ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಯಡಿಯೂರಪ್ಪ ಹಣೆಬರಹ ನಿರ್ಧಾರ
ಬೆಂಗಳೂರು, ಮೇ 18 : ಯಡಿಯೂರಪ್ಪ ನೂತನ ಸರಕಾರದ ಹಣೆಬರಹ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ್ದರೆನ್ನಲಾದ ಎರಡು ಪತ್ರಗಳನ್ನು ಕೋರ್ಟಿಗೆ ಸಲ್ಲಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದು, ಯಡಿಯೂರಪ್ಪನವರಿಗೆ ಇಂದಿದೆ ಅಗ್ನಿಪರೀಕ್ಷೆ.
ತಮ್ಮ ಬಳಿ ಸರಕಾರ ರಚಿಸಲು ಬಹುಮತವಿದೆ (ಬೇಕಿರುವುದು 112 ಶಾಸಕರ ಬಲ) ಎಂದು ಯಡಿಯೂರಪ್ಪನವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಇಂದು ಸಾಬೀತು ಮಾಡಬೇಕಾಗಿದೆ. ಕೇಂದ್ರ ಮತ್ತು ಬಿಜೆಪಿಯನ್ನು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಅವರು ಪ್ರತಿನಿಧಿಸುತ್ತಿದ್ದಾರೆ.
ಬುಧವಾರ ಮಧ್ಯರಾತ್ರಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ, "ಯಡಿಯೂರಪ್ಪನವರ ಬಳಿ ಯಾವ ರೀತಿಯ (ಬಹುಮತಕ್ಕೆ ಬೇಕಾದ) ಸಾಕ್ಷ್ಯವಿದೆ ಎಂದು ನಮಗೆ ತಿಳಿದಿಲ್ಲ. ಏಕೈಕ ಅತೀದೊಡ್ಡ ಪಕ್ಷವನ್ನು ಸರಕಾರ ರಚಿಸಲು ರಾಜ್ಯಪಾಲರು ಕರೆಯುವುದು ನಿಯಮ. ಆದರೆ, ಕಾಂಗ್ರೆಸ್-ಜೆಡಿಎಸ್ ತಮ್ಮ ಬಳಿ 116 ಶಾಸಕರು ಇದ್ದಾರೆ ಎಂದು ಪತ್ರ ಸಲ್ಲಿಸಿದ ನಂತರ, ಯಡಿಯೂರಪ್ಪ ತಮ್ಮ ಬಳಿಯೂ ಬಹುಮತವಿದೆ ಎಂದು ಹೇಗೆ ಹೇಳುತ್ತಾರೆ?" ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು.
ನ್ಯಾಯಮೂರ್ತಿ ಎಕೆ ಸಿಕ್ರಿ, ನ್ಯಾಯಮೂರ್ತಿ ಎಸ್ಎ ಬೋಬ್ಡೆ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಇರುವ ವಿಭಾಗೀಯ ಪೀಠ ಇಂದು ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ. ಬಿಜೆಪಿಗೆ ವಿರುದ್ಧವಾಗಿ, ಕಾಂಗ್ರೆಸ್-ಜೆಡಿಎಸ್ ಪರವಾಗಿ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಗ್ವಿ ಮತ್ತು ದೇವದತ್ತ ಕಾಮತ್ ಅವರು ವಾದ ಮಂಡಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಮತ್ತೊಬ್ಬ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ನಿಂತಿದ್ದಾರೆ.

ಎರಡು ಪತ್ರಗಳ ಮಾಹಿತಿ ಬಹಿರಂಗ
ಇದೀಗ, ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಯಡಿಯೂರಪ್ಪನವರು ಸಲ್ಲಿಸಿರುವ ಎರಡು ಪತ್ರಗಳ ಮಾಹಿತಿ ಬಹಿರಂಗವಾಗಿದೆ. ಮತಎಣಿಕೆ ಮುಗಿದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಕ್ಷಣ ಮೇ 15ರಂದು ಸಂಜೆ ಯಡಿಯೂರಪ್ಪನವರು ಸಲ್ಲಿಸಿರುವ ಮೊದಲ ಪತ್ರದಲ್ಲಿ ತಮ್ಮ ಬಳಿ 104 ಶಾಸಕರ ಬೆಂಬಲವಿದ್ದು, ಸರಕಾರ ರಚಿಸಲು ಆಹ್ವಾನ ನೀಡಬೇಕಾಗಿ ಕೋರಿದ್ದರು. ಕೂಡಲೆ ಕಾರ್ಯತತ್ಪರರಾದ ಕಾಂಗ್ರೆಸ್ ಪಕ್ಷ ತಾವು ಜೆಡಿಎಸ್ ಗೆ ಬೆಂಬಲ ನೀಡುತ್ತಿದ್ದು, ಮೈತ್ರಿಕೂಟದ ಬಳಿ 116 ಶಾಸಕರ ಬೆಂಬಲವಿದೆ, ತಮಗೇ ಅವಕಾಶ ನೀಡಬೇಕೆಂದು ಹೋರಾಟ ಆರಂಭಿಸಿತ್ತು.

ಅತಿದೊಡ್ಡ ಪಕ್ಷವೆಂದು ಯಡಿಯೂರಪ್ಪಗೆ ಆಹ್ವಾನ
ಮೇ 16ರಂದು ಮತ್ತೆ ಸಲ್ಲಿಸಲಾದ ಎರಡನೇ ಪತ್ರದಲ್ಲಿಯೂ ಇದೇ ಸಂಗತಿಯನ್ನು ಯಡಿಯೂರಪ್ಪನವರು ಪ್ರಸ್ತಾಪಿಸಿದ್ದಾರೆ. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದ್ದರಿಂದ ತಮಗೇ ಮೊದಲ ಪ್ರಾಶಸ್ತ್ಯ ನೀಡಬೇಕು ಮತ್ತು ಬಹುಮತ ಸಾಬೀತುಪಡಿಸಲು ಆಹ್ವಾನ ನೀಡಬೇಕು ಎಂದು ಯಡಿಯೂರಪ್ಪನವರು ರಾಜ್ಯಪಾಲರನ್ನು ಕೋರಿದ್ದರು. ಇವೆರಡು ಪ್ರತ್ರಗಳನ್ನು ಸ್ವೀಕರಿಸಿದ್ದ ವಾಲಾ ಅವರು, ಎಸ್ಆರ್ ಬೊಮ್ಮಾಯಿ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿನಂತೆ, ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದ್ದರಿಂದ ಅದನ್ನು ಸರಕಾರ ರಚಿಸಲು ಆಹ್ವಾನ ನೀಡಿದ್ದರು.

ಸುಪ್ರೀಂನಿಂದ ಮಧ್ಯರಾತ್ರಿ ಐತಿಹಾಸಿಕ ವಿಚಾರಣೆ
ಅದೇ ದಿನ ಮಧ್ಯರಾತ್ರಿ ನಡೆಸಿದ ಐತಿಹಾಸಿಕ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳು, ರಾಜ್ಯಪಾಲರ ನಿರ್ಣಯಕ್ಕೆ ತಡೆಯೊಡ್ಡಲು ನಿರಾಕರಿಸಿದರು ಮತ್ತು ಆ ಎರಡೂ ಪತ್ರಗಳನ್ನು ಸಲ್ಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಆದೇಶಿಸಿದರು. ಅಲ್ಲದೆ, ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತುಪಡಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಿದ್ದು ಕೂಡ ಯಡಿಯೂರಪ್ಪನವರಿಗೆ ಪರಿಗಣನೆಯಾಗಬಹುದು. ಅಸಲಿಗೆ, ಯಡಿಯೂರಪ್ಪನವರಿಗೆ 7 ದಿನ ಕಾಲಾವಕಾಶ ಕೇಳಿದ್ದರೆ, ರಾಜ್ಯಪಾಲರು ಧಾರಾಳವಾಗಿ 15 ದಿನಗಳ ಕಾಲಾವಕಾಶ ನೀಡಿದ್ದರು.

ಪತ್ರಗಳ ಆಧಾರದ ಮೇಲೆ ತೀರ್ಪು ನೀಡಿದರೆ...
ಈಗ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಯಡಿಯೂರಪ್ಪನವರು ಸಲ್ಲಿಸಿರುವ ಎರಡು ಪತ್ರಗಳ ಆಧಾರದ ಮೇಲೆ ನ್ಯಾಯಮೂರ್ತಿಗಳು ತೀರ್ಪು ನೀಡಿದರೆ ಯಡಿಯೂರಪ್ಪನವರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಆದರೆ, ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡಿರುವುದನ್ನು ಪರಿಗಣಿಸಿದರೆ ಬೀಸೋದೊಣ್ಣೆ ತಪ್ಪಿದಂತೆ. ಸದ್ಯಕ್ಕಂತೂ, 104 ಬಲವಿರುವ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರನ್ನು ಸೆಳೆಯಲು ಅಥವಾ ತಮ್ಮನ್ನು ಬೆಂಬಲಿಸಲು ಭಾರೀ ಕಸರತ್ತು ನಡೆಸಿದೆ.












Click it and Unblock the Notifications