ರೌಡಿ ಸುನೀಲ್ BJP ಸೇರ್ಪಡೆ: ಫೋಟೊಗಳು ವೈರಲ್- ಸರಣಿ ಟ್ವೀಟ್ ಮೂಲಕ ಜೆಡಿಎಸ್, ಕಾಂಗ್ರೆಸ್ ಹೇಳಿದ್ದೇನು?
ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ರೌಡಿ ಮೋರ್ಚಾಗೆ ಬಹಿರಂಗವಾಗಿ ಚಾಲನೆ ದೊರೆತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬೆಂಗಳೂರು, ಮಾರ್ಚ್ 18: ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ರೌಡಿ ಮೋರ್ಚಾಗೆ ಬಹಿರಂಗವಾಗಿ ಚಾಲನೆ ದೊರೆತಿದೆ ಎಂದು ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕ ಶನಿವಾರ ಟ್ವೀಟ್ ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಹ ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
'ಯಾವುದೇ ಕಾರಣಕ್ಕೂ ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ? ಗೋಮೂತ್ರವೋ, ಗೋಮಯವೋ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

'ಫೈಟರ್ ರವಿ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರೇ, ಮುಂದಿನ ಬಾರಿ ಬಂದಾಗ ಮತ್ತೊಬ್ಬ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ಫೈಟರ್ ರವಿ ಎದುರು ಕೈಮುಗಿದು ನಿಂತ @narendramodi ಅವರೇ, ಮುಂದಿನ ಬಾರಿ ಬಂದಾಗ ಮತ್ತೊಬ್ಬ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ ನಿಮ್ಮ ವಿವೇಚನೆಗೆ ಬಿಟ್ಟಿದ್ದು!
— Karnataka Congress (@INCKarnataka) March 18, 2023
ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು @BJP4Karnataka ಪಕ್ಷ ಸೇರ್ಪಡೆ ಮಾಡಿಕೊಂಡಿದೆ.#BJPRowdyMorcha pic.twitter.com/ESLZ7YN9fx
'ಪಶ್ಚಿಮ ಬಂಗಾಳ, ಕೇರಳದ RSS ಕಚೇರಿಗಳಲ್ಲಿ ಗನ್ನು, ಗ್ರೆನೇಡ್, ಬಾಂಬುಗಳು ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಇನ್ನು ಮುಂದೆ ಲಾಂಗು, ಮಚ್ಚು, ಡ್ರ್ಯಾಗರ್ಗಳ ಸಂಗ್ರಹ ಇರಲಿದೆ. ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ನಳೀನ್ ಕುಮಾರ್ ಕಟೀಲ್ ಉತ್ತರಿಸಬೇಕು' ಎಂದೂ ಕೆಪಿಸಿಸಿ ಹೇಳಿದೆ.

ಜೆಡಿಎಸ್ ಟ್ವೀಟ್
'ರೌಡಿ ಮತ್ತು ಕ್ರಿಮಿನಲ್ ಗಳ ಸ್ವರ್ಗವಾದ ಬಿಜೆಪಿ ತನ್ನ ನಿಜ ರೂಪವನ್ನು ಮತ್ತೇ ಬಹಿರಂಗಪಡಿಸಿದೆ. ನಟೋರಿಯಸ್ ರೌಡಿ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಲ್ಲದೆ ಆತನ ಮೂಲಕವೇ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಚೇರಿಯನ್ನೂ ಪ್ರಾರಂಭಿಸಿದೆ' ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ#BJPRowdyMorcha ಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ!
— Karnataka Congress (@INCKarnataka) March 18, 2023
ಯಾವುದೇ ಕಾರಣಕ್ಕೂ ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ @BSBommai ಅವರೇ, ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ?
ಗೋಮೂತ್ರವೋ, ಗೋಮಯವೋ!? pic.twitter.com/1e2UawSpC7
'ಚುನಾವಣೆ ಹೊತ್ತಿನಲ್ಲಿ ಹೀಗೆ ಬಹಿರಂಗವಾಗಿ ರೌಡಿ ರಾಜಕೀಯ ಮಾಡುತ್ತಿರುವುದು ಬಿಜೆಪಿಯ ದಾಷ್ಟ್ಯವೇ ಹೊರತು ಬೇರೇನಲ್ಲ. ನಾವೇನೂ ಮಾಡಿದರೂ ನಮಗೆ ಮತ ನೀಡುತ್ತಾರೆ ಎಂಬ ಹುಂಬತನವಿದು. ಕೇವಲ ಧರ್ಮಗಳ ನಡುವೆ ವಿಷ ಬಿತ್ತಿ ಮತ ಪಡೆಯುತ್ತೇವೆ ಎಂಬ ನಳೀನ್ ಕುಮಾರ್ ಅವರ ಲೆಕ್ಕಾಚಾರವಿದು' ಎಂದೂ ಜೆಡಿಎಸ್ ಹರಿಹಾಯ್ದಿದೆ.

'ಫೈಟರ್ ರವಿಗೆ ಕೈ ಮುಗಿದ ಪ್ರಧಾನಿ ನರೇಂದ್ರ ಮೋದಿ ಮುಂದಕ್ಕೆ ಈ ರೌಡಿಗೂ ಟಿಕೆಟ್ ನೀಡಿ, ಅವನ ಪರವಾಗಿ ಪ್ರಚಾರ ಮಾಡಲು ರಾಜ್ಯಕ್ಕೆ ಬಂದರೂ ಅಚ್ಚರಿಯೇನಿಲ್ಲ. ಯಾವುದಕ್ಕೂ ತಯಾರಾಗಿರೋಣ. ರಾಜ್ಯದ ಬಗ್ಗೆ ಕಾಳಜಿಯಿರುವ ಯಾವನಾದರೂ ಬಿಜೆಪಿಯಲ್ಲಿದ್ದರೆ ಅಲ್ಲಿಂದ ಹೊರಬರಲು ಇದು ಸಕಾಲ' ಎಂದು ಜನತಾದಳ ತಿಳಿಸಿದೆ.
ಬಿಜೆಪಿಗೆ ಸಂಬಂಧವೇ ಇಲ್ಲ
ರೌಡಿ ಸುನೀಲನ ಬಿಜೆಪಿ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ. ರೌಡಿ ಸುನೀಲ್ ಬಿಜೆಪಿ ಸೇರ್ಪಡೆ ಸಂದರ್ಭದ ಫೋಟೊಗಳು ವೈರಲ್ ಆದ ಬೆನ್ನಲ್ಲೇ, ಬಿಜೆಪಿ ಸ್ಪಷ್ಟಣೆ ನೀಡಿದೆ. ರೌಡಿ ಸುನೀಲನಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ. ರೌಡಿ ಸುನೀಲ್ ಆನ್ಲೈನ್ ಮೂಲಕ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದನು. ಇದು ಗೊತ್ತಾಗುತ್ತಿದ್ದಂತೆ ಬಿಜೆಪಿ ಆತನ ಸದಸ್ಯತ್ವವನ್ನು ರದ್ದುಗೊಳಿಸಿದೆ ಎಂದು ಮಂಜುನಾಥ್ ಅವರು ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರೊಂದಿಗೆ ರೌಡಿ ಸುನೀಲ್ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿದ್ದವು.












Click it and Unblock the Notifications