Satish Jarkiholi: ಈಗ ಬಂದಿರುವ ಲಿಸ್ಟ್ ಅಂತಿಮ: ಖಾತೆ ಹಂಚಿಕೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಸಚಿವರ ಖಾತೆ ಹಂಚಿಕೆ ಈಗಾಗಲೇ ಅಂತಿಮವಾಗಿದೆ, ಸದ್ಯ ಮಾಧ್ಯಮಗಳಲ್ಲಿ ಬಂದಿರುವ ಲಿಸ್ಟ್ ಫೈನಲ್. ಅದಕ್ಕೆ ರಾಜ್ಯಪಾಲರ ಮುದ್ರೆಯೊಂದೇ ಬಾಕಿ ಇರುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟ ಪಡಿಸಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಪಟ್ಟಿ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು, ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಸುದ್ದಿ ಬಿತ್ತರಿಸಲಾಗಿತ್ತು.
ಆದರೆ, ಶನಿವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಈ ಪಟ್ಟಿ ಅಧಿಕೃತವಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಇಂದು ಸಚಿವ ಸತೀಶ್ ಜಾರಕಿಹೊಳಿ ಗೊಂದಲಗಳಿಗೆ ತೆರೆ ಎಳೆದಿದ್ದು, ಅದೇ ಪಟ್ಟಿ ಫೈನಲ್ ಎಂದು ಹೇಳಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಇನ್ನೂ ಖಾತೆ ಹಂಚಿಕೆ ಅಧಿಕೃತವಾಗಿಲ್ಲ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿದ್ದ ಕಾಂಗ್ರೆಸ್
ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಖಾತೆ ಹಂಚಿಕೆ ಲಿಸ್ಟ್ ಒಂದು ವ್ಯಾಪಕ ವೈರಲ್ ಆಗಿತ್ತು. ಸಚಿವರ ಅಭಿಮಾನಿಗಳು, ಬೆಂಗಲಿಗರು ತಮ್ಮ ನೆಚ್ಚಿನ ನಾಯಕ ಫೋಟೊ ಹಾಕಿ ಸಂಭ್ರಮಾಚರಣೆ ಮಾಡಿದ್ದರು. ಪಟ್ಟಿ ವೈರಲ್ ಆಗ್ತಿದ್ದಂತೆ ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಇದು ಅಧಿಕೃತ ಖಾತೆ ಹಂಚಿಕೆ ಪಟ್ಟಿಯಲ್ಲ, ನಕಲಿ ಎಂದು ಸ್ಪಷ್ಟನೆ ನೀಡಿತ್ತು. ಸಿದ್ದರಾಮಯ್ಯ ಕೂಡ ಮಾತನಾಡಿ, ಅತಿ ಶೀಘ್ರದಲ್ಲೇ ಖಾತೆಯನ್ನು ಹಂಚಿಕೆ ಮಾಡುವುದಾಗಿ ತಿಳಿಸಿದ್ದರು.
ಸಾಕಷ್ಟು ಕಸರತ್ತಿನ ಬಳಿಕ ಸಚಿವ ಸ್ಥಾನ ಹಂಚಿಕೆ
ಸಂಪೂರ್ಣ ಬಹುಮತ ಪಡೆದು 15 ದಿನಗಳಾದರೂ ಕಾಂಗ್ರೆಸ್ ಇನ್ನೂ ಸಚಿವರ ಖಾತೆ ಹಂಚಿಕೆ ಕಸರತ್ತು ನಡೆಸತ್ತಿದೆ. ಹಲವು ದಿನಗಳ ಕಸರತ್ತಿನ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು 8 ಶಾಸಕರು ಸಚಿವರಾಗಿ ಮೇ 20 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಅದಾದ ನಂತರ ಸಚಿವ ಸ್ಥಾನ ಹಂಚಿಕೆ ಬಗ್ಗೆ ಮತ್ತೊಂದು ಸುತ್ತಿನ ಕಸರತ್ತು ಶುರುವಾಗಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎರಡು ದಿನಗಳ ದೆಹಲಿಯಲ್ಲಿ ಹಲವು ಸುತ್ತಿನ ಚರ್ಚೆ ಬಳಿಕ 24 ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಮೇ 27 ರಂದು 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟವಾಗಿದೆ. ಹಲವು ಹಿರಿಯ ಶಾಸಕರು ತಮಗೆ ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಕೆಲವರು ರಾಜೀನಾಮೆ ಕೊಡುವ ಮಟ್ಟಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ.
ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಈಗ ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಸಚಿವರಾದವರು ಈಗ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಡಿಕೆ ಶಿವಕುಮಾರ್ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications