ಹೈಕೋರ್ಟ್ಗೆ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು
ಬೆಂಗಳೂರು ಜು.20: ಹೈಕೋರ್ಟ್ನ ಹಾಲಿ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಸೇರಿದಂತೆ ಐವರು ಹಿರಿಯ ಜಿಲ್ಲಾ ನ್ಯಾಯಮೂರ್ತಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಪದನ್ನೋತಿ ನೀಡಲಾಗುವುದು. ಈ ಕುರಿತು ಹೈಕೋರ್ಟ್ ಸಲ್ಲಿಸಿದ್ದ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ನ ಕೊಲಿಜಿಯಂ ಒಪ್ಪಿಗೆ ನೀಡಿದೆ.
ಜುಲೈ 19ರಂದು ನಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಐವರು ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಪದನ್ನೋತಿ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲು ನಿರ್ಧರಿಸಲಾಗಿದೆ.
ಅನಿಲ್ ಭೀಮಸೇನ್ ಕಟ್ಟಿ, ಗುರುಸಿದ್ಧಯ್ಯ ಬಸವರಾಜ, ಚಂದ್ರಶೇಖರ್ ಮೃತ್ಯುಂಜಯ ಜೋಷಿ, ಉಮೇಶ್ ಮಂಜುನಾಥ್ಭಟ್ ಅಡಿಗ ಹಾಗೂ ತಲಕಾಡು ಗಿರಿಗೌಡ ಶಿವಶಂಕರೇಗೌಡ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಪದನ್ನೋತಿ ನೀಡುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.
ಈ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು, ಕೇಂದ್ರದ ಕಾನೂನು ಸಚಿವಾಲಯ ಅವುಗಳನ್ನು ಪರಿಶೀಲಿಸಿ ರಾಷ್ಟ್ರಪತಿಗೆ ಕಳುಹಿಸಲಿದ್ದಾರೆ. ರಾಷ್ಟ್ರಪತಿ ಭವನದಿಂದ ನೇಮಕದ ಅಧಿಕೃತ ಆದೇಶ ಹೊರಬೀಳಲಿದೆ.
44 ನ್ಯಾಯಮೂರ್ತಿಗಳು:
ಹೈಕೋರ್ಟ್ ನಲ್ಲಿ ಸದ್ಯ ಹಂಗಾಮಿ ಸಿಜೆ ಸೇರಿ 44 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಹೊಸದಾಗಿ ಐದು ಮಂದಿ ಸೇರ್ಪಡೆಯಾದರೆ ನ್ಯಾಯಮೂರ್ತಿಗಳ ಸಂಖ್ಯೆ 49ಕ್ಕೆ ಏರಿಕೆಯಾಗಲಿದೆ. ಸಿಜೆ ಹುದ್ದೆ ಸದ್ಯ ಖಾಲಿ ಇದೆ. ಸಿಜೆಯಾಗಿದ್ದ ರಿತುರಾಜ್ ಅವಸ್ಥಿ ಜು.2ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಆ ಜಾಗಕ್ಕೆ ಹಂಗಾಮಿ ಸಿಜೆಯನ್ನಾಗಿ ಹಿರಿಯ ನ್ಯಾ. ಅಲೋಕ್ ಅರಾಧೆ ಅವರನ್ನು ನೇಮಕ ಮಾಡಲಾಗಿದೆ.