅಮಾನುಷ ಘಟನೆ ನಡೆದಿದೆ ಎಂದು ವರದಿಯಾಗಿದೆ ಎಂದು ಎಸ್ಡಿಪಿಐ ತಿಳಿಸಿದೆ.












Click it and Unblock the Notifications