ಕಾವೇರಿ ನದಿ ಉಳಿಸಿ, ಕಾವೇರಿ ನದಿ ಸಂರಕ್ಷಿಸಿ!
ಮಡಿಕೇರಿ, ಜೂನ್ 15 : ಕಾವೇರಿ ನದಿ ಸ್ವಚ್ಛತೆಗಾಗಿ ತಲಕಾವೇರಿಯಿಂದ ತಮಿಳುನಾಡಿನ ನಾಗಪಟ್ಟಣಂವರೆಗೆ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು. ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಯುಕ್ತಾಶ್ರಯದಲ್ಲಿ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾವೇರಿ ನದಿ ಉಗಮ ಸ್ಥಳ ತಲಕಾವೇರಿಯಲ್ಲಿ ಸಾಧು ಸಂತರು, ಗಣ್ಯರು, ಅತಿಥಿಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ 'ಕಾವೇರಿ ನದಿ ಉಳಿಸಿ, ಕಾವೇರಿ ನದಿ ಸಂರಕ್ಷಿಸಿ' ಎಂಬ ಸ್ಟಿಕ್ಕರ್ನ್ನು ಬಿಡುಗಡೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. [ತಾಂಬೂಲ ಪ್ರಶ್ನೆ : ಕಾವೇರಿ ಜಲಮೂಲಕ್ಕೆ ಕಾದಿದೆ ಆತಂಕ]

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಸನ್ಯಾಸಿ ಸಂಘದ ಜಂಟಿ ಕಾರ್ಯದರ್ಶಿ ರಮಾನಂದ ಪುರಿ ಸ್ವಾಮೀಜಿ ಅವರು, ದಕ್ಷಿಣ ಭಾರತದ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಉತ್ತರ ಭಾರತದ ಪ್ರಮುಖ ನದಿಯಾದ ಗಂಗೆಯನ್ನು ಶುದ್ದೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಅದೇ ರೀತಿ ಕಾವೇರಿ ನದಿ ಸ್ವಚ್ಛತೆಗೂ ಗಮನಹರಿಸಬೇಕಿದೆ. ಆ ನಿಟ್ಟಿನಲ್ಲಿ ಗಮನ ಸೆಳೆಯುವುದರ ಜತೆಗೆ, ಜನರಲ್ಲಿ ಕಾವೇರಿ ನದಿಯ ಪಾವಿತ್ರ್ಯತೆ ಬಗ್ಗೆ ಅರಿವು ಮೂಡಿಸಲು ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. [ಗಂಗಾ ಮಾತೆಯಂತೆ ಕಾವೇರಿಗೂ ಸ್ವಚ್ಛತಾ ಭಾಗ್ಯ]

ಪ್ರಮುಖರಾದ ಟಿ.ಪಿ.ರಮೇಶ್, ಎ.ಕೆ.ಮನುಮುತ್ತಪ್ಪ, ಸಂಕೇತ್ ಪೂವಯ್ಯ, ಚಿ.ನಾ.ಸೋಮೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಅವರು ಕಾವೇರಿ ಸ್ವಚ್ಚತಾ ಆಂದೋಲನ ಕುರಿತು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಜೂ.16ರಂದು ಬಲ್ಲಮಾವಟಿ, ನೆಲಜಿ, ನಾಪೋಕ್ಲು, ಜೂ.17ರಂದು ಬಲಮುರಿ, ಜೂ.18ರಂದು ಕೊಂಡಂಗೇರಿ, ನೆಲ್ಯಹುದಿಕೇರಿ, ಜೂ.19ರಂದು ನಂಜರಾಯಪಟ್ಟಣ, ದುಬಾರೆ, ಜೂ.20ರಂದು ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ಜೂನ್ 21ರಂದು ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಣನೂರು, ರಾಮನಾಥಪುರದಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದರು. [ಜೀವನದಿ ಕಾವೇರಿ ತೀರ್ಥೋದ್ಭವದ ಪೌರಾಣಿಕ ಹಿನ್ನೆಲೆ]

ಕೋಡಿ ಮೋಟಯ್ಯ ಅವರು ವಿಶೇಷ ಪೂಜಾ ಸಂದರ್ಭದಲ್ಲಿ ನಾಡಿನಲ್ಲಿ ಉತ್ತಮ ಮಳೆಯಾಗಿ, ಎಲ್ಲರಲ್ಲೂ ಸಮೃದ್ಧಿ ತರುವಂತಾಗಲಿ ಎಂದು ಪ್ರಾರ್ಥಿಸಿದರು. [ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ : ಮದ್ರಾಸಿ]












Click it and Unblock the Notifications