ಕಾಶಿ ಮಠ ಸಂಸ್ಥಾನದ ಶ್ರೀಗಳ ಚಾತುರ್ಮಾಸ ಈ ಬಾರಿ ತಿರುಪತಿಯಲ್ಲಿ
ತಿರುಪತಿ, ಜುಲೈ 19: ಶ್ರೀ ಕಾಶಿಮಠ ಸಂಸ್ಥಾನದ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ 2018ರ ಚಾತುರ್ಮಾಸ ವೃತವು ಈ ಬಾರಿ ತಿರುಮಲ ಬೆಟ್ಟದ ಶ್ರೀ ವೆಂಕಟರಮಣ ದೇವರ ಪುಣ್ಯ ಕ್ಷೇತ್ರದಲ್ಲಿರುವ ಕಾಶಿಮಠದ ಶಾಖಾ ಮಠದಲ್ಲಿ ನೆರವೇರಲಿರಲಿದೆ.
ಈ ಪ್ರಯುಕ್ತ ತಿರುಮಲೆಗೆ ತಲಪಿದ ಶ್ರೀಗಳಿಗೆ ತಿರುಮಲ ತಿರುಪತಿ ದೇವಾಲಯದ ವೈದಿಕರು ಪೂರ್ಣ ಕುಂಭ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ಚಾತುರ್ಮಾಸ ಸಮಿತಿಯ ಪದಾಧಿಕಾರಿಗಳು, ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಕಾಪು ನಾರಾಯಣ ಶೆಣೈ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬುಧವಾರ (ಜುಲೈ 18) ಶ್ರೀಗಳ ಪುರಪ್ರವೇಶದೊಂದಿಗೆ ಚಾತುರ್ಮಾಸ ಧಾರ್ಮಿಕ ವಿಧಿವಿಧಾನ ಆರಂಭವಾಗಿದೆ. ನವೆಂಬರ್ 20 ಉತ್ಥಾನ ದ್ವಾದಶಿ, ತುಳಸೀ ಪೂಜೆಯವರಿಗೆ ನಿರಂತರ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ ಎರಡರಂದು ಕಾಶಿಶ್ರೀಗಳು ಚಾತುರ್ಮಾಸ ವೃತ ಸ್ವೀಕಾರ ಮಾಡಲಿದ್ದಾರೆ.

ಸೆಪ್ಟಂಬರ್ 24ರಂದು ಮೃತಿಕಾ ವಿಸರ್ಜನೆ, ಸೀಮೋಲ್ಲಂಘನೆ ಮೂಲಕ ಕಾಶಿಶ್ರೀಗಳ ಚಾತುರ್ಮಾಸ ಕೊನೆಗೊಳ್ಲಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನ, ಪಾರಾಯಣಗಳು ನಡೆಯಲಿವೆ. ಆಗಸ್ಟ್ ಎರಡರಂದು ಸಂಜೆ ಆರುಗಂಟೆಗೆ ಮುದ್ರಾಧಾರಣೆ ನಡೆಯಲಿದೆ.
ಆಗಸ್ಟ್ 15ರಂದು ನಾಗಪಂಚಮಿ, ಮಾಧವೇಂದ್ರ ಸ್ವಾಮಿ ಪುಣ್ಯತಿಥಿ, ಆಗಸ್ಟ್ 25ರಂದು ಖುಗೋಪಕರ್ಮ, ಸೆಪ್ಟಂಬರ್ ಎರಡರಂದು ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ ಸಮಿತಿ, ತಿರುಮಲದ ಕಾಶಿಮಠದ ಶಾಖಾಮಠದಲ್ಲಿ ಆಯೋಜಿಸಿದೆ.
ಇದಲ್ಲದೇ ಸೆಪ್ಟಂಬರ್ 13-19ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 23ರಂದು ಅನಂತ ಚತುರ್ದಶಿ ವೃತಾಚಾರಣೆ ನಡೆಯಲಿದೆ. ವಿಶೇಷ ಪಾರಾಯಣಕ್ಕಾಗಿ ಸಮಾಜದ ವಿದ್ವತ್ ವೈದಿಕರು ಕೆಲದಿನಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಚಾತುರ್ಮಾಸ ಸಮಿತಿ ವಿನಂತಿಸಿಕೊಂಡಿದೆ.












Click it and Unblock the Notifications