‘ಸ್ಕೋರ್’ 12ನೇ ಆವೃತ್ತಿ ತರಬೇತಿ ಶಿಬಿರ: ಕಾರ್ಡಿಯೊಥೊರಾಸಿಕ್ ವಿದ್ಯಾರ್ಥಿಗಳಿಗೆ 2 ದಿನಗಳ ತರಬೇತಿ ಶಿಬಿರ
ಮುದ್ದೇನಹಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಹೆಚ್ಚಿಸಿಕೊಳ್ಳಲು ಅಪರೂಪದ ಅವಕಾಶವಾಗಿ ಇಲ್ಲಿನ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್ಎಂಎಸ್ಐಎಂಎಸ್ಆರ್) ನಲ್ಲಿ ಏಪ್ರಿಲ್ 25 ಮತ್ತು 26ರಂದು ಪ್ರತಿಷ್ಠಿತ 'ಸ್ಕೋರ್' (SCORE - Sri Sathya Sai Comprehensive Orientation & Rapid Revision for Examination) ಕಾರ್ಯಕ್ರಮದ 12ನೇ ಆವೃತ್ತಿಯ ತರಬೇತಿ ಶಿಬಿರ ನಡೆಯಲಿದೆ.
ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆ (ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸೆ) ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ತಮ್ಮ ವಿಷಯಜ್ಞಾನವನ್ನು ಪುನರ್ಪರಿಶೀಲಿಸಿಕೊಳ್ಳಲು ಮತ್ತು ಕೌಶಲ್ಯಗಳನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಈ ಎರಡು ದಿನಗಳ ತರಬೇತಿ ಶಿಬಿರ ವೇದಿಕೆಯಾಗಲಿದೆ.

ದೇಶದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞ ಪರೀಕ್ಷಕರು ಮತ್ತು ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ಶಸ್ತ್ರಚಿಕಿತ್ಸಾ ವಿಧಾನಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ವೈದ್ಯಕೀಯ ಮಂಡಳಿ ನಾಲ್ಕು ಕ್ರೆಡಿಟ್ ಅಂಕಗಳ ಮಾನ್ಯತೆ ನೀಡಿದೆ.
ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಬಹುನಿರೀಕ್ಷಿತ 'ಶ್ರೀ ಸತ್ಯ ಸಾಯಿ ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸೆ' ಪಠ್ಯಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಆಶೀರ್ವಾದದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಇಸ್ರೋ ನಿವೃತ್ತ ವಿಜ್ಞಾನಿ ಪದ್ಮಶ್ರೀ ಡಾ. ಎಂ. ಅಣ್ಣಾದುರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಶ್ರೀ ಪ್ರಸಾದ್ ಗುಂಡುಮೊಗುಲ ಮತ್ತು ಡಾ. ಸತ್ಯಜಿತ್ ಬೋಸ್ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮವನ್ನು ಎಸ್ಎಂಎಸ್ಐಎಂಎಸ್ಆರ್ ಅಕಾಡೆಮಿಕ್ಸ್ ವಿಭಾಗದ ನಿರ್ದೇಶಕ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಿ.ಎಸ್. ಹಿರೇಮಠ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.














Click it and Unblock the Notifications