ಪತಿ ಅತ್ಯಾಚಾರವೆಸಗಿದರೂ ವಿನಾಯ್ತಿ ಇಲ್ಲ: ಹೈಕೋರ್ಟ್ ಆದೇಶಕ್ಕೆ ತಡೆ ನೀಡದ ಸುಪ್ರೀಂ
ಬೆಂಗಳೂರು ಮೇ 10. ವಿವಾಹವೆನ್ನುವುದು ಪತಿಗೆ ಪತ್ನಿಯ ಮೇಲೆ ಬಲವಂತದ ಅತ್ಯಾಚಾರವೆಸಗಲು ಲೈಸೆನ್ಸ್ ಅಲ್ಲ, ಹೆಂಡತಿ ಮೇಲೆ ರೇಪ್ ಮಾಡುವ ಗಂಡನಿಗೆ ಯಾವುದೇ ವಿನಾಯ್ತಿ ಇರಬಾರದು ಎಂದು ಕರ್ನಾಟಕ ಹೈಕೋರ್ಟ್ನ ಮಹತ್ವದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಪತ್ನಿ ತನ್ನ ವಿರುದ್ಧ ಹೂಡಿರುವ ಅತ್ಯಾಚಾರ ಪ್ರಕರಣ ರದ್ದು ಮಾಡಬೇಕೆಂದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಮಂಗಳವಾರ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಹೇಮಾ ಕೊಯ್ಲಿ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಸೇವೆಯಿಂದ ವಜಾಗೊಂಡ 10 ವರ್ಷದ ಬಳಿಕ ಮಹಿಳೆಗೆ ಹೈಕೋರ್ಟ್ ನಿಂದ 'ನ್ಯಾಯ'..!
ಆಗ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿದ್ದಾರ್ಥ್ ದವೆ, ಇದೇ 29ರಂದು ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ. ಹಾಗಾಗಿ ತಡೆ ನೀಡಬೇಕು ಎಂದು ಕೋರಿದರು.
ಆದರೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ, ಪತ್ನಿ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲಾಗುವುದು, ಈಗಾಗಲೇ ಕೇವಿಯಟ್ ಸಲ್ಲಿಕೆಯಾಗಿದೆ. ವಿಷಯದ ಬಗ್ಗೆ ವಿವರವಾದ ವಿಚಾರಣೆ ಅಗತ್ಯವಿದೆ ಎಂದರು.
ಪತ್ನಿ ಪರ ಹಿರಿಯ ನ್ಯಾಯವಾದಿ ಇಂದಿರಾ ಜೈ ಸಿಂಗ್ ವಾದ ಮಂಡಿಸಿ, ಅಧೀನ ನ್ಯಾಯಾಲಯದಲ್ಲಿ 5 ವರ್ಷದಿಂದ ವಿಚಾರಣೆ ನನೆಗುದಿಗೆ ಬಿದ್ದಿದೆ, ವಿಚಾರಣೆ ಆರಂಭಕ್ಕಾಗಿ ದೀರ್ಘಕಾಲದಿಂದ ಪತ್ನಿ ಕಾಯುತ್ತಿದ್ದಾರೆ ಎಂದರು. ನ್ಯಾಯಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಿತು.
ಹೈಕೋರ್ಟ್ ಆದೇಶವೇನು?
ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಅಭಿಷೇಕ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಅತ್ಯಾಚಾರ ಆರೋಪದಲ್ಲಿ ಪತಿಯೇ ಇದ್ದರೂ ಅವರಿಗೆ ವಿನಾಯ್ತಿ ನೀಡಬಾರದು, ಆ ಬಗ್ಗೆ ಶಾಸಕಾಂಗ ಚಿಂತನೆ ನಡೆಸಬೇಕಾಗುತ್ತದೆ ಎಂದು ಆದೇಶಿಸಿತ್ತು.
ಗಂಡನ ವಿರುದ್ಧವೇ ಹೆಂಡತಿ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಹಾಗಾಗಿ ಪತಿಗೆ ವಿನಾಯಿತಿ ಇದ್ದರೂ ಆತನ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಅತ್ಯಾಚಾರದ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ.ವಿವಾಹ ಪತ್ನಿಯ
ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.
"ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವ ಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ. ಇದರಲ್ಲಿ ಯಾವುದೇ ರಾಜೀ ಇಲ್ಲ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"ಇಂತಹ ಬಲವಂತದ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯ್ತಿ ರದ್ದು ಮಾಡುವುದೇ ಸೂಕ್ತ. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು'' ಎಂದು ಹೇಳಿರುವ ನ್ಯಾಯಪೀಠ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಇದು ಅಪರಾಧ. ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ಇಂಗ್ಲೆಂಡ್ ನಲ್ಲೂ ಪತಿಗಿರುವ ವಿನಾಯಿತಿ ತೆಗೆಯಲಾಗಿದೆ ಎಂದು ಹಲವು ದೇಶಗಳಲ್ಲಿನ ಸ್ಥಿತಿಯನ್ನು ವಿವರಿಸಿದೆ.
ಪ್ರಕರಣದ ಹಿನ್ನೆಲೆ ಏನು?:
ಓಡಿಶಾ ಮೂಲದ ದಂಪತಿ ಬೆಂಗಳೂರಿನ ಸರ್ಜಾಪುರದಲ್ಲಿ ನೆಲೆಸಿದ್ದರು. 42 ವರ್ಷದ ಗಂಡ 27 ವರ್ಷದ ತನ್ನ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಲೈಂಗಿಕ ಗುಲಾಮಳಂತೆ ತನ್ನನ್ನು ಬಳಸಿಕೊಂಡಿದ್ದಾಗಿ ಗಂಡನ ವಿರುದ್ಧವೇ ಪತ್ನಿ ಅತ್ಯಾಚಾರ ಆರೋಪ ಮಾಡಿದ್ದರು. ಅಪ್ರಾಪ್ತ ಮಗಳ ಮೇಲೂ ಪತಿರಾಯ ಲೈಂಗಿಕ ದೌರ್ಜನ್ಯವೆಸಗಿದ್ದ. ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣಾ ನ್ಯಾಯಾಲಯ ಅತ್ಯಾಚಾರ ಆರೋಪ ಕೈಬಿಡಲು ನಿರಾಕರಿಸಿತ್ತು. ಅತ್ಯಾಚಾರ ಆರೋಪ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಪತಿ, ಆಕೆಯನ್ನು ವಿವಾಹವಾಗಿ ವರಿಸಿರುವ ಕಾರಣ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂದು ವಾದ ಮಂಡಿಸಿದ್ದನು.