ಶಿವಮೊಗ್ಗ ಗಲಭೆ, ರಾಷ್ಟ್ರಧ್ವಜ: ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಛೀಮಾರಿ
ನವದೆಹಲಿ/ಬೆಂಗಳೂರು, ಫೆ 22: ವಿವಾದಕಾರೀ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರುವವರಲ್ಲಿ ಎತ್ತಿದ ಕೈಯಾಗಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಇತ್ತೀಚಿನ ಕೆಲವು ಹೇಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ.
ರಾಷ್ಟ್ರಧ್ವಜ ಮತ್ತು ಸೋಮವಾರದ (ಫೆ 21) ಶಿವಮೊಗ್ಗ ಗಲಭೆ ಸಂಬಂಧ ಈಶ್ವರಪ್ಪನವರು ನೀಡಿದ ಹೇಳಿಕೆಯಿಂದಾಗಿ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಇದು ಮುಜುಗರವನ್ನು ತಂದೊಡ್ಡಿತ್ತು. ಪಂಚ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಇದೆಲ್ಲಾ ಬಿಜೆಪಿಗೆ ಬೇಡವಾದ ವಿಚಾರ.
Recommended Video
ನಮ್ಮ ಕೆಲವು ನಾಯಕರು ಹೇಳಿರುವ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂದರ್ಶನದಲ್ಲಿ ಹೇಳುವ ಮೂಲಕ, ಈಶ್ವರಪ್ಪನವರ ಹೇಳಿಕೆಗೆ ಸಹಮತವನ್ನು ನೀಡಲಿಲ್ಲ.

ಮುಂದೊಂದು ದಿನ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಾಡಬಹುದು ಎನ್ನುವ ಈಶ್ವರಪ್ಪನವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಹೋರಾತ್ರಿ ಧರಣಿಯನ್ನು ನಡೆಸಿತ್ತು. ಮಂಗಳವಾರ (ಫೆ 22) ಕಾಂಗ್ರೆಸ್ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ವಿರುದ್ದ ದೂರನ್ನು ಸಲ್ಲಿಸಲಿದ್ದಾರೆ.
"ಈಶ್ವರಪ್ಪ ಹೇಳಿಕೆಯನ್ನು ನಾನು ಅಥವಾ ನಮ್ಮ ಪಕ್ಷ ಒಪ್ಪುವುದಿಲ್ಲ, ನಾವು ಕಾನೂನು ರೀತಿಯಾಗಿ ನಡೆದುಕೊಳ್ಳುವವರು. ಸಂವಿಧಾನವನ್ನು ಒಪ್ಪುತ್ತೇವೆಯೇ ಹೊರತು ಈ ರೀತಿಯ ಹೇಳಿಕೆಗಳಿಗೆ ನಮ್ಮ ಸಹಮತವಿಲ್ಲ, . ಸಂವಿಧಾನವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ" ಎಂದು ಜೆ.ಪಿ.ನಡ್ಡಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ನಾವು ರಾಷ್ಟ್ರವಾದಿಗಳು ತಪ್ಪು ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅತ್ಯುತ್ಸಾಹದಲ್ಲಿ ಮಾತನಾಡಿ ಬಿಡುತ್ತಾರೆ. ಅವರು ನಮ್ಮ ಹಿರಿಯ ನಾಯಕ. ಆದರೂ ಅಂತಹ ಹೇಳಿಕೆಯನ್ನು ಕೊಡಬಾರದಿತ್ತು. ಈ ವಿಚಾರವಾಗಿ ಈಶ್ವರಪ್ಪ ಅವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇವೆ"ಎಂದು ನಡ್ಡಾ ಹೇಳಿದ್ದಾರೆ.












Click it and Unblock the Notifications