ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದಾದ್ಯಂತ ಈಗ ಬೆಟ್ಟಿಂಗ್ ಜೋರು
ಮೈಸೂರು, ಮೇ 11: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮೇ 10ರಂದು ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಈಗ ರಾಜಕೀಯ ಪಕ್ಷಗಳ ಹಾಗೂ ನಾಯಕರ ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವುದು ಜೋರಾಗುತ್ತಿದೆ.
ಮೇ 10 ಬುಧವಾರ ಮತದಾನ 6 ಗಂಟೆಗೆ ಮುಗಿದಂತೆ ಎಕ್ಸಿಟ್ ಪೋಲ್ಗಳ ಸಮೀಕ್ಷೆಗಳು ಹೊರಬಿದ್ದಿವೆ. ಈ ಬೆನ್ನಲ್ಲೇ ಮೈಸೂರು, ಚಾಮರಾಜನಗರ ಸೇರಿದಂತೆ ಅನೇಕ ಕಡೆ ತಮ್ಮ ನೆಚ್ಚಿನ ಪಕ್ಷಗಳ ಹಾಗೂ ನಾಯಕರ ಪರ ಸೋಲು ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುವುದು ಜೋರಾಗುತ್ತಿದೆ.

ತಮ್ಮ ರಾಜಕೀಯ ನಾಯಕರು ಗೆಲ್ಲುತ್ತಾರೆ ಎಂದು ಕಂತೆ ಕಂತೆ ಹಣ ಮಾತ್ರವಲ್ಲದೆ, ಕುರಿ, ಹಸು, ಮೇಕೆ ಸೇರಿದಂತೆ ಜೀವನೋಪಯೋಗಿ ವಸ್ತುಗಳನ್ನು ಪಣಕ್ಕೆ ಇಡಲಾಗುತ್ತಿದೆ. ಹೀಗಾಗಿ ಫಲಿತಾಂಶಕ್ಕೂ ಮುನ್ನವೇ ಗ್ರಾಮೀಣಾ ಚುನಾವಣ ಕಣ ರಂಗೇರಿದೆ.
ಮೊನ್ನೆ ಧಾರವಾಡದಲ್ಲಿ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಕುಲಕರ್ಣಿ ಪರ ಕುರಿಗಳನ್ನು ಬೆಟ್ಟಿಂಗ್ ಕಟ್ಟಿದ್ದರು. ಮತ್ತೊಬ್ಬ ವ್ಯಕ್ತಿ ತಮ್ಮ ಮಗನಿಗೆ ವಿನಯ್ ಎಂದು ಹೆಸರಿಟ್ಟಿದ್ದು, ವಿನಯ್ ಕುಲಕರ್ಣಿ ಸೋತರೇ ಹೆಸರು ಬದಲಿಸುವುದಾಗಿ ಹೇಳಿದ್ದಾರೆ. ಇನ್ನು ಕರಡಿ ಗುಡ್ಡದಲ್ಲೂ ಹಣವನ್ನು ಬೆಟ್ಟಿಂಗ್ ಕಟ್ಟಲಾಗಿದೆ ಎನ್ನಲಾಗಿದೆ, ಬೈಲಹೊಂಗಲದಲ್ಲೂ ಬೆಟ್ಟಿಂಗ್ ಜೋರಾಗಿದೆ.
ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ಲಕ್ಷ ಲಕ್ಷ ರೂಪಾಯಿಗಳನ್ನು ಬಾಜಿಗೆ ಕಟ್ಟಲಾಗುತ್ತಿದ್ದು, ಇದು ಕೋಟಿ ರುಪಾಯಿ ಮೀರಿರಬಹುದು ಎನ್ನಲಾಗುತ್ತಿದೆ. ಇದಲ್ಲದೆ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ ಕೊಪ್ಪಳ ಜಿಲ್ಲೆಗಳಲ್ಲೂ ಬೆಟ್ಟಿಂಗ್ ಧಂದೆ ಜೋರಾಗಿ ನಡೆಯುತ್ತಿದೆ. ಇಲ್ಲಿ ಅಭ್ಯರ್ಥಿ ಸೋಲು ಗೆಲುವಿನ ಮೇಲೆ 50 ಸಾವಿರದಿಂದ 1 ಲಕ್ಷದವರೆಗೆ ಬೆಟ್ಟಿಂಗ್ ಕಟ್ಟಲಾಗಿದೆ. ಅಲ್ಲದೆ ಕುರಿ, ಕೋಳಿ ಚಿನ್ನ ಹಾಗೂ ವಸ್ತುಗಳನ್ನು ಬಾಜಿ ಕಟ್ಟಲಾಗುತ್ತಿದೆ.
ಗಂಗಾವತಿಯಲ್ಲಿ ವ್ಯಕ್ತಿಯೊಬ್ಬರು ಜಾನುವಾರುಗಳನ್ನು ಬೆಟ್ಟಿಂಗ್ ಕಟ್ಟಿದ್ದರೆ, ಕೊಪ್ಪಳದಲ್ಲಿ ಅಪಾರ ಹಣವನ್ನು ಹಾಗೂ ಉಳುವ ಭೂಮಿಯನ್ನು ಬೆಟ್ಟಿಂಗ್ ಕಟ್ಟಲಾಗಿದೆ. ರಾಯಚೂರು, ಮಸ್ಕಿ ಹಾಗೂ ಲಿಂಗಸುಗೂರಿನಲ್ಲಿ 1 ಲಕ್ಷ ರೂಪಾಯಿ ಹಣ ಅಲ್ಲದೆ ಎಕರೆ ಭೂಮಿಯನ್ನು ಪಣಕ್ಕೆ ಇಡಲಾಗಿದೆ. ಇದಲ್ಲದೆ ಮೈಸೂರಿನ ಪಿರಿಯಾಪಟ್ಟಣದಲ್ಲೂ 5 ಲಕ್ಷದವರೆಗೂ ಹಣ ಬೆಟ್ಟಿಂಗ್ ಕಟ್ಟಲಾಗಿದೆ ಎನ್ನಲಾಗಿದೆ.
ಇದಲ್ಲದೆ ಹುಣಸೂರು, ಚಾಮರಾಜನಗರದ ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲೂ ವ್ಯಕ್ತಿಗಳ ಗೆಲುವಿನ ಅಂತರದ ಮೇಲೆ ಹಣ ಜೂಜಿಗೆ ಕಟ್ಟಲಾಗಿದೆ, ತುಮಕೂರಿನಲ್ಲಿ ಬೆಳೆದ ಬೆಳೆಯನ್ನು ಬೆಟ್ಟಿಂಗ್ ಕಟ್ಟಲಾಗಿದ್ದರೆ ಕೊರಟಗೆರೆಯಲ್ಲಿ ಬೈಕಗಳನ್ನು ಬೆಟ್ಟಿಂಗ್ ಕಟ್ಟಲಾಗಿದೆ ಎನ್ನಲಾಗುತ್ತಿದೆ.












Click it and Unblock the Notifications