ಕೊರೊನಾದಿಂದ ಮೃತರಾದ ಅನಾಥರಿಗೆ ಪಿಂಡ ಪ್ರದಾನ ಮಾಡಿದ ಆರ್. ಅಶೋಕ್!
ಬೆಂಗಳೂರು, ಅ. 04: ಕೊರೊನಾ ವೈರಸ್ ಸೃಷ್ಟಿಸಿದ್ದ ಆತಂಕವೇ ಹಾಗಿತ್ತು. ಸ್ವತಃ ಪ್ರಧಾನಿ ಮೋದಿ ಅವರೆ ಮೊದಲು ಜೀವ ಆಮೇಲೆ ಜೀವನ ಎಂಬ ಹೇಳಿಕೆ ನೀಡಿದ್ದರು. ಅದು ವೈರಸ್ ಸೃಷ್ಟಿಸಿದ್ದ ಭೀಕರತೆಗೆ ಸಾಕ್ಷಿಯಾಗಿತ್ತು. ಮುಂದುವರೆದ ದೇಶಗಳೇ ಕೋವಿಡ್ ಹೊಡೆತಕ್ಕೆ ಹೈರಾಣಾಗಿದ್ದವು. ಹೀಗಾಗಿ ದಾರಿಯಲ್ಲಿ ಬಿದ್ದು ಸತ್ತವರೆಷ್ಟೋ? ಕೊರೊನಾ ಹುಟ್ಟಿಸಿದ್ದ ಭಯದಿಂದಾಗಿ ಸೋಂಕಿನಿಂದ ಆಸ್ಪತ್ರೆಯಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರವನ್ನೂ ಕೆಲವು ಕುಟುಂಬಸ್ಥರು ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ವಿವಿಧ ಶವಾಗಾರಗಳಲ್ಲಿ ಅಲ್ಲಿ ಕೆಲಸ ನಿರ್ವಹಿಸುವವರೇ ಮಾಡಿ ಮುಗಿಸಿದ್ದರು.
ಬಳಿಕ ಮೃತರ ಚಿತಾಭಸ್ಮ ಹಾಗೂ ಅಸ್ಥಿಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ವಿಸರ್ಜಿಸಿದ್ದರು. ಸರ್ಕಾರದ ವತಿಯಿಂದ ಮೃತರ ಅಂತ್ಯೋತ್ತರ ಕ್ರಿಯೆಗಳನ್ನು ಸಾಮೂಹಿಕವಾಗಿ ನಡೆಸಲಾಗಿತ್ತು. ಅಸ್ಥಿ ವಿಸರ್ಜನೆ ಬಳಿಕ ಸೋಮವಾರ ಮೃತರಿಗೆ ಪಿಂಡ ಪ್ರದಾನವನ್ನು ಕಂದಾಯ ಸಚಿವ ಆರ್. ಅಶೋಕ್ ಮಾಡಿದ್ದಾರೆ.
ಕೊರೊನಾದಿಂದ ಮೃತರ ಆತ್ಮಗಳಿಗೆ ಮುಕ್ತಿ ಕಾರ್ಯ
ಕಂದಾಯ ಸಚಿವ ಆರ್.ಅಶೋಕ್ ಅವರು, ಪಿತೃ ಪಕ್ಷದ ನಿಮಿತ್ತ ಕೊರೊನಾದಿಂದ ಮೃತಪಟ್ಟವರ ಪಿಂಡ ಪ್ರಧಾನವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿರೋ ಗೋಸಾಯಿಘಾಟ್ನಲ್ಲಿ ಮಾಡಿದ್ದಾರೆ. ಆ ಮೂಲಕ ಆತ್ಮಗಳಿಗೆ ಮುಕ್ತಿ ಕಾರ್ಯವನ್ನು ಮಾಡಲಾಗಿದೆ. ಡಾ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮೃತರಿಗೆ ಹೆಡೆ ಪೂಜೆ, ಪಿಂಡ ಪ್ರಧಾನ. ವಿಷ್ಣು ಸಂಕಲ್ಪ, ಮೋಕ್ಷ ನಾರಾಯಣ ಬಲಿ ಪೂಜೆ, ಗಣಪತಿ ಪೂಜೆ, ಕಳಸ ಪೂಜೆ, ಪ್ರಾಯಶ್ಚಿತ್ತ ತಿಲಹೋಮ ಸೇರಿದಂತೆ ಹಲವು ಪೂಜೆಗಳನ್ನು ಮಾಡಲಾಗಿದೆ. ಪೂಜಾ ಕೈಂಕಾರ್ಯದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಅಶ್ವತಿ ಅವರು ಭಾಗಿಯಾಗಿದ್ದರು.
ಮೃತರಲ್ಲಿ ಯಾರೂ ಅನಾಥರಲ್ಲ:ಆರ್. ಅಶೋಕ್
ಪೂಜಾ ಕೈಂಕರ್ಯದ ಬಳಿಕ ಗೋಸಾಯ್ ಘಾಟ್ನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್ ಅವರು, "ಮೃತರಲ್ಲಿ ಯಾರೂ ಅನಾಥರಲ್ಲ, ಒಂದೊಂದು ಕಾರಣಕ್ಕೆ ಅಸ್ಥಿ ವಿಸರ್ಜನೆ ಮಾಡಿಲ್ಲ. ಹೀಗಾಗಿ ಸರ್ಕಾರವೇ ಅಂಥವರ ಅಸ್ಥಿ ವಿಸರ್ಜನೆ ಮಾಡಿತ್ತು. ಇಂದು ಪಿಂಡಪ್ರಧಾನ ಮಾಡಿದ್ದೇವೆ. ಆ ಮೂಲಕ ಮೃತರಿಗೆ ಸದ್ಗತಿ ದೊರಕಿಸುವ ಕಾರ್ಯ ಮಾಡಿದ್ದೇವೆ. ಪಿಂಡಪ್ರದಾನ ಮಾಡಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಸತ್ತವರು ಅನಾಥರಾಗಬಾರದೆಂದು ಸರ್ಕಾರ ಈ ಕೆಲಸ ಮಾಡಿದೆ" ಎಂದಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಮಾತನ್ನೂ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಪುಣ್ಯದ ಕಾರ್ಯದಿಂದ ಆತ್ಮತೃಪ್ತಿ ಸಿಕ್ಕಿದೆ
"ಪಿತೃಪಕ್ಷದ ಪೂಜಾ ಕಾರ್ಯಗಳನ್ನು ಪ್ರಚಾರ ಸಿಗಲಿ ಎಂದು ನಾನು ಮಾಡುತ್ತಿಲ್ಲ. ಈ ಪುಣ್ಯದ ಕಾರ್ಯದಿಂದ ನನಗೆ ಆತ್ಮತೃಪ್ತಿ ಸಿಕ್ಕಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಟ್ಟುನಿಟ್ಟಾಗಿ ಇದ್ದೇನೆ. ಮೂರು ದಿನ ಕಟ್ಟು ನಿಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ. ಇವತ್ತು ಅವಲಕ್ಕಿ ಬಿಟ್ಟು ಬೇರೆ ಏನೂ ಸೇವನೆ ಮಾಡಿಲ್ಲ. ಸತ್ತವರೆಲ್ಲರೂ ನಮ್ಮವರೇ ಎಂದು ಈ ಕಾರ್ಯ ಮಾಡುತ್ತಿದ್ದೇವೆ. ಈ ಪುಣ್ಯದ ಕೆಲಸಗಳಿಗೆ ಮಹಾತ್ಮ ಗಾಂಧೀಜಿ ನನಗೆ ಪ್ರೇರಣೆ. ಅವರಿಗೂ ಪೂಜೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ತಿಥಿ ಕಾರ್ಯದ ಬಳಿಕ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
Recommended Video
ಜೂನ್ 2ರಂದು ಅಸ್ಥಿ ವಿಸರ್ಜಿಸಿದ್ದ ಆರ್. ಅಶೋಕ್!
ಕಂದಾಯ ಸಚಿವ ಆರ್. ಅಶೋಕ್ ಅವರು ಸರ್ಕಾರದ ವತಿಯಿಂದ ಕಳೆದ ಜೂನ್ 2, 2021ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಲಕವಾಡಿಯಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಸ್ಥಿ ವಿಸರ್ಜನೆ ಮಾಡಿದ್ದರು. ಡಾ. ಭಾನುಪ್ರಕಾಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ಆ ಕಾರ್ಯ ಮಾಡಿದ್ದರು. ಅದಾದ ಬಳಿಕ ಇಂದು ಅ. 4ರಂದು ಪಿಂಡ ಪ್ರದಾನವನ್ನು ಮಾಡಿದ್ದಾರೆ. ಡಾ. ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಈ ವಿಧಿ ವಿಧಾನಗಳು ನಡೆದಿವೆ.