ಶಾಲೆ ಆರಂಭಿಸಲು ಸಿದ್ಧತೆ: ವಿದ್ಯಾರ್ಥಿಗಳಿಗೆ ಬಸ್ಪಾಸ್ ವಿತರಿಸಲು ಸಾರಿಗೆ ಇಲಾಖೆಗೆ ಮನವಿ
ಬೆಂಗಳೂರು, ಮೇ 5: ಕೋವಿಡ್ನಿಂದಾಗಿ ಎರಡು ಶೈಕ್ಷಣಿಕ ವರ್ಷಗಳು ವಿದ್ಯಾರ್ಥಿಗಳ ಪಾಲಿಗೆ ಮುಳುವಾಗಿತ್ತು. ಕೋವಿಡ್ ಬಳಿಕ ಈ ಶೈಕ್ಷಣಿಕ ವರ್ಷವನ್ನು ಬೇಸಿಗೆ ರಜೆಯನ್ನು ಕಡಿತಗೊಳಿಸಿ ಮೇ 16ರಿಂದಲೇ ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ವಿದ್ಯಾರ್ಥಿಗಳನ್ನು ಮೇ 16 ರಿಂದಲೇ ಶಾಲೆಗಳಿಗೆ ಕರೆತರಲು ಬೇಕಾದ ಸಿದ್ದತೆಗಳನ್ನು ಮಾಡುಕೊಳ್ಳುವಂತೆ ಸಂಪನ್ಮೂಲ ಅಧಿಕಾರಿಗಳ ಮೂಲಕ ಮುಖ್ಯೋಪದ್ಯಾಯರಿಗೆ ಸೂಚನೆಯನ್ನು ನೀಡಲಾಗಿದೆ.
ಕೋವಿಡ್ ನಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಶಾಲೆಯ ಮುಖವನ್ನೇ ನೋಡಿಲ್ಲ. ಜ್ವರ, ಕೆಮ್ಮು, ಶೀತದ ಕಾರಣದಿಂದಾಗಿ ತಿಂಗಳುಗಟ್ಟಲೇ ಶಾಲೆಯಿಂದ ಮಗು ಹೊರ ಉಳಿಯುವಂತಾಗಿತ್ತು. 2019-20ಮತ್ತು 2020-21ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ನಡೆಸದೇ ಉತ್ತೀರ್ಣ ಮಾಡಲಾಗಿದೆ. 2021-22 ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳು ನಡೆದರೂ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಕೆಲವರು ಮರು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಾರೆ. ಆದರೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ತೀರಾ ಕ್ಷೀಣಿಸಿರುವುದು ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ರವರಿಗೆ ಮನವರಿಕೆಯಾಗಿದೆ. ಇದರಿಂದಾಗಿ ಮೇ 16ರಿಂದ ಶಾಲೆಯನ್ನು ಪ್ರಾರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬುನಾದಿ ಶಿಕ್ಷಣವನ್ನು ಮತ್ತು ಬ್ರಿಡ್ಜ್ ಕೋರ್ಸ್ ಗಳನ್ನು ಮಾಡಲು ಸೂಚಿಸಲಾಗಿದೆ.

ಸಾರಿಗೆ ಇಲಾಖೆಗೆ ಮಾಹಿತಿ
ಮೇ16 ಶಾಲೆಗಳು ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವರು ಸಾರಿಗೆ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು ಸಾರಿಗೆ ಇಲಾಖೆಗೆ ಕೇಳಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹಳೇಯ ಐಡಿ ಕಾರ್ಡ್ ಅಥವಾ ಶಾಲೆಯಿಂದ ಕೊಡುವ ಲೆಟರ್ ಅನ್ನು ಗಮನಿಸಿ ಪಾಸ್ ವಿತರಿಸಬೇಕು. ಬಿಎಂಟಿಸಿ , ಕೆಎಸ್ಆರ್ಟಿಸಿ ಸೇರಿದಂತೆ ಯಾವುದೇ ನಿಗಮದ ಸಾರಿಗೆಯಿಂದಲು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಮನವಿಯನ್ನು ಮಾಡಲಾಗಿದೆ.

ಶಾಲೆ ರಿಪೇರಿ ಕೆಲಸಗಳಿದ್ದರೆ ಮುಗಿಸಲು ಸೂಚನೆ
ಶಾಲೆಗೆ ಮಕ್ಕಳು ಬರಬೇಕೆಂದರೆ ಶಾಲೆಯ ವಾತಾವರಣ ಪರಿಶುದ್ದವಾಗಿರಬೇಕು. ವಿದ್ಯಾರ್ಥಿಗಳು ಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ಉಲ್ಲಾಸಿತರಾಗಬೇಕು ಎಂಬ ಕಾರಣಕ್ಕೆ ಶಾಲೆಯನ್ನು ಸ್ವಚ್ಛಗೊಳಿಸಿ ಅಣಿಯಾಗಲು ತಿಳಿಸಲಾಗಿದೆ. ಇನ್ನು ಶಾಲೆಯ ಒಳಾಂಗಣದಲ್ಲಿ ಯಾವುದೇ ರೀತಿಯ ರಿಪೇರಿ ಕೆಲಸಗಳಿದ್ದರೇ ಹಾಗೂ ಬಣ್ಣವನ್ನು ಬಳಿಯಬೇಕಿದ್ದರೆ ಆ ಕಾರ್ಯಗಳನ್ನು ಮೇ 16ರ ಒಳಗೆ ಮುಗಿಸಿಕೊಳ್ಳುವಂತೆ ಮುಖ್ಯೋಪಾದ್ಯಾಯರಿಗೆ ಈಗಾಗಲೇ ಸೂಚಿಸಲಾಗಿದೆ.

ಶಾಲೆಯ ಪುನರಾರಂಭ ಮುಂದೂಡುವಂತೆ ಶಾಸಕರ ಮನವಿ
ಬೇಸಿಗೆ ಬಿರು ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಾಲೆಯ ಪುನರಾರಂಭವನ್ನು ಜೂನ್ 15 ಮಾಡಬೇಕೆಂದು ಉತ್ತರ ಕರ್ನಾಟಕ ಮೂಲದ ಕೆೆಲವು ಶಾಸಕರು ಶಿಕ್ಷಣ ಸಚಿವರನ್ನು ಕೇಳಿಕೊಂಡಿದ್ದಾರೆ. ಆದರೆ ಎರಡು ಶೈಕ್ಷಣಿಕ ವರ್ಷಗಳು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿರುವುದರಿಂದ ಶೈಕ್ಷಣಿಕ ವರ್ಷವನ್ನು ಮೇ 16 ರಂದೇ ಪ್ರಾರಂಭಿಸಬೇಕಿದೆ. ಮಕ್ಕಳಿಗೆ ಪೂರ್ವಭಾವಿಯಾಗಿ ಕೆಲವೊಂದು ವಿಷಯಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಬೇಸಿಕ್ ಎಜುಕೇಷ್ ಮತ್ತು ಬ್ರಿಡ್ಜ್ ಕೋರ್ಸ್ ಮೂಲಕ ಶೈಕ್ಷಣಿಕ ವರ್ಷ 2022-23ನೇ ಸಾಲಿನಲ್ಲಿ ಕಲಿಕೆಗೆ ಯಾವುದೇ ಯಾವುದೇ ರೀತಿಯ ಅಡ್ಡಿ ಆತಂಕಗಳು ಬಾರದಂತೆ ನೋಡಿಕೊಳ್ಳಬೇಕಿದೆ. ಇದರಿಂದಾಗಿ ಶಾಲೆಯನ್ನು ಬೇಸಿಗೆ ರಜೆಯನ್ನು ಕಡಿತಗೊಳಿಸಿ ಶಾಲೆಯನ್ನು ಪ್ರಾರಂಭಿಸುತ್ತಿದ್ದೇವೆೆ ಎಂದು ಶಾಸಕರಿಗೆ ಶಿಕ್ಷಣ ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಮರಳಿ ಬಾ ಶಾಲೆಗೆ
ಇನ್ನು ಶಾಲೆಯನ್ನು ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸವನ್ನು ಮಾಡುವಂತೆ ಸೂಚಿಸಲಾಗಿದೆ. ಯಾವೊಬ್ಬ ವಿದ್ಯಾರ್ಥಿಯು ಶಿಕ್ಷಣದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಮಕ್ಕಳನ್ನು ಮರಳಿ ಶಾಲೆಗೆ ಕರೆದುಕೊಂಡು ಬರುವ ಕಾರ್ಯವನ್ನು ಮುಖ್ಯೋಪಾದ್ಯಾಯರ ಜವಾಬ್ದಾರಿಗೆ ವಹಿಸಲಾಗಿದೆ. ಒಟ್ಟಾರೆ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡು ಶೈಕ್ಷಣಿಕ ವರ್ಷ ಸುಗಮವಾಗಿ ನಡೆಯುವಂತೆ ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ.












Click it and Unblock the Notifications