ಮುಷ್ಕರ; 6ನೇ ವೇತನ ಆಯೋಗದ ಬಗ್ಗೆ ಸರ್ಕಾರದ ನಿಲುವೇನು?
ಬೆಂಗಳೂರು, ಏಪ್ರಿಲ್ 07; ಸಾರಿಗೆ ನೌಕರರು ಕರ್ನಾಟಕದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. 6ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.
ಈ ಹಿಂದೆ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ 10 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಇವುಗಳಲ್ಲಿ ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಕಾರ್ಮಿಕ ಒಕ್ಕೂಟದ ಸಭೆಯಲ್ಲಿಯೇ ತಿರಸ್ಕರಿಸಲಾಗಿತ್ತು.
6ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಂಡರೆ ತಕ್ಷಣ ಮುಷ್ಕರ ನಿಲ್ಲಿಸುತ್ತೇವೆ ಎಂದು ನೌಕರರು ಹೇಳಿದ್ದಾರೆ. ಗುರುವಾರವೂ ಮುಷ್ಕರ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.

6ನೇ ವೇತನ ಆಯೋಗದ ಶಿಫಾರಸು ಪರಿಗಣಿಸುವ ಕುರಿತು ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಬೇಕು ಎಂದು ಸರ್ಕಾರ ಹೇಳಿದೆ. 13/12/2020ರಲ್ಲಿ ನಡೆದ ಕಾರ್ಮಿಕ ಒಕ್ಕೂಟದ ಸಭೆಯಲ್ಲಿಯೂ ಈ ವಿಚಾರ ತಿಳಿಸಲಾಗಿತ್ತು ಎಂದು ಸರ್ಕಾರ ಹೇಳಿದೆ.
ಈ ಸಂಬಂಧ ರಚನೆ ಮಾಡಲಾದ ಆಂತರಿಕ ಸಮಿತಿಯು ಈಗಾಗಲೇ 6 ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಿದೆ. ಮುಖ್ಯಮಂತ್ರಿಗಳು ಸಹ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ವಿಶೇಷ ಸಭೆಯನ್ನು ನಡೆಸಿದ್ದಾರೆ.
ನೌಕರರ ಹಿತದೃಷ್ಟಿಯಿಂದ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಈ ಕುರಿತು ನಿಗಮ ಮಟ್ಟದ ಎಲ್ಲಾ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ/ ಸಲಹೆಗಳನ್ನು ಕೇಳಲಾಗಿದೆ.
ಪ್ರಸ್ತುತ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ವೇತನ ಪರಿಷ್ಕರಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.












Click it and Unblock the Notifications