ಬಾದಾಮಿ : ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತ
ಬಾಗಲಕೋಟೆ, ಆ.7 : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣ ಹಟ್ಟಿಯನ್ನು ರಕ್ಷಿಸುವ ಕಾರ್ಯಾಚರಣೆ ಅವ್ಯಾಹತವಾಗಿ ಸಾಗಿದೆ. ಕೊಳವೆಬಾವಿಯಿಂದ ದುರ್ವಾಸನೆ ಬರುತ್ತಿದ್ದು, ಬಾಲಕ ಜೀವಂತವಾಗಿರುವ ಸಾಧ್ಯತೆ ಕ್ಷೀಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸಮಯ 1.30 : ಸೂಳಿಕೇರಿಯಲ್ಲಿ ಭಾರೀ ಗಾಳಿ ಬಿಸುತ್ತಿದ್ದು ತುಂತುರು ಮಳೆಯಾಗುತ್ತಿದೆ. ಆದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಸಮಯ 12.30 : ಶುಕ್ರವಾರ ಸಂಜೆಯ ತನಕ ತಿಮ್ಮಣ್ಣನ ರಕ್ಷಣಾ ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮಯ 11.30 : 300 ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಮಗು ಸಿಗುವವರೆಗೂ ಕಾರ್ಯಚರಣೆ ನಡೆಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುರಂಗ ಮಾರ್ಗ ಕೊರೆಯುವ ಕಾರ್ಯಾಚರಣೆಯ ಬಗ್ಗೆ ಮಾರ್ಗದರ್ಶನ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ.

ಸಮಯ 10.30 : ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೊಂದು ಕಡೆ 3 ವ್ಯಾಕ್ಯೂಮ್ ಕ್ಲೀನರ್ ಮೂಲಕ ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ ಎಂದು ಬೀಳಗಿ ಶಾಸಕ ಜೆ. ಟಿ ಪಾಟೀಲ್ ಹೇಳಿದ್ದಾರೆ.
ಸಮಯ 9.30 : ಕೊಳವೆ ಬಾವಿಗೆ ಬಿದ್ದಿರುವ ಬಾಲಕನ ತಂದೆಯ ಬೇಡಿಕೆಯನ್ನು ಪರಿಶೀಲಿಸುತ್ತೇವೆ. ಕಾರ್ಯಾಚರಣೆ ಮುಗಿದ ನಂತರ ಗುಂಡಿಯನ್ನು ಜಿಲ್ಲಾಡಳಿತದಿಂದ ಮುಚ್ಚಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.
ಸಮಯ 8.30 : ತಿಮ್ಮಣ್ಣನ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿದರೆ ಒಂದು ಗಂಟೆಯಲ್ಲಿ ಮಗುವಿನ ರಕ್ಷಣಾ ಕಾರ್ಯ ನಡೆಸಲಾಗುವುದು ಎಂದು ರೋಬೋ ತಜ್ಞ ಮಣಿಕಂಠನ್ ಹೇಳಿದ್ದಾರೆ.
ಸಮಯ 7.45 : ಮಗುವಿನ ರಕ್ಷಣೆಗಾಗಿ ಮಣಿಕಂಠನ್ ನೇತೃತ್ವದ ರೋಬೋ ತಂಡ ನಡೆಸಿದ ಕಾರ್ಯಾಚರಣೆ ವಿಫಲವಾಗಿದೆ. ಭೂಮಿ ಅಗೆತವೊಂದೇ ಉಳಿದ ದಾರಿಯಾಗಿದ್ದು, ಅದನ್ನು ಮುಂದುವರೆಸಲಾಗಿದೆ. ಎಲ್ ಆಕಾರದ ಬದಲು ಯು ಆಕಾರದಲ್ಲಿ ಸುರಂಗ ತೋಡಲಾಗುತ್ತಿದೆ.

ಸಚಿವರ ಪ್ರತಿಕ್ರಿಯೆ : ಸತತವಾಗಿ ನಾವು ನಡೆಸಿದ ಕಾರ್ಯಾಚರಣೆ ಫಲ ನೀಡಲಿಲ್ಲ. ಬುಧವಾರ ಸಂಜೆ ಕೊಳವೆ ಬಾವಿಯಿಂದ ದುರ್ವಾಸನೆ ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ, ಇದರಿಂದ ತೀವ್ರ ನಿರಾಸೆ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದಿದ್ದ. ಅಂದಿನಿಂದ ರಕ್ಷಣಾ ಕಾರ್ಯ ಸತತವಾಗಿ ಮುಂದುವರೆದಿದೆ. ಗುರುವಾರಕ್ಕೆ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದೆ. [ಬುಧವಾರದ ಕಾರ್ಯಾಚರಣೆ ವಿವರಗಳು]












Click it and Unblock the Notifications