ಹೆಸರು ಕೊರೊನಾ ವೈರಸ್, ಲಾಭ ಮಾಡಿಕೊಳ್ಳುತ್ತಿರುವುದು RSS
ಬೆಂಗಳೂರು, ಮಾರ್ಚ್ 26: "ಕೊರೊನಾ ವೈರಸ್ ಸಮಸ್ಯೆ ಬಿಜೆಪಿಯವರದಲ್ಲ, ಇಡೀ ವಿಶ್ವದ್ದು. ಈ ಕೂಡಲೇ, ಸರಕಾರ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು" ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡುತ್ತಿದ್ದ ಡಿಕೆಶಿ, "ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಷ್ಟ್ರಮಟ್ಟದಲ್ಲಿ ಸರ್ವಪಕ್ಷ ಸಭೆ ಕರೆದು ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
"ರಾಜ್ಯದಲ್ಲಿ ಈ ಸಮಸ್ಯೆಯನ್ನು ರಾಜಕೀಯ ಹಾಗೂ ಸಿದ್ಧಾಂತದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. RSS ಸದಸ್ಯರು ದೇಣಿಗೆ ಸಂಗ್ರಹಿಸಿ, ಜನರಿಗೆ ಆಹಾರ ಪದಾರ್ಥ ಹಂಚುತ್ತಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದು ಯಾರು" ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

"ಪ್ರಧಾನಿಗಳು ತಮ್ಮ ಭಾಷಣದಲ್ಲಿ 21 ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಮಾಡಲು ಹೇಳಿದ್ದಾರೆ. ಪ್ರಧಾನಿಗಳ ಮಾತನ್ನು ನಾವು ಗೌರವಿಸುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ನಮ್ಮ ಕಾರ್ಯಕರ್ತರಿಗೂ ಮನೆಯಲ್ಲೇ ಉಳಿಯಲು ಸೂಚಿಸಿದ್ದೇವೆ' ಎಂದು ಡಿಕೆಶಿ ಹೇಳಿದ್ದಾರೆ.
"ಕಾಂಗ್ರೆಸ್ಸಿನವರಿಗೂ ಜನರ ಬಗ್ಗೆ ಕಾಳಜಿ ಇದೆ. ನಮಗೂ ಸಹಾಯ ಮಾಡಬೇಕೆಂದಿದೆ. ಎಲ್ಲರನ್ನೂ ಮನೆಯಿಂದ ಹೊರಬರಬೇಡಿ ಎಂದು ಹೇಳಿ, ಸಂಘ ಪರಿವಾರದ ಸದಸ್ಯರು ಬೀದಿಯಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ" ಎಂದು ಡಿಕೆಶಿ ಆರೋಪಿಸಿದ್ದಾರೆ.
"ಸಂಘ ಪರಿವಾರದವರಿಗೆ ಆಹಾರ ಪದಾರ್ಥ ಹಂಚಲು ಬಿಟ್ಟಿರುವುದು ಸರಿಯೇ? ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯೇ? ಈ ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ" ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications