ರಾಜ್ಯದಲ್ಲಿ ಎಸ್ಸಿ,ಎಸ್ಟಿ, ಒಬಿಸಿ ಮೀಸಲು ಪರಿಶೀಲಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾರ್ಚ್ 30: ಹೊರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಜನರು ನಮ್ಮ ರಾಜ್ಯದವರಿಗೆ ದಕ್ಕಬೇಕಿರುವ ಮೀಸಲನ್ನು ಕಸಿದುಕೊಳ್ಳುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರ ನಡುವೆಯೇ ಹೊರ ರಾಜ್ಯ ಎಸ್ಸಿ,ಎಸ್ಟಿ ಮತ್ತು ಒಬಿಸಿಗಳು ರಾಜ್ಯ ಸರ್ಕಾರಿ ಉದ್ಯೋಗಳಲ್ಲಿ ಮೀಸಲು ಕಲ್ಪಿಸುವುದಕ್ಕೆ ನಿರ್ಬಂಧ ಹೇರಲು ಅಗತ್ಯ ತಿದ್ದುಪಡಿ ನಿಯಮ ರೂಪಿಸುವ ವಿಚಾರ ಪ್ರಸ್ತಾಪವಾಗಿದೆ.
ಆ ಕುರಿತು ಡಾ.ಎಚ್. ಕೃಷ್ಣ ರಾಮ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ, ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿದಾರರು ಈ ಕುರಿತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು. ಅರ್ಜಿದಾರರ ಮನವಿ ಕುರಿತು ಪರಿಶೀಲನೆ ನಡೆಸಿದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ನಿರ್ದೇಶಿಸಿದೆ.
ಕರ್ನಾಟಕಕ್ಕೆ ವಲಸೆ ಬಂದಿರುವ ಹೊರ ರಾಜ್ಯದ ಎಸ್ಸಿ-ಎಸ್ಟಿ ಮತ್ತು ಒಬಿಸಿ ಜನರಿಗೆ ರಾಜ್ಯ ಸರ್ಕಾರಿ ಉದ್ಯೋಗಳಲ್ಲಿ ಮೀಸಲು ಕಲ್ಪಿಸುವುದನ್ನು ನಿರ್ಬಂಧಿಸಲು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕದಲ್ಲಿ ಮೀಸಲು) ಕಾಯ್ದೆ-1990 ಮತ್ತು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಅಧಿನಿಯಮಗಳು-1997ಕ್ಕೆ ಅಗತ್ಯ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ರಾಜ್ಯದವರಿಗೆ ಅನ್ಯಾಯ:
ಅರ್ಜಿದಾರರ ಪರ ವಕೀಲರು, ಹೊರ ರಾಜ್ಯದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಜನ ಕರ್ನಾಟಕಕ್ಕೆ ವಸಲೆ ಬಂದು ಇಲ್ಲಿಯೇ ನೆಲೆಯೂರಿದ್ದಾರೆ. ಅವರು ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ಕೋಟಾದಡಿ ರಾಜ್ಯ ಸರ್ಕಾರಿ ಉದ್ಯೋಗ ಗಿಟ್ಟಿಸುತ್ತಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಎಸ್ಸಿ-ಎಸ್ಟಿ ಹಾಗೂ ಒಬಿಸಿಯವರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಆಗಿಲ್ಲ ತಿದ್ದುಪಡಿ:
ಭಾರತದ ರಾಷ್ಟ್ರಪತಿಗಳು 1950ರಲ್ಲಿ ಆದೇಶ ಹೊರಡಿಸಿ, ಒಂದು ರಾಜ್ಯದ ಎಸ್ಸಿ-ಎಸ್ಟಿ ಮತ್ತು ಒಬಿಸಿಗೆ ಸೇರಿದ ಜನ ಮತ್ತೊಂದು ರಾಜ್ಯದಲ್ಲಿ ಮೀಸಲು ಸೌಲಭ್ಯ ಪಡೆಯುವಂತಿಲ್ಲವೆಂದು ಆದೇಶಿಸಿದ್ದಾರೆ. ಕೇಂದ್ರ ಸರ್ಕಾರವು 1977ರಲ್ಲಿ ಎಲ್ಲಾ ರಾಜ್ಯಗಳಿಗೆ ಸ್ಪಷ್ಟ ಆದೇಶ ಮಾಡಿದೆ. ಅದರ ಅನುಸಾರ ಗೋವಾ, ಮಹಾರಾಷ್ಟ್ರ ಮತ್ತು ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳು ನಿಯಮ ರೂಪಿಸಿ ಜಾರಿಗೆ ತಂದಿವೆ.
ಆದರೆ, ಕರ್ನಾಟಕದಲ್ಲಿ ಜನಿಸಿರುವ ಎಸ್ಸಿ-ಎಸ್ಟಿ ಮತ್ತು ಒಬಿಸಿಯವರಿಗೆ ಮಾತ್ರ ಸರ್ಕಾರಿ ಉದ್ಯೋಗದಲ್ಲಿ ಆಯಾ ಜಾತಿಯಲ್ಲಿ ಮೀಸಲು ಕಲ್ಪಿಸುವ ಸಂಬಂಧ ಯಾವುದೇ ನಿಮಮ ರಾಜ್ಯದಲ್ಲಿ ಇಲ್ಲ. ಆದ್ದರಿಂದ ಈ ಕುರಿತು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಕಾಯ್ದೆ-1990 ಮತ್ತು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಅಧಿನಿಯಮಗಳು-1997ಕ್ಕೆ ಅಗತ್ಯ ತಿದ್ದುಪಡಿ ನಿಯಮ ರೂಪಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.