ಬಸವಣ್ಣನಿಗೂ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ಸಮಿತಿ: ಸ್ವಾಮೀಜಿಗಳಿಂದ ಖಂಡನೆ
ಬೆಂಗಳೂರು, ಮೇ 31: ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿ ವಿವಾದಕ್ಕೆ ಒಳಗಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಲಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಈಗ 12ನೇ ಶತಮಾನದ ಬಸವಣ್ಣನ ಬಗ್ಗೆಯೂ ತಪ್ಪು ಮಾಹಿತಿ ಪ್ರಕಟಿಸಿ ಕೆಂಗಣ್ಣಿಗೆ ಗುರಿಯಾಗಿದೆ.
9ನೇ ತರಗತಿಯ 'ಸಮಾಜ ವಿಜ್ಞಾನ' ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರಲ್ಲಿ ಬಸವಣ್ಣನ ಕುರಿತು ಒಂದು ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ, ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ರೋಹಿತ್ ಚಕ್ರತೀರ್ಥ ಸಮಿತಿ ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಬಸವಣ್ಣನ ಜೀವನ ಮತ್ತು ಆದರ್ಶಗಳಿಗೆ ಅಪಮಾನ ಆಗಿದೆ ಎಂದು ಮಠಾಧೀಶರೂ ಸಹಿತ ಹಲವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಈ ಸಮಿತಿ ಮಾಡಿರುವ ಪರಿಷ್ಕೃತ ಪಠ್ಯವನ್ನು ಬದಿಗಿಟ್ಟು ಹಳೆಯ ಪಠ್ಯವನ್ನೇ ಮುಂದುವರಿಸುವಂತೆ ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ. ಈಗಾಗಲೇ ನಾಡಗೀತೆ ಮತ್ತು ಕುವೆಂಪು ಅವರಿಗೆ ಅವಮಾನ ಮಾಡಿರುವ ವಿವಾದವನ್ನು ಮೈಗೆಳೆದುಕೊಂಡಿರುವ ಸಮಿತಿ ಈಗ ಬಸವಣ್ಣನ ಕುರಿತೂ ಅಪಮಾನವಾಗುವಂತೆ ಪರಿಷ್ಕರಿಸಿ ಮತ್ತೊಂದು ಪ್ರಮಾದ ಎಸಗಿದೆ.

ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಹೀಗಿದೆ
ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು. ಇವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ತಮ್ಮ ಕಾರ್ಯದಕ್ಷತೆಯಿಂದ ಕಲಸೂರಿ ಅರಸ ಬಿಜ್ಜಳನ ಭಂಡಾರದ ಅಧಿಕಾರಿಯಾಗಿದ್ದರು. ಇದೇ ಕಾಲದಲ್ಲಿ ತಮ್ಮ ಧಾರ್ಮಿಕ, ಸಾಮಾಜಿಕ ಚಳವಳಿಯನ್ನು ಬಸವಣ್ಣನವರು ಮಂಗಳವೇಡೆಯಲ್ಲಿ ಆರಂಭಿಸಿದರು ಎಂದು ಪರಿಷ್ಕರಿಸಲಾಗಿದೆ.

ಮುಖ್ಯಮಂತ್ರಿಗೆ ಪತ್ರ ಬರೆದ ತರಳಬಾಳು ಶ್ರೀ
ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯ ಕುರಿತು ಸಾಕಷ್ಟು ಆಕ್ಷೇಪ ಮತ್ತು ಆಪಾದನೆ ಕೇಳಿಬರುತ್ತಿವೆ. ಯಾವ ಹಂತದಲ್ಲಿ ಏನೇನು ಬದಲಾಯಸಿದ್ದಾರೆ, ಸೇರಿಸಿದ್ದಾರೆ ಎನ್ನುವುದನ್ನು ನೋಡೋಣ ಎಂದರೆ ಪಠ್ಯಪುಸ್ತಕಗಳೇ ಎಲ್ಲೂ ದೊರೆಯುತ್ತಿಲ್ಲ. ಈಗಾಗಲೇ ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯಪುಸ್ತಕಗಳಿಲ್ಲ ಎಂದರೆ ಶಿಕ್ಷಕರು ಏನು ಪಾಠ ಮಾಡಬೇಕು? ಈಗಿನ ಪಠ್ಯಪುಸ್ತಕ ಸಮಿತಿಯಲ್ಲಿ ಇರುವವರು ಒಂದು ವರ್ಗಕ್ಕೆ ಸೇರಿದವರು ಎಂಬುದು ಮೇಲ್ನೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದದ್ದು ಅಪೇಕ್ಷಣೀಯ. ಅಲ್ಲಿ ಜಾತಿ, ಪಕ್ಷ, ರಾಜಕಾರಣ ಹೆಡೆಯಾಗಬಾರದು ಎಂದು ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
"ವಾಟ್ಸ್ಆಪ್ನಲ್ಲಿ ನಾವು ನೋಡಿರುವಂತೆ 9ನೇ ತರಗತಿಯ 'ಸಮಾಜ ವಿಜ್ಞಾನ' ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರಲ್ಲಿ ಬಸವಣ್ಣನ ಕುರಿತು ಒಂದು ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ, ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ರೋಹಿತ್ ಚಕ್ರತೀರ್ಥ ಸಮಿತಿ ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ. ಕಳೆದ ವರ್ಷದ ಪಾಠದಲ್ಲಿ "ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೆರೂರಿದ್ದ ಅಸಂಖ್ಯ ಧಾರ್ಮಿಕ ಆಚರಣಾ ವಿಧಿವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚುರಪಡಿಸಿದರು,".

ಹಳೆಯ ಪಠ್ಯಪುಸ್ತಕದಲ್ಲಿ ಹೀಗಿದೆ
"ಜಾತಿ ವ್ಯವಸ್ಥೆಯ ಕಡುವಿರೋಧಿಯಾಗಿದ್ದ ಬಸವೇಶ್ವರರು ತಮ್ಮ ಉಪನಯನದ ನಂತರ ಯಜ್ಙೋಪವೀತವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ನಡೆದರು. ಉನ್ನತಾಧಿಕಾರದಲ್ಲಿ ಇದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು. ಸಮಾಜ, ಧರ್ಮದ ಪುನಶ್ಚೇತನಕ್ಕೆ ಟೊಂಕಕಟ್ಟಿದರು. 'ಸ್ವಾವಲಂಬನೆಯ ತತ್ವವನ್ನು', 'ದೇಹವೇ ದೇಗುಲ', ಈ ಬಗೆಯ ಸಂವೇದನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪಗಳಾಗಿವೆ. ಅವರು ಸರಳ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು..
ಇಂಥ ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಗೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ಬಸವಣ್ಣನವರ ಶುದ್ಧ, ಪಾರದರ್ಶಕ ಬದುಕಿಗೆ ಕಳಂಕ ತಂದಂತೆ, "ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು" ಎನ್ನುವುದು ಶುದ್ಧ ಸುಳ್ಳು. ಅವರು "ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು" ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ.

ಹಿಂದಿನ ಪಠ್ಯವನ್ನೇ ಮುಂದುವರಿಸಿ
ಆದ್ದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಪಂಡಿತಾರಧ್ಯ ಶಿವಾಚಾರ್ಯರ ಸ್ವಾಮೀಜಿ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
Recommended Video
-
ದ್ವಿತೀಯ PUC ಪರೀಕ್ಷೆ-2: ನೋಂದಣಿ ಆರಂಭ, ಯಾರಿಗೆ ಶುಲ್ಕ ವಿನಾಯಿತಿ? ಇಲ್ಲಿದೆ ಮಾಹಿತಿ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
CBSE 10ನೇ ತರಗತಿ ಫಲಿತಾಂಶ 2026: ನಾಳೆ ಪ್ರಕಟಗೊಳ್ಳಲಿದೆಯೇ ರಿಸಲ್ಟ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ -
CBSE ಫಲಿತಾಂಶಕ್ಕಾಗಿ ಕಾಯಬೇಡಿ: ಈಗಲೇ ನಿಮ್ಮ ಡಿಜಿಲಾಕರ್ ಖಾತೆ ತೆರೆಯಿರಿ, ಕ್ಷಣಾರ್ಧದಲ್ಲಿ ರಿಸಲ್ಟ್ ಪಡೆಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications