ಆಪರೇಷನ್ ಕಮಲ : ಆರ್ಎಸ್ಎಸ್ನಿಂದ ಅಮಿತ್ ಶಾಗೆ ವರದಿ!
Recommended Video

ಬೆಂಗಳೂರು, ಸೆಪ್ಟೆಂಬರ್ 14 : 'ಆಪರೇಷನ್ ಕಮಲ'ಕ್ಕೆ ತಡೆ ಬಿದ್ದಿದೆ?. ಹೌದು...ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ನಡೆಸುತ್ತಿದ್ದ ಚಟುವಟಿಕೆಗಳಿಗೆ ಹೈಕಮಾಂಡ್ ಸೂಚನೆಯಂತೆ ತಡೆ ಹಾಕಲಾಗಿದೆ ಎಂಬುದು ಸದ್ಯದ ಸುದ್ದಿ.
ಬಿಜೆಪಿ ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸಲಿ. ಸದ್ಯಕ್ಕೆ ಆಪರೇಷನ್ ಕಮಲ ಬೇಡ ಎಂಬ ಸಂದೇಶ ಆರ್ಎಸ್ಎಸ್ ಕಡೆಯಿಂದ ಬಂದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ, ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗಲಿದೆ? ಎಂಬಲ್ಲಿಗೆ ಹೋಗಿ ನಿಂತಿದೆ. ಮತ್ತೊಂದು ಕಡೆ ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಯುತ್ತಿದೆ.
ಸರ್ಕಾರ ರಚನೆ ವಿಚಾರದಲ್ಲಿ ಎಡವಟ್ಟು ಆದರೆ, ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಚುನಾವಣೆ ಮುಗಿಯುವ ತನಕ ಸರ್ಕಾರ ರಚನೆ ಮಾಡುವ ಪ್ರಯತ್ನ ನಡೆಸುವುದು ಬೇಡ ಎಂಬುದು ಆರ್ಎಸ್ಎಸ್ ಸಲಹೆಯಾಗಿದೆ.

ಆರ್ಎಸ್ಎಸ್ನಿಂದ ವರದಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮೂಲಕ ಕೇಶವಕೃಪದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವರದಿಯನ್ನು ಸಲ್ಲಿಸಲಾಗಿದೆ. ಇದರ ಜೊತೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಆರ್ಎಸ್ಎಸ್ ಈಗ ಆಪರೇಷನ್ ಕಮಲ ಬೇಡ ಎಂದು ವರದಿ ನೀಡಿದೆ.
ರಾಜಕೀಯ ಲಾಭಕ್ಕಾಗಿ ಜಾರಕಿಹೊಳಿ ಸಹೋದರರು ಏನು ಬೇಕಾದರೂ ಮಾಡುತ್ತಾರೆ. ಅವರನ್ನು ನಂಬಿ ಆಪರೇಷನ್ ಕಮಲ ಆರಂಭಿಸುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದು ವರದಿಯ ಸಾರಾಂಶವಾಗಿದೆ.

ಬಿಜೆಪಿಗೆ ಅಧಿಕಾರ ದಾಹ ಎಂಬ ಸಂದೇಶ
ಒಂದು ವೇಳೆ ಆಪರೇಷನ್ ಕಮಲದ ವಿಚಾರದಲ್ಲಿ ಏನಾದರೂ ಎಡವಟ್ಟು ಆದರೆ ಅದು ಪಕ್ಷದ ಮೇಲೆ, ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಆದ್ದಿರಿಂದ, ಲೋಕಸಭೆ ಚುನಾವಣೆ ಮುಗಿಯುವ ತನಕ ಆಪರೇಷನ್ ಕಮಲ ಬೇಡ ಎಂಬುದು ಆರ್ಎಸ್ಎಸ್ ಸಲಹೆ.
ಕರ್ನಾಟಕದ ಮೈತ್ರಿ ಸರ್ಕಾರ ಪತನಗೊಂಡರೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಅಧಿಕಾರ ದಾಹವಿದೆ ಎಂಬ ಸಂದೇಶ ರವಾನೆಯಾಗಲಿದೆ. ಆಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪಕ್ಷಗಳ ಮಹಾ ಘಟಬಂಧನ್ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ ಎಂಬುದು ಆರ್ಎಸ್ಎಸ್ ವಿಶ್ಲೇಷಣೆ.

ಲೋಕಸಭೆ ಚುನಾವಣೆ ಯತ್ತಗಮನ
ಸದ್ಯದ ಪರಿಸ್ಥಿತಿಯಲ್ಲಿ ಆಪರೇಷನ್ ಕಮಲವನ್ನು ಬಿಟ್ಟು ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವತ್ತ ಗಮನ ಹರಿಸಲಿ. ಚುನಾವಣೆ ಮುಗಿದ ಬಳಿಕ ಮುಂದಿನ ಬೆಳವಣಿಗೆಗಳ ಬಗ್ಗೆ ನೋಡೋಣ ಎಂದು ಆರ್ಎಸ್ಎಸ್ ಸಲಹೆ ನೀಡಿದೆ.
ಅಮಿತ್ ಶಾಗೆ ನೀಡಿದ ವರದಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಮನಕ್ಕೂ ತರಲಾಗಿದೆ. ಆದ್ದರಿಂದ, ಯಡಿಯೂರಪ್ಪ ಅವರು ಗುರುವಾರದಿಂದ ಆಪರೇಷನ್ ಕಮಲದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ನಾವು ವಿರೋಧ ಪಕ್ಷದಲ್ಲಿರುತ್ತೇವೆ
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಕಾಂಗ್ರೆಸ್-ಜೆಡಿಎಸ್ ಪಕ್ಷದವರು ನಮ್ಮ 10 ಶಾಸಕರು ಏಕೆ. ನಾವು 104 ಶಾಸಕರಿದ್ದೇವೆ ಎಲ್ಲರನ್ನೂ ಸಂಪರ್ಕಿಸಲಿ. ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ. ರಾಷ್ಟ್ರೀಯ ನಾಯಕರು ಆಪರೇಷನ್ ಕಮಲದ ಬಗ್ಗೆ ಯಾರೂ ಹೇಳಿಕೆ ನೀಡಿದಂತೆ ಸೂಚಿಸಿದ್ದಾರೆ' ಎಂದು ಹೇಳಿದ್ದಾರೆ.
ಅಮಿತ್ ಶಾ ಸೂಚನೆ ಹಿನ್ನಲೆಯಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲ ತೀರ್ಮಾನಿಸಿದೆ. ಯಾವುದೇ ಕಾರಣಕ್ಕೂ ಗೊಂದಲ ಸೃಷ್ಟಿ ಮಾಡದೇ ಇರಲು ನಿರ್ಧಾರ ಕೈಗೊಂಡಿದೆ.












Click it and Unblock the Notifications